ಕ್ಯಾನ್ಸರ್ ಚಿಕಿತ್ಸೆ ನಡುವೆಯೂ ಸಿನಿಮಾ ಕೆಲಸಗಳಿಗೆ ಮರಳಿದ ನಟ ಸಂಜಯ್ ದತ್
ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೊದಲ ಹಂತದ ಚಿಕಿತ್ಸೆ ಪೂರ್ಣಗೊಳಿಸಿರುವ ನಟ ಸಂಜಯ್ ದತ್ ಇದೀಗ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ನಿನ್ನೆ (ಸೆಪ್ಟಂಬರ್ 7) ಮುಂಬೈನ ಯಶ್ ರಾಜ್ ಫಿಲ್ಮ್ಸ್ ಸ್ಟುಡಿಯೋಗೆ ತೆರಳಿದ್ದ ಸಂಜಯ್ ದತ್ ಚಿತ್ರೀಕರಣ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ.
Recommended Video
ಸದ್ಯ ಸಂಜಯ್ 'ಶಂಶೇರ' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ರಣಬೀರ್ ಕಪೂರ್ ಅಭಿನಯದ ಈ ಸಿನಿಮಾದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಬಳಿಕ ಸಿನಿಮಾ ಚಿತ್ರೀಕರಣ ಪ್ರಾರಂಭಿಸಲಿದ್ದು, ಸಂಜಯ್ ದತ್ ಸಹ ಭಾಗಿಯಾಗಲಿದ್ದಾರೆ. ಮುಂದೆ ಓದಿ...

'ಶಂಶೇರ' ಚಿತ್ರೀಕರಣದಲ್ಲಿ ಸಂಜಯ್ ದತ್
ಎರಡು ದಿನಗಳ ಕಾಲ ಸಂಜಯ್ ದತ್ ಶಂಶೇರ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದಾರೆ. ಬಳಿಕ ಮತ್ತೆ ಮುಂದಿನ ಹಂತದ ಚಿಕಿತ್ಸೆಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಜಯ್ ದತ್ ಬಳಿ ಸಾಕಷ್ಟು ಸಿನಿಮಾಗಳಿವೆ. ಕನ್ನಡದ ಕೆಜಿಎಫ್-2 ಸಿನಿಮಾದ ಚಿತ್ರೀಕರಣ ಸಹ ಬಾಕಿ ಇದೆ. ಚಿಕಿತ್ಸೆಯ ನಡುವೆಯೂ ಚಿತ್ರೀಕರಣದಲ್ಲಿ ತೊಡಗಿಕೊಂಡು ಸಿನಿಮಾ ಕೆಲಸಗಳನ್ನು ಮುಗಿಸುತ್ತಿದ್ದಾರೆ.

4ನೇ ಹಂತದ ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂಜಯ್ ದತ್
ಆಗಸ್ಟ್ ತಿಂಗಳಲ್ಲಿ ನಟ ಸಂಜಯ್ ದತ್ ಗೆ ಕ್ಯಾನ್ಸರ್ ಇರುವುದು ಬಹಿರಂಗವಾಗಿದೆ. ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂಜಯ್ ದತ್ ಗೆ 4ನೇ ಹಂತದ ಶ್ವಾಸಕೋಶ ಕ್ಯಾನ್ಸರ್ ಇದೆ ಎನ್ನುವ ಆಘಾತಕಾರಿ ವಿಚಾರ ಗೊತ್ತಾಗಿದೆ. ಸಂಜಯ್ ದತ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು, ಸಿನಿ ಗಣ್ಯರು ಪ್ರಾರ್ಥನೆ ಮಾಡುತ್ತಿದ್ದಾರೆ.

ವಿದೇಶಕ್ಕೆ ತೆರಳುತ್ತಾರಾ ಸಂಜಯ್?
ಸಂಜಯ್ ದತ್ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಮೊದಲ ಹಂತದ ಚಿಕಿತ್ಸೆಯನ್ನು ಮುಂಬೈನಲ್ಲಿ ಮುಗಿಸಿರುವ ಸಂಜಯ್, ಕೋವಿಡ್-19 ಪರಿಸ್ಥಿತಿಯ ಆಧಾರದ ಮೇಲೆ ಮುಂದಿನ ಹಂತದ ಚಿಕಿತ್ಸೆ ಎಲ್ಲಿ ಎನ್ನುವುದು ನಿರ್ಧಾರವಾಗಲಿದೆ ಎಂದು ಸಂಜಯ್ ದತ್ ಪತ್ನಿ ಮಾನ್ಯತಾ ದತ್ ತಿಳಿಸಿದ್ದಾರೆ.

'ಸಡಕ್-2' ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಸಂಜಯ್
ಸಂಜಯ್ ದತ್ ಇತ್ತೀಚಿಗೆ ಸಡಕ್-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸಂಜಯ್ ದತ್ ಅಭಿನಯದ ಸಡಕ್ ಸಿನಿಮಾದ ಪಾರ್ಟ್-2 ಇದಾಗಿದೆ. ಒಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಿದ್ದು ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ನೆಪೋಟಿಸಂ ಕಾರಣಕ್ಕೆ ಸಿನಿಮಾಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಮಹೇಶ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾದಲ್ಲಿ ಅಲಿಯಾ ಭಟ್, ಪೂಜಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Click it and Unblock the Notifications











