Breaking: ಆರ್ಯನ್ ಖಾನ್ಗೆ ಜಾಮೀನು ನಿರಾಕರಣೆ, ಹೈಕೋರ್ಟ್ಗೆ ಅಪೀಲು
ಡ್ರಗ್ಸ್ ಪ್ರಕರಣದಲ್ಲಿ ಎನ್ಸಿಬಿ (ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ)ಯಿಂದ ಬಂಧನಕ್ಕೆ ಒಳಗಾಗಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಇಂದು ಜಾಮೀನು ದೊರಕಲಿಲ್ಲ.
ಅಕ್ಟೋಬರ್ 03 ರಿಂದಲೂ ಬಂಧನದಲ್ಲಿರುವ ಆರ್ಯನ್ ಖಾನ್ರ ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಎನ್ಡಿಪಿಎಸ್ ವಿಶೇಷ ನ್ಯಾಯಾಲಯವು ಇಂದಿಗೆ ಮುಂದೂಡಿತ್ತು. ಇಂದು ಆದೇಶ ಹೊರಡಿಸಿದ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ.

ವಿಶೇಷ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದ ಬಳಿಕ ನ್ಯಾಯಾಲಯದ ಹೊರಗಡೆ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿರುವ ಆರ್ಯನ್ ಪರ ವಕೀಲ ಅಮಿತ್ ದೇಸಾಯಿ, ''ನಾವುಗಳು ಬಾಂಬೆ ಹೈಕೋರ್ಟ್ ಮೊರೆ ಹೋಗುತ್ತೇವೆ'' ಎಂದಿದ್ದಾರೆ.ಅಕ್ಟೋಬರ್ 14 ರಂದು ಜಾಮೀನು ಅರ್ಜಿಯ ವಿಚಾರಣೆ ನಡೆದು, ''ಆರ್ಯನ್ ಖಾನ್ ಕೆಲ ವರ್ಷಗಳಿಂದಲೂ ಡ್ರಗ್ಸ್ ಸೇವಿಸುತ್ತಿದ್ದ ಎಂಬುದು ಆತನ ವಾಟ್ಸ್ಆಪ್ ಚಾಟ್ ಮಾಹಿತಿಯಿಂದ ತಿಳಿದುಬಂದಿದೆ'' ಎಂದು ಎನ್ಸಿಬಿ ಪರ ವಕೀಲರು ಹೇಳಿದ್ದರು.
''ಆರ್ಯನ್ ಖಾನ್ ಮತ್ತು ಅರ್ಬಾಜ್ ಸೇಠ್ ಇಬ್ಬರೂ ಡ್ರಗ್ಸ್ ಸೇವಿಸುತ್ತಿದ್ದು, ಅವರಿಗೆ ಡ್ರಗ್ ಪೆಡ್ಲರ್ಗಳಾದ ಅಚಿತ್ ಕುಮಾರ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಅಷ್ಟೇ ಅಲ್ಲದೆ ವಿದೇಶಿ ಪ್ರಜೆಗಳೊಂದಿಗೂ ಸಂಪರ್ಕದಲ್ಲಿದ್ದು, ಅಲ್ಲಿಂದ ದೊಡ್ಡ ಮೊತ್ತದ ಮಾದಕ ವಸ್ತುಗಳನ್ನು ತರಿಸಿಕೊಳ್ಳಲು ಯತ್ನಿಸಿದ್ದಾರೆ. ಹಾಗಾಗಿ ಎನ್ಸಿಬಿಯು ಈ ಪ್ರಕರಣದ ತನಿಖೆ ನಡೆಸಲು ವಿದೇಶಾಂಗ ಸಚಿವಾಲಯದ ಸಹಕಾರ ಕೋರಿದ್ದು, ದೆಹಲಿಯ ನಮ್ಮ ಮುಖ್ಯ ಕಾರ್ಯಾಲಯಕ್ಕೂ ಅರ್ಜಿ ಸಲ್ಲಿಸಿದ್ದೇವೆ'' ಎಂದು ಎನ್ಸಿಬಿ ಪರ ವಕೀಲ ಅನಿಲ್ ಸಿಂಗ್ ವಾದಿಸಿದ್ದರು.
ಆರ್ಯನ್ ಖಾನ್ ಪರ ವಾದಿಸಿದ್ದ ವಕೀಲ ಅಮಿತ್ ದೇಸಾಯಿ, ''ಆರ್ಯನ್ ಬಳಿ ಡ್ರಗ್ಸ್ ಖರೀದಿಗೆ ಹಣ ಇರಲಿಲ್ಲ. ಆತನ ಬ್ಯಾಂಕ್ ದಾಖಲೆ ಪರಿಶೀಲಿಸಬಹುದು. ಆರ್ಯನ್ ಬಳಿ ಡ್ರಗ್ಸ್ ಸಹ ದೊರೆತಿಲ್ಲ. ಅಲ್ಲದೆ ಎನ್ಸಿಬಿ ಕ್ರೂಸ್ ಶಿಪ್ ಮೇಲೆ ದಾಳಿ ನಡೆಸಿದಾಗ ಕ್ರೂಸ್ ಶಿಪ್ನಲ್ಲಿ ಆರ್ಯನ್ ಖಾನ್ ಇರಲಿಲ್ಲ'' ಎಂದರು. ''ಈಗಿನ ಜನರೇಷನ್ನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಭಿನ್ನ ರೀತಿಯಲ್ಲಿ ಕಮ್ಯುನಿಕೇಷನ್ ಮಾಡುತ್ತಾರೆ. ಇಂಗ್ಲೆಂಡ್ ಇಂಗ್ಲೀಷ್ ಅಲ್ಲ ಬದಲಿಗೆ ಏನೇನೋ ಸಂಜ್ಞೆಗಳನ್ನು, ಇಮೋಜಿಗಳನ್ನು, ಅಲ್ಫಾಬೆಟ್ಗಳನ್ನು ಬಳಸುತ್ತಾರೆ. ಅವಕ್ಕೆಲ್ಲ ನಿಮ್ಮದೇ ಆದ ಅರ್ಥ ಕಲ್ಪಿಸಿಕೊಂಡು ಅದು ಡ್ರಗ್ಸ್ ಬಗ್ಗೆ ಮಾಡಿರುವ ಚರ್ಚೆ ಎನ್ನಲು ಸಾಧ್ಯವಿಲ್ಲ'' ಎಂದು ಎನ್ಸಿಬಿ ನೀಡಿದ ವಾಟ್ಸ್ಆಪ್ ಚಾಟ್ ಸಾಕ್ಷ್ಯಕ್ಕೆ ತಕರಾರು ಸಲ್ಲಿಸಿದ್ದರು.
ವಾದ ವಿವಾದ ಆಲಿಸಿದ್ದ ಎನ್ಡಿಪಿಎಸ್ ವಿಶೇಷ ನ್ಯಾಯಾಲಯವು ಆದೇಶವನ್ನು ಇಂದಿಗೆ ಮುಂದೂಡಿತ್ತು, ಆದೇಶಕ್ಕಾಗಿ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು, ನ್ಯಾಯಾಲಯದ ಆವರಣವು ಕುತೂಹಲಿಗಳಿಂದ ತುಂಬಿತ್ತು. ನ್ಯಾಯಾಧೀಶ ವಿವಿ ಪಾಟೀಲ್ ಜಾಮೀನು ನಿರಾಕರಿಸಲಾಗಿದೆ ಎಂದು ಒಂದು ಸಾಲಿನ ಆದೇಶ ಓದಿ ಹೇಳಿದರು.
ಜಾಮೀನು ನಿರಾಕರಣೆಯಿಂದ ನಿರಾಶೆಗೆ ಒಳಗಾದ ಆರ್ಯನ್ ಖಾನ್ ಪರ ವಕೀಲರ ತಂಡ ನ್ಯಾಯಾಲಯದ ಹೊರಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿ, ತಾವುಗಳು ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿದರು.


Click it and Unblock the Notifications











