ಅಕ್ಷತಾ ಪಾಂಡವಪುರ
ಅಕ್ಷತಾ ಪಾಂಡವಪುರ ಜೀವನಚರಿತ್ರೆ
ಅಕ್ಷತಾ ಪಾಂಡವಪುರ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ರಂಗಭೂಮಿ ಕಲಾವಿದೆ. ಮೂಲತಃ ಮೇಲುಕೋಟೆ ಹತ್ತಿರವಿರುವ ಪಾಂಡವಪುರದವರಾದ ಇವ,ರು ಮೈಸೂರಿನ ಜೆ.ಎಸ್.ಎಸ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮುಗಿಸಿದರು. ನಂತರ ಸಾಗರ ತಾಲೂಕಿನ ನೀನಾಸಂನಲ್ಲಿ ರಂಗ ತರಬೇತಿ ಪಡೆದ ನಂತರ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಮೂರು ವರ್ಷಗಳ ಕಾಲ ರಂಗಭೂಮಿಯ ಆಗು-ಹೋಗುಗಳನ್ನು ಅರಿತುಕೊಂಡರು.
ರಂಗಭೂಮಿ
ತರಬೇತಿ ನಂತರ ರಂಗಭೂಮಿಯಲ್ಲಿ ತೊಡಗಿಸಿಕೊಂಡ ಇವರು, ಹಲವಾರು ನಾಟಕಗಳಲ್ಲಿ ಅಭಿನಯಿಸಿದರು. ಆದರೆ, ಅಕ್ಷತಾಗೆ ಹೆಸರು ತಂದುಕೊಟ್ಟಿದ್ದು ಮಾತ್ರ ಏಕಾಂಕ ನಾಟಕ `ಒಬ್ಬಳು'. ಇದು ಸುಮಾರು 30ಕ್ಕೂ ಹೆಚ್ಚು ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಂಡಿತು. ದೇಶ-ವಿದೇಶಗಳಲ್ಲೂ ನಾಟಕ ಮಾಡುವ ಬಯಕೆಯ ಇವರು, `ದಿ ಚಾನಲ್ ಥೇಟರ್ಸ್' ಎನ್ನುವ ರಂಗ ತಂಡವನ್ನು ಕಟ್ಟಿದ್ದಾರೆ. ತಮ್ಮೂರಿನ ಪ್ರತಿ ರೈತ ಕುಟುಂಬದ ಒಬ್ಬರು ರಂಗಭೂಮಿಗೆ ಬರಬೇಕೆನ್ನುವ ಆಸೆಯಿರುವ ಅಕ್ಷತಾ ಪಾಂಡವಪುರದ ಕೆ.ಎಸ್.ಪುಟ್ಟಣ್ಣಯ್ಯನವರನ್ನು ತಮ್ಮ ಮಾನಸ ಗುರುಗಳಂತೆ ಭಾವಿಸುತ್ತಾರೆ.
ಸಿನಿಮಾ
ರಂಗಭೂಮಿಯ ಜೊತೆ ಚಲನಚಿತ್ರಗಳಲ್ಲಿಯೂ ನಟಿಸಲು ಆರಂಭಿಸಿದ ಅಕ್ಷತಾ, `ಪಲ್ಲಟ' ಚಿತ್ರದಲ್ಲಿನ ನಟನೆಗೆ 'ರಾಜ್ಯ ಪ್ರಶಸ್ತಿ' ಪಡೆದರು. ನಂತರ ಆ ಒಂದು ನೋಟು, ಪಿಂಕಿ ಏಲ್ಲಿ, ಕೋಳಿ ಎಸ್ರು ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಮದುವೆ
ಅಕ್ಷತಾ ಅವರು ಪ್ರಸನ್ನ ಸಾಗರ್ ಎಂಬುವವರನ್ನು ಮದುವೆಯಾಗಿದ್ದಾರೆ. ಇವರು ಮೊದಲು ಹರಿಯಾಣ ಪೊಲೀಸ್ ಅಕಾಡೆಮಿಯಲ್ಲಿ ಡಿವೈಎಸ್ಪಿಗಳಿಗೆ ಥೀಯೆಟರ್ ಪಾಠ ಮಾಡುತ್ತಿದ್ದರು. ನಂತರ ಕೆಲ ಶೋಗಳ ಟೆಕ್ನಿಕಲ್ ಡಿಸೈನರ್ ಆಗಿ ದೇಶ-ವಿದೇಶಗಳನ್ನು ಕೂಡ ಸುತ್ತಿದ್ದಾರೆ. ಪ್ರಸ್ತುತ ರಂಗಭೂಮಿಯಲ್ಲಿ ನಾಟಕಗಳ ನಿರ್ದೇಶಕರಾಗಿ ಮತ್ತು ಬರಹಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಿಗ್ಬಾಸ್ ಸೀಸನ್ 6
ಅಕ್ಷತಾ ಅವರು ಕಿಚ್ಚ ಸುದೀಪ್ ನಿರೂಪಣೆಯ ಬಿಗ್ಬಾಸ್ ಕನ್ನಡ ಸೀಸನ್ 6ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.