ಬಿ.ಸಿ.ಗೌರಿಶಂಕರ್
ಬಿ.ಸಿ.ಗೌರಿಶಂಕರ್ ಜೀವನಚರಿತ್ರೆ
ಬಿ.ಸಿ.ಗೌರಿಶಂಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಸಿದ್ಧ ಚಲನಚಿತ್ರ ಛಾಯಾಗ್ರಾಹಕ, ನಿರ್ದೇಶಕ ಮತ್ತು ಸಂಭಾಷಣೆಕಾರ. 90 ರ ದಶಕದ ಜನಪ್ರಿಯ ಸಿನಿಮ್ಯಾಟೋಗ್ರಾಫರ್ ಆಗಿದ್ದ ಗೌರಿಶಂಕರ್ ತಮ್ಮ ಛಾಯಾಗ್ರಹಣದಿಂದ ಆರು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ಇವರು 1950, ಫೆಬ್ರವರಿ 26 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಪತ್ನಿ ಮಮತಾ ರಾವ್ ಮತ್ತು ಪುತ್ರಿ ರಕ್ಷಿತಾ ಪ್ರೇಮ್ ನಟಿಯರಾಗಿ ಜನಪ್ರಿಯರಾಗಿದ್ದಾರೆ. ತಂದೆ ಚೆನ್ನಬಸಪ್ಪ ಮತ್ತು ತಾಯಿ ಶಶಿಮುಖಿ. ಇವರು ಜಯಚಾಮರಾಜೆಂದ್ರ ಪಾಲಿಟೆಕ್ನಿಕ್ ಕಾಲೇಜಿನಿಂದ ಚಲನಚಿತ್ರ ಛಾಯಾಗ್ರಹಣದಲ್ಲಿ ಡಿಪ್ಲೋಮಾ ಪಡೆದು ಕಂಠೀರವ ಸ್ಟುಡಿಯೋದಲ್ಲಿ ಕೆಲಕಾಲ ಕಾರ್ಯ ಮಾಡಿದ್ದರು.
1977 ರಲ್ಲಿ ತೆರೆಕಂಡ `ಅನರೂಪ' ಚಿತ್ರದಿಂದ ಗೌರಿಶಂಕರ್ ಸಿನಿಪ್ರವೇಶ ಮಾಡಿದರು. ನಂತರ ಶಂಕರನಾಗ್ ರ `ಮಿಂಚಿನ ಓಟ',ರಾಜಕುಮಾರ್ರ `ಧ್ರುವತಾರೆ' ,ಶಿವರಾಜಕುಮಾರ್ ರ `ಜನುಮದ ಜೋಡಿ' ಮುಂತಾದ ಚಿತ್ರಗಳ ಮೂಲಕ ಪ್ರಸಿದ್ಧರಾದರು.
`ಓಂ' ಚಿತ್ರದಲ್ಲಿ ಭೂಗತ ಜಗತ್ತನ್ನು ಪಿಲ್ಟರ್ ಗಳ ಮೂಲಕ ಸೆರೆಹಿಡಿದಿದ್ದರು. 1987 ರಲ್ಲಿ ತೆರೆಕಂಡ ಕಮಲ್ ಹಾಸನ್ ರ ಮೂಕಿ ಚಿತ್ರ `ಪುಷ್ಪಕ ವಿಮಾನ'ವನ್ನು ಅದ್ಭುತವಾಗಿ ಸೆರೆಹಿಡಿದಿದ್ದರು. ಜನುಮದ ಜೋಡಿ ಚಿತ್ರದ `ಮಣಿ ಮಣಿ' ಹಾಡನ್ನು ಸೂರ್ಯಾಸ್ತ ಸಮಯದಲ್ಲಿ ನೈಸರ್ಗಿಕವಾಗಿ ಸರೆಹಿಡಿಯಲು ಒಂಭತ್ತು ದಿನ ಶೂಟ್ ಮಾಡಿದ್ದರು. `ಮೈಸೂರು ಮಲ್ಲಿಗೆ' ಚಿತ್ರದಲ್ಲಿ ದೀಪದ ಬೆಳಕಿನಲ್ಲಿ ಸುಧಾರಾಣಿಯರ `ದೀಪವು ನಿನ್ನದೇ ಗಾಳಿಯೂ ನಿನ್ನದೇ' ಹಾಡಿಗೆ ಮತ್ತೊಮ್ಮೆ ರಾಜ್ಯ ಪ್ರಶಸ್ತಿ ಪಡೆದಿದ್ದರು.