ಹೊನವಳ್ಳಿ ಕೃಷ್ಣ ಜೀವನಚರಿತ್ರೆ
ಹೊನ್ನವಳ್ಳಿ ಕೃಷ್ಣ ಕನ್ನಡ ಚಿತ್ರರಂಗದಲ್ಲಿ ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳಿಗೆ ಜೀವ ತುಂಬಿ ಕನ್ನಡ ಸಿನಿರಸಿಕರನ್ನು ರಂಜಿಸಿರುವ ಅದ್ಭುತ ನಟ.
ಡಾ.ರಾಜಕುಮಾರ್ ರವರ ಜೊತೆ 45 ವರ್ಷ ಅವಿನಾಭಾವ ಒಡನಾಟ ಹೊಂದಿದ್ದ ಇವರು ಅರಕಲಗೂಡು ತಾಲೂಕಿನ ಹೊನ್ನವಳ್ಳಿಯವರು.ಡಾ.ರಾಜಕುಮಾರ್ ರವರನ್ನು ಭೇಟಿಯಾಗಬೇಕೆಂಬ ಬಯಕೆಯಿಂದ 1969 ರಲ್ಲಿ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದರು. ಕಷ್ಟಪಟ್ಟು ರಾಜ್ ಮನೆ ಹುಡುಕಿದಾಗ ಇವರಿಗೆ ನಿರಾಶೆ ಕಾದಿತ್ತು. ಆಗ ರಾಜ್ ಕುಟುಂಬ ಮದ್ರಾಸ್ ಗೆ ಶಿಫ್ಟ್ ಆಗಿತ್ತು.ಕಪಾಲಿ ಚಿತ್ರಮಂದಿರದ ಹತ್ತಿರ ಇರುವ ಶ್ರೀರಾಮ ಪುಸ್ತಕ ಮಳಿಗೆಯಲ್ಲಿ 6 ಆಣೆ ಕೊಟ್ಟು ಫಿಲ್ಮ್ ಡೈರಿ ಕೊಂಡರು. ಆ ಡೈರಿಯಲ್ಲಿ ಎಲ್ಲಾ ಕನ್ನಡ ಕಲಾವಿದ ಮತ್ತು ಚಿತ್ರರಂಗದವರ ವಿಳಾಸ ಮತ್ತು ದೂರವಾಣಿ ಸಂಖ್ಯೆವಿರುತ್ತಿತ್ತು. ನಂತರ ಕೆಲದಿನಗಳಲ್ಲೇ ಮದ್ರಾಸ್ ಗೆ ಹೋದ ಇವರು ಅಲ್ಲಿಯ ಹೋಟೆಲ್ ಒಂದರಲ್ಲಿ ಕ್ಲೀನರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಸಲ್ಪ ದಿನಗಳಲ್ಲೇ ರಾಜ್ ಮನೆ ವಿಳಾಸ ಪತ್ತೆ ಮಾಡಿದ ಇವರು ರಾಜಕುಮಾರ್ ಅವರನ್ನು ಪ್ರಥಮ ಬಾರಿಗೆ ನೋಡಿದ್ದು ಗೋಲ್ಡನ್ ಸ್ಟುಡಿಯೋದಲ್ಲಿ. ನೋಡಿದ ತಕ್ಷಣ ರಾಜ್ ಕಾಲಿಗೆ ಎರಗಿದ ಇವರನ್ನು ಎತ್ತಿ ಯಾರು ಎತ್ತ ಎಂದು ಅಣ್ಣಾವ್ರು ಕೇಳಿದಾಗ ಆನಂದದಿಂದ ಕೃಷ್ಣರಿಗೆ ಮಾತೇ ಹೊರಡಲಿಲ್ಲ. ನಂತರ ರಾಜ್ ಕುಟುಂಬಕ್ಕೆ ತುಂಬಾ ಹತ್ತಿರವಾದರು. ಈ ಸಮಯದಲ್ಲಿಯೇ ಚಿತ್ರಗಳಲ್ಲಿ ನಟನೆ ಶುರುಮಾಡಿದರು.ಚಿಕ್ಕ ಪುನೀತ್ ನಟನೆ ಮಾಡಲು ಎಷ್ಟೋ ಸಲ ಹೊನ್ನವಳ್ಳಿ ಕೃಷ್ಣರು ನಟಿಸಿ ತೋರಿಸಬೇಕಿತ್ತು. ಹೊನ್ನವಳ್ಳಿಯವರು ಸಾವಿರ ಚಿತ್ರದ ಗಡಿ ದಾಟಿದಾಗ ಪುನೀತ್ ರಾಜಕುಮಾರ್ ರವರೇ ಸನ್ಮಾನಿಸಿದ್ದು ವಿಶೇಷ.