ಪಂಡರಿ ಬಾಯಿ
ಪಂಡರಿ ಬಾಯಿ ಜೀವನಚರಿತ್ರೆ
ಕನ್ನಡ ಚಿತ್ರರಂಗದ ಮೊದಲ ಯಶಸ್ವಿ ನಾಯಕಿ ಎಂದೇ ಪರಿಗಣಿಸಲ್ಪಡುವ ನಟಿ ಪಂಡಿರಿಬಾಯಿ ಕನ್ನಡ,ಹಿಂದಿ,ತಮಿಳು ಮತ್ತು ತೆಲಗು ಸೇರಿ ಸುಮಾರು 1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕದ ಕರಾವಳಿ ಪ್ರದೇಶ ಭಟ್ಕಳದಲ್ಲಿ ಜನಿಸಿದ ಇವರು ತಂದೆಯ ಪ್ರಭಾವದಿಂದ ಕೇವಲ ಹತ್ತು ವರ್ಷದವರಿದ್ದಾಗಲೆ ಹರಿಕಥೆ ಕಾರ್ಯಕ್ರಮಗಳನ್ನು ನೀಡಲು ಆರಂಭಿಸಿದರು.
ಪೌರಾಣಿಕ ನಾಟಕಗಳ ಅಭಿನಯದಲ್ಲಿ ನಿರತರಾಗಿದ್ದ ಪಂಡರಿಬಾಯಿಯವರು 1943 ರಲ್ಲಿ ತೆರೆಕಂಡ ಪೀಟಿಲು ಚೌಡಯ್ಯ ನಿರ್ಮಾಣದ `ವಾಣಿ' ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸಿದರು. ಇದೇ ಚಿತ್ರದ ಮೂಲಕವೇ ಹಾಸ್ಯನಟ ಮುಸುರಿ ಕೃಷ್ಣಮೂರ್ತಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು. ಡಾ.ರಾಜಕುಮಾರ್ರ ಮೊದಲ ಚಿತ್ರ `ಬೇಡರ ಕಣ್ಣಪ್ಪ' ಮತ್ತು ತಮಿಳು ನಟ ಶಿವಾಜಿ ಗಣೇಶನ್ರ ಮೊದಲ ಚಿತ್ರ `ಪರಶಕ್ತಿ'ಯಲ್ಲಿ ನಾಯಕಿಯಾಗಿದ್ದು ನಟಿಸಿದ್ದು ಪಂಡರಿಬಾಯಿಯವರು. ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲ ನಟಿಸಿದ ಪಂಡರಿಬಾಯಿ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ನಟರೊಂದಿಗೂ ಪರದೆ ಹಂಚಿಕೊಂಡಿದ್ದಾರೆ. ಇವರ ಸಹೋದರಿ ಮೈನಾವತಿ ಕೂಡ ನಟಿಯಾಗಿ ಪ್ರಸಿದ್ಧಿಯಾಗಿದ್ದಾರೆ. ಮೇರು ನಟರಾದ ಡಾ.ರಾಜಕುಮಾರ್,ತಮಿಳಿನ ಎಂಜಿಆರ್ ಮತ್ತು ತೆಲುಗಿನ ಎನ್ಟಿಆರ್ ರೊಂದಿಗೆ ನಾಯಕನಟಿಯಾಗಿ ಮತ್ತು ತಾಯಿಯಾಗಿ ನಟಿಸಿದ್ದು ವಿಶೇಷ. ಪಂಡರಿಬಾಯಿಯವರು ನಟಿಸಿದ ಕೊನೆಯ ಚಿತ್ರ ಶಶಿಕುಮಾರ್ ನಟನೆಯ `ಬಾರೋ ನನ್ನ ಮುದ್ದಿನ ಕೃಷ್ಣ' . ಪಿ.ಎಚ್.ರಾಮಾರಾವ್ರನ್ನು ವಿವಾಹವಾಗಿದ್ದ ಪಂಡಿರಿಬಾಯಿಯವರು 2003 ರಲ್ಲಿ ಚೆನ್ನೈನಲ್ಲಿ ವಿಧಿವಶರಾದರು.