ಪವಿತ್ರಾ ಲೋಕೇಶ್ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಾಯಕ ನಟಿ. ಇವರು ಚಿತ್ರನಟ ಮೈಸೂರು ಲೋಕೇಶ್ರವರ ಪುತ್ರಿ. ಇವರ ಸಹೋದರ ಆದಿ ಲೋಕೇಶ್ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯಾಗಿದ್ದಾರೆ.
ಮೈಸೂರಿನಲ್ಲಿ ಜನಿಸಿದ ಪವಿತ್ರಾ ಹತ್ತನೇ ತರಗತಿಯಲ್ಲಿ 80 ಕ್ಕೂ ಹೆಚ್ಚು ಪ್ರತಿಶತ ಅಂಕ ಗಳಿಸಿ ನಾಗರಿಕ ಸೇವಾ ಪರೀಕ್ಷೆ ಸಿದ್ಧತೆ ನೆಡೆಸುತ್ತಿದ್ದರು. ನಂತರ ವಾಣಿಜ್ಯ ವಿಷಯದಲ್ಲಿ ಪದವಿ ಪಡೆದು ಒಂದು ಬಾರಿ ನಾಗರಿಕ ಸೇವಾ ಪರೀಕ್ಷೆಯನ್ನು ಎದುರಿಸಿದರು. ಆದರೆ ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗಲಿಲ್ಲ.ಆಗ ತಂದೆಯ ನಿಧನದಿಂದ ಮನೆಯ ಆರ್ಥಿಕ ಸ್ಥಿತಿಯು ಸರಿಯಾಗಿ ಇರದಿದ್ದ ಕಾರಣ ನಟನೆಗೆ ಇಳಿದರು.
ರೆಬೆಲ್ ಸ್ಟಾರ್ ಅಂಬರೀಶ್ ಸಲಹೆಯಂತೆ ಚಿತ್ರರಂಗಕ್ಕೆ ಬಂದ ಇವರು ಅಂಬರೀಶ್ ಚಿತ್ರ `ಮಿಸ್ಟರ್ ಅಭಿಷೇಕ್' ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದರು. ನಂತರ ಕೆಲವು ಚಿಕ್ಕ ಪಾತ್ರಗಳಲ್ಲಿ ನಟಿಸಿದರೂ ಮನ್ನಣೆ ಸಿಗದಿದ್ದಾಗ ಒಂದು ಕಂಪನಿಯಲ್ಲಿ HR ಕನಸಲ್ಟಿಂಗ್ ಆಗಿ ಕೆಲಸ ಮಾಡಿದರು.
ಇವರು ಸಾಧಾರಣ ಯುವತಿಯರಿಗಿಂತ ಸ್ವಲ್ಪ ಎತ್ತರವಿದ್ದರಿಂದ ಇವರಿಗೆ ನಾಯಕನಟಿಯಾಗಿ ನಟಿಸುವ ಅವಕಾಶಗಳು ಸಿಗಲಿಲ್ಲ. ಆದ್ದರಿಂದ ತಮಗೇ ಸಿಕ್ಕ ಎಲ್ಲಾ ಚಿತ್ರಗಳಲ್ಲಿ ನಟಿಸಿದರು.
ಇವರಿಗೆ ಮನ್ನಣೆ ತಂದುಕೊಟ್ಟ ಚಿತ್ರ ಗಿರೀಶ್ ಕಾಸರವಳ್ಳಿ ನಿರ್ದೇಶನದ `ನಾಯಿ ನೆರಳು'. ಈ ಚಿತ್ರದ ನಟನೆಗಾಗಿ ಕರ್ನಾಟಕ ರಾಜ್ಯ ಅತ್ತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
ಕಿರುತೆರೆಯಲ್ಲೂ ಸಕ್ರಿಯವಾಗಿರುವ ಇವರು `ಜೀವನಮುಖಿ',`ಗುಪ್ತಗಾಮಿನಿ' ಮುಂತಾದ ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ನಟ ಮತ್ತು ರಂಗಕರ್ಮಿ ಸುಚೇಂದ್ರ ಪ್ರಸಾದ್ರನ್ನು ಮದುವೆಯಾಗಿರುವ ಪವಿತ್ರಾರವರಿಗೆ ಇಬ್ಬರು ಮಕ್ಕಳಿದ್ದಾರೆ.