ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ. ಇವರು 1980ರ ಜೂನ್ 4ರಂದು ಬೆಂಗಳೂರಿನಲ್ಲಿ ನೆಲೆಸಿದ ತೆಲುಗು ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಸುಭಾಶ್ ಹಾಗೂ ತಾಯಿ ಭಾರತಿ. ಇವರು ಮೂಲತಃ ಆಂಧ್ರಪ್ರದೇಶದ ಮಡಕಸಿರಾ ಬಳಿಯ ನೀಲಕಂಠಪುರಂ ಗ್ರಾಮದವರು. ನೀಲ್ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
ವೃತ್ತಿಜೀವನ
ಪ್ರಶಾಂತ್ ನೀಲ್ 2014ರಲ್ಲಿ ತೆರೆಕಂಡ ಶ್ರೀಮುರುಳಿ ಅಭಿನಯದ `ಉಗ್ರಂ' ಚಿತ್ರದಿಂದ ನಿರ್ದೇಶಕರಾಗಿ ಕನ್ನಡ ಸಿನಿಮಾರಂಗ ಪ್ರವೇಶಿಸಿದರು. ಸಿನಿಮಾ ನಿರ್ದೇಶನದಲ್ಲಿ ತರಬೇತಿ ಪಡೆದ ನೀಲ್, ತಮ್ಮ ಸಹೋದರ ಸಂಬಂಧಿಯಾದ ರೋರಿಂಗ್ ಸ್ಟಾರ್ ಶ್ರೀಮುರಳಿಯ ಹಾವಭಾವವನ್ನು ಅಧ್ಯಯನ ಮಾಡಿ, ಅವರಿಗಾಗಿಯೇ ಉಗ್ರಂ ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದ್ದರು. ಈ ಚಿತ್ರ 2014ರ ಅತಿದೊಡ್ಡ ಬ್ಲಾಕ್ಬಸ್ಟರ್ ಹಿಟ್ ಆಯಿತು.
ಕೆಜಿಎಫ್
2018 ರಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿದ 'ಕೆಜಿಎಫ್' ಸಿನಿಮಾ ನಿರ್ದೇಶನ ಮಾಡಿದರು. ಈ ಪ್ಯಾನ್ ಇಂಡಿಯಾ ಸಿನಿಮಾ ಕನ್ನಡ ಚಿತ್ರರಂಗ ದಿಕ್ಕನ್ನೇ ಬದಲಾಯಿಸಿತು. ಆನಂತರ 2022ರಲ್ಲಿ ಕೆಜಿಎಫ್ ಚಾಪ್ಟರ್ 2 ನಿರ್ದೇಶನ ಮಾಡಿದರು. ಈ ಚಿತ್ರ ಇಡೀ ಇಂಡಿಯನ್ ಬಾಕ್ಸಾಫೀಸ್ ನಡುಗುವಂತೆ ಮಾಡಿತ್ತು. ಆನಂತ ತೆಲುಗು ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದ ನೀಲ್, ಪ್ರಭಾಸ್ ಅವರಿಗೆ ಸಲಾರ್ ಸಿನಿಮಾ ನಿರ್ದೇಶನ ಮಾಡಿದರು.
ಮದುವೆ: ಪ್ರಶಾಂತ್ ನೀಲ್ 2010ರಲ್ಲಿ ನಿಖಿತಾ ರೆಡ್ಡಿ ಎಂಬುವವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.