ಸೌಂದರ್ಯ ಎಂದೇ ಖ್ಯಾತಿಯಾಗಿರುವ ಸೌಮ್ಯ ಸತ್ಯನಾರಾಯಣ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಮಿಂಚಿದ್ದ ಪಂಚಭಾಷಾ ನಟಿ ಮತ್ತು ನಿರ್ಮಾಪಕಿ. ತಮ್ಮ ಸ್ನಿಗ್ಧ ಸೌಂದರ್ಯ ಮತ್ತು ಪ್ರಬುದ್ಧ ನಟನೆಯಿಂದ ದಕ್ಷಿಣ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಸೌಂದರ್ಯ, ತಮ್ಮ 27ನೇ ವಯಸ್ಸಿನಲ್ಲಿ ವಿಧಿವಶವಾಗಿದ್ದು ದುರಂತ. ಇವರು ಕನ್ನಡದಲ್ಲಿ ನಿರ್ಮಾಣ ಮಾಡಿದ್ದ `ದ್ವೀಪ' ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದಿದ್ದು ಗಮನಾರ್ಹ.
ಸೌಂದರ್ಯ 1976ರಲ್ಲಿ ಕೋಲಾರದ ಮುಳಬಾಗಿಲಿನಲ್ಲಿ ಜನಿಸಿದರು. ತಂದೆ ಉದ್ಯಮಿ ಮತ್ತು ಚಿತ್ರ ನಿರ್ಮಾಪಕ ಕೆ.ಎಸ್.ಸತ್ಯನಾರಾಯಣ. ಚಿತ್ರರಂಗದಲ್ಲಿನ ಆಸಕ್ತಿಯಿಂದ ಎಂಬಿಬಿಎಸ್ ವಿಧ್ಯಾಭ್ಯಾಸಕ್ಕೆ ವಿದಾಯ ಹೇಳಿ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. 1992ರಲ್ಲಿ ತೆರೆಕಂಡ ಕನ್ನಡದ `ಗಂಧರ್ವ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ ತೆಲಗು ಚಿತ್ರರಂಗಕ್ಕೆ ಹೋದ ಸೌಂದರ್ಯ, ಅಲ್ಲಿ ಅಭೂತಪೂರ್ವ ಯಶಸ್ಸು ಕಂಡು `ಆಧುನಿಕ ಮಹಾನಟಿ ಸಾವಿತ್ರಿ' ಎಂದೇ ಖ್ಯಾತಿ ಪಡೆದರು.
ದಕ್ಷಿಣ ಚಿತ್ರರಂಗದ ಎಲ್ಲಾ ಟಾಪ್ ನಿರ್ದೇಶಕರೊಂದಿಗೆ ಮತ್ತು ನಟರೊಂದಿಗೆ ಕಾರ್ಯನಿರ್ವಹಿಸಿದ ಸೌಂದರ್ಯ ತಮ್ಮ 12 ವರ್ಷದ ಸಿನಿಪಯಣದಲ್ಲಿ ಸುಮಾರು 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರದಿಂದ ಸಿನಿರಂಗ ಪ್ರವೇಶ ಮಾಡಿದ್ದ ಸೌಂದರ್ಯರ ಕೊನೆಯ ಚಿತ್ರವೂ ಕನ್ನಡದ ಆಪ್ತಮಿತ್ರ ಆಗಿದ್ದು ಕಾಕಾತಾಳೀಯ.
ತಮ್ಮ ಬಾಲ್ಯದ ಗೆಳೆಯ ಮತ್ತು ಸಾಫ್ಟವೇರ್ ಇಂಜಿನಿಯರ್ ಜಿ.ಎಸ್.ರಘುರನ್ನು ವಿವಾಹವಾಗಿದ್ದ ಸೌಂದರ್ಯ, 2004ರಲ್ಲಿ ಭಾರತೀಯ ಜನತಾ ಪಕ್ಷ ಸೇರಿದ್ದರು. ಸಹನಟಿ ಮತ್ತು ಗೆಳತಿ ವಿಜಯಶಾಂತಿಯೊಂದಿಗೆ ಸೇರಿ ಆಂಧ್ರದಲ್ಲಿ ಲಾಲಕೃಷ್ಣ ಅಡ್ವಾಣಿಯವರ ಎರಡು ಅಂದೋಲನಗಳನ್ನು ಆಯೋಜಿಸಿದ್ದರು. 2004 ಏಪ್ರಿಲ್ 17ರಂದು ಆಂಧ್ರದ ಕರೀಂನಗರಕ್ಕೆ ಪ್ರಚಾರಕ್ಕೆಂದು ತಮ್ಮ ಸಹೋದರ ಅಮರನಾಥರೊಂದಿಗೆ ತಮ್ಮ ಬೆಂಗಳೂರು ಮನೆಯಿಂದ ಹೊರಟಾಗ ವಿಮಾನ ದುರಂತದಲ್ಲಿ ಮಡಿದರು. ಆಗ ಸೌಂದರ್ಯ ಐದು ತಿಂಗಳ ಗರ್ಭಿಣಿಯಾಗಿದ್ದರು.
ತಮ್ಮ ನಿಧನದ ಮುಂಚೆ ಅನಾಥ ಮಕ್ಕಳಿಗೆ ಮೂರು ಶಾಲೆಗಳನ್ನು ಸ್ಥಾಪಿಸಿದ್ದರು. ಇವರ ನಿಧನದ ನಂತರ ಇವರ ತಾಯಿ ಮಂಜುಳಾರವರು `ಅಮರಸೌಂದರ್ಯ ವಿದ್ಯಾಲಯ' ಹೆಸರಿನಿಂದ ಬೆಂಗಳೂರಿನಲ್ಲಿ ಕೆಲವು ಶಾಲೆ, ಶಿಕ್ಷಣ ಸಂಸ್ಥೆ ಮತ್ತು ಅನಾಥಾಶ್ರಮಗಳನ್ನು ತೆರೆದಿದ್ದಾರೆ.