ವಶಿಷ್ಠ ಸಿಂಹ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಯುವನಟ. ತಮ್ಮ ಕಂಚಿನ ಕಂಠ ,ತೀಕ್ಷ್ಣ ನೋಟ, ಕಡಕ್ ಅಭಿನಯದಿಂದ ಗುರುತಿಸಿಕೊಂಡಿರುವ ವಶಿಷ್ಠ ಅವರ ಬಾಲ್ಯ ಕಳೆದಿದ್ದು ಮೈಸೂರಿನಲ್ಲಿ. ನಂತರ ನಾದಬ್ರಹ್ಮ ಹಂಸಲೇಖರ ಜೊತೆಗೆ ಕೆಲಸ ಮಾಡುವ ಅವಕಾಶ ದೊರೆತಾಗ ಮೈಸೂರಿನಿಂದ ಬೆಂಗಳೂರಿಗೆ ಬಂದ ಇವರು ಬಸವನಗುಡಿಯ ನ್ಯಾಷನಲ್ ಕಾಲೇಜಿನಿಂದ ಪದವಿ ಪಡೆಯುತ್ತಾರೆ.
ಕೆಲಕಾಲ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡಿದ ಇವರು ನಂತರ ಕೆಲಸಕ್ಕೆ ಪೂರ್ಣವಿದಾಯ ಹೇಳಿ ನಟನೆಯ ಕಡೆಗೆ ಮುಖ ಮಾಡುತ್ತಾರೆ. `ರಾಜಾಹುಲಿ' ಚಿತ್ರದ ಜಗ್ಗ ಪಾತ್ರದಿಂದ ಗಮನಸೆಳೆದ ವಶಿಷ್ಠ ನಂತರ `ರುದ್ರತಾಂಡವ'ದಲ್ಲಿ ನಟಿಸುತ್ತಾರೆ. 2016 ರಲ್ಲಿ ತೆರೆಕಂಡ `ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲ್ಮ್ ಫೇರ್ ಮತ್ತು ಸೈಮಾ ಪ್ರಶಸ್ತಿಗೆ ಭಾಜನರಾಗುತ್ತಾರೆ.
ಮೂಲತಃ ಗಾಯಕರಾಗಬೇಕೆಂದು ಬೆಂಗಳೂರಿಗೆ ಬಂದ ಇವರು ಚಿತ್ರನಟರಾದರೂ `ಕಿರಿಕ್ ಪಾರ್ಟಿ',`ದಯವಿಟ್ಟು ಗಮನಿಸಿ',`6ನೇ ಮೈಲಿ' ಮುಂತಾದ ಚಿತ್ರಗಳ ಗೀತೆಗಳಿಗೆ ಧ್ವನಿಯಾಗಿದ್ದಾರೆ.
ವಿವಾಹ: ವಸಿಷ್ಠ ಸಿಂಹ 2022ರ ಡಿಸೆಂಬರ್ 3ರಂದು ನಟಿ ಹರಿಪ್ರಿಯಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2023ರ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇವರಿಬ್ಬರು ಮದುವೆಯಾಗಿದ್ದರು.