ಚಿರು ಹೃದಯಾಘಾತಕ್ಕೆ ಕಾರಣಗಳೇನು?: ಜೋಪಾನವಾಗಿರಲಿ ನಿಮ್ಮ ಹೃದಯ ಎನ್ನುತ್ತಾರೆ ವೈದ್ಯರು
ಹಿಂದಿನ ದಿನವಷ್ಟೇ ಖುಷಿ ಖುಷಿಯಾಗಿದ್ದ ಚಿರಂಜೀವಿ ಸರ್ಜಾ ಮಧ್ಯಾಹ್ನದ ವೇಳೆಗೆ ಇಲ್ಲ ಎಂಬ ಸಂಗತಿ ಪ್ರತಿಯೊಬ್ಬರನ್ನೂ ದಿಗ್ಭ್ರಮೆಗೊಳಿಸಿತ್ತು. ಆಸ್ಪತ್ರೆಗೆ ಸಾಗಿಸುವಾಗಲೇ ಚಿರಂಜೀವಿ ಅವರ ಹೃದಯ ಬಡಿತ ನಿಂತುಹೋಗಿತ್ತು. ವೈದ್ಯರು ಸತತ ಪ್ರಯತ್ನ ಮಾಡಿದರೂ ಚಿರಂಜೀವಿ ಅವರಿಗಾಗಿ ಹೃದಯ ಮತ್ತೆ ಮಿಡಿಯಲಿಲ್ಲ. 'ತೀವ್ರ ಹೃದಯಾಘಾತ'ದ ಪರಿಣಾಮವಿದು.
Recommended Video
ಕೊನೆಯುಸಿರೆಳೆಯುವ ಎರಡು ಮೂರು ದಿನ ಮೊದಲು ಚಿರಂಜೀವಿ ಸರ್ಜಾ ಅವರಿಗೆ ಬ್ರೈನ್ ಸ್ಟ್ರೋಕ್ ಆಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದ ವೈದ್ಯರು ತೊಂದರೆಯಿಲ್ಲ ಎಂದು ಮನೆಗೆ ಕಳುಹಿಸಿದ್ದರು ಎನ್ನಲಾಗಿದೆ. ಈ ಘಟನೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವೈದ್ಯರ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಚಿರಂಜೀವಿ ಸರ್ಜಾ ಅವರನ್ನು ಆಸ್ಪತ್ರೆಯಲ್ಲಿಯೇ ಇರಿಸಿಕೊಳ್ಳಬೇಕಿತ್ತು. ಅವರನ್ನು ಡಿಸ್ಚಾರ್ಜ್ ಮಾಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ಆದರೆ, ಹಾರ್ಟ್ ಅಟ್ಯಾಕ್ಅನ್ನು ಗುರುತಿಸುವುದು ಅಷ್ಟು ಸುಲಭವಲ್ಲ. ಅವರು ಆಸ್ಪತ್ರೆಯಲ್ಲಿ ಇದ್ದಾಗಲೂ ಇಂತಹ ಸನ್ನಿವೇಶದಲ್ಲಿ ಉಳಿಸಿಕೊಳ್ಳುವುದು ಸಾಧ್ಯವಾಗಲಾರದು ಎನ್ನುತ್ತಾರೆ ವೈದ್ಯರು.
ಹೃದಯಾಘಾತ ಹೇಗೆ ಮತ್ತು ಯಾಕೆ ಸಂಭವಿಸುತ್ತದೆ. ಅದೂ ಇಷ್ಟು ಚಿಕ್ಕ ವಯಸ್ಸಿನಲ್ಲಿ ಹೇಗೆ ಜೀವ ತೆಗೆಯುತ್ತದೆ? ಮುಂತಾದ ಪ್ರಶ್ನೆಗಳು ಚಿರಂಜೀವಿ ಸಾವಿನ ಸುತ್ತ ಹುಟ್ಟಿಕೊಂಡಿವೆ. ಅವುಗಳಿಗೆ ಹೃದಯ ತಜ್ಞರೇ ನೀಡಿದ ವಿವರಣೆ ಇಲ್ಲಿದೆ. ಮುಂದೆ ಓದಿ...

ಕಿರಿಯರಲ್ಲಿ ಹೆಚ್ಚುತ್ತಿದೆ ಹೃದಯಾಘಾತ
'ನಾಲ್ಕೈದು ವರ್ಷಗಳಿಂದ ಇತ್ತೀಚೆಗೆ ತುಂಬಾ ಜನ ಯಂಗ್ ಪೇಷೆಂಟ್ಗಳು ಹಾರ್ಟ್ ಅಟ್ಯಾಕ್ ಕಾರಣದಿಂದ ಆಸ್ಪತ್ರೆಗೆ ಬರುತ್ತಿದ್ದಾರೆ. ನಮ್ಮ ಆಸ್ಪತ್ರೆಗೇ ವಾರಕ್ಕೆ ಕನಿಷ್ಠ ಒಬ್ಬರಾದರೂ ಬರುತ್ತಾರೆ. ಅವರೆಲ್ಲರೂ 35-45 ವರ್ಷದ ವಯಸ್ಸಿನವರು. ಅದು ಇತ್ತೀಚೆಗೆ ಬೆಳವಣಿಗೆ. ಒತ್ತಡ, ದೈಹಿಕ ಚಟುವಟಿಕೆ ಇಲ್ಲದಿರುವಿಕೆ ಹೆಚ್ಚಾಗಿ ಹೃದಯಾಘಾತಕ್ಕೆ ಕಾರಣ. ಇದಕ್ಕೆ ವಂಶಪಾರಂಪರ್ಯವಾಗಿ ಬರುವ ಕಾರಣವೂ ಇರುತ್ತದೆ. ಹಾಗೆಯೇ ದೂಮಪಾನ ಮತ್ತು ಬೇಗನೆ ಶುರುವಾಗುವ ಮಧುಮೇಹ ಕೂಡ ಕಾರಣ. ಇದಿಷ್ಟೂ ರೀಸನ್ ನಮಗೆ ಗೊತ್ತಿರುವುದು ಎನ್ನುತ್ತಾರೆ ಸಪ್ತಗಿರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದಯ ತಜ್ಞ ಡಾ. ನಿಸರ್ಗ.

ಸಡನ್ ಹಾರ್ಟ್ ಅಟ್ಯಾಕ್ ಆಗೋದೇಕೆ?
ಮ್ಯಾಸೀವ್ ಹಾರ್ಟ್ ಅಟ್ಯಾಕ್ಗೆ (ತೀವ್ರ ಹೃದಯಾಘಾತ) ಕಾರಣ ಇದು- ಹೃದಯದಲ್ಲಿ ಎಲ್ಎಂಸಿಎ, ಅಂದರೆ ಲೆಫ್ಟ್ ಮೇನ್ ಕೊರೊನರಿ ಆರ್ಟರಿ. ನಾವು ಬೈಪಾಸ್ ಸರ್ಜರಿ ಮಾಡುವುದು ಟ್ರಿಪಲ್ ವೆಸಲ್ ಡಿಸೀಸ್ಗೆ. ಅದರಲ್ಲಿ ಬ್ಲಾಕ್ ಆಗಿದ್ದಾಗ ಬೈಪಾಸ್ ಸರ್ಜರಿ ಮಾಡುತ್ತೇವೆ. ಕೆಲವೊಮ್ಮೆ ಎಲ್ಎಂಸಿಎ ಬ್ಲಾಕ್ ಆಗಿದ್ದು ಅದರ ಮೇಲೆ ಕ್ಲಾಟ್ ಆದರೆ ಸಡನ್ ಆಗಿ ಮ್ಯಾಸೀವ್ ಹಾರ್ಟ್ ಅಟ್ಯಾಕ್ ಆಗುತ್ತದೆ. ಇಡೀ ಹಾರ್ಟ್ಗೆ ರಕ್ತ ಪೂರೈಕೆ ಇದ್ದಕ್ಕಿದ್ದಂತೆ ಸ್ಥಗಿತಗೊಳ್ಳುವುದರಿಂದ ಹೃದಯ ತಕ್ಷಣ ನಿಂತುಹೋಗುತ್ತದೆ. ಅದನ್ನು ಎಲ್ಎಂಸಿಎ ಡಿಸೀಸ್ ಮ್ಯಾಸೀವ್ ಹಾರ್ಟ್ ಅಟ್ಯಾಕ್ ಎನ್ನುತ್ತಾರೆ ಎಂದು ಅವರು ವಿವರಿಸಿದರು.

ಕ್ಲಾಟ್ ಫಾರ್ಮೇಷನ್ ಆಗಿ ಹೃದಯಾಘಾತ
ಕೆಲವರಿಗೆ ಸಿಂಪ್ಟಮ್ಸ್ ಇರೊಲ್ಲ. ಇನ್ನು ಕೆಲವರಿಗೆ ಬ್ಲಾಕೇಜ್ ಇರೊಲ್ಲ. ಕ್ಲಾಟ್ ಫಾರ್ಮೇಷನ್ ಆಗಿರುತ್ತದೆ. ಅದನ್ನು ಎಂಡೋಥೀನಿಯಲ್ ಡಿಸ್ಫಂಕ್ಷನ್ ಎನ್ನುತ್ತೇವೆ. ದೂಮಪಾನಿಗಳಿಗೆ ಅದು ಸಾಮಾನ್ಯ. ಹೃದಯದ ಒಳಗಿನ ರಕ್ತನಾಳಗಳಲ್ಲಿನ ಎಂಡೋಥೀಲಿಯಂ ಒರಟಾಗುತ್ತಾ ಬರುತ್ತದೆ. ಅದು ಆದಾಗ ಕ್ಲಾಟ್ ಫಾರ್ಮೇಷನ್ ಸಾಧ್ಯತೆ ಹೆಚ್ಚು. ಕ್ಲಾಟ್ ಫಾರ್ಮೇಷನ್ ಆದಾಗ ಅರೆಸ್ಟ್ ಆಗುತ್ತದೆ.

ಕುಟುಂಬದ ಇತಿಹಾಸ
ಇವುಗಳಿಗೆ ಕಾರಣ ಸ್ಮೋಕಿಂಗ್, ಜೆನೆಟಿಕ್ ಹಿಸ್ಟರಿ ಇರಬಹುದು. ಫ್ಯಾಮಿಲಿ ಹಿಸ್ಟರಿ ಇದ್ದಾಗ ನಾವೇ ಸಾಮಾನ್ಯವಾಗಿ ಆಂಜಿಯೋಗ್ರಾಮ್ಗೆ ಸಲಹೆ ನೀಡುತ್ತೇವೆ. ಲಕ್ಷಣ ಇಲ್ಲದೆ ಇದ್ದಾಗಲೂ ಆಂಜಿಯೋಗ್ರಾಂ ಮಾಡಬೇಕು. ಏಕೆಂದರೆ ಅಷ್ಟು ಸಾಧ್ಯತೆ ಇರುತ್ತದೆ. ಕುಟುಂಬದ ಇತಿಹಾಸವಿದ್ದರೆ ಬಹಳ ಸಾಮಾನ್ಯ (ಚಿರಂಜೀವಿ ಸರ್ಜಾ ಸೋದರ ಮಾವ ಕಿಶೋರ್ ಸರ್ಜಾ 50ನೇ ವಯಸ್ಸಿಗೆ ಹೃದಯಾಘಾತದಿಂದ ತೀರಿಕೊಂಡಿದ್ದರು). ನಾನೇ ಕೆಲವೊಂದು ಕುಟುಂಬದ ಎರಡು ಮೂರು ಜನರಿಗೆ ಶಸ್ತ್ರಚಿಕಿತ್ಸೆ ಮಾಡಿದ್ದೇನೆ, ಒಂದೇ ಕುಟುಂಬದ ಅಣ್ಣ ತಮ್ಮಂದಿರಿಗೆ. ಅದೂ ಬಹಳ ಸಣ್ಣ ವಯಸ್ಸಿನವರಿಗೆ ಎನ್ನುತ್ತಾರೆ ಅವರು.

ಮಕ್ಕಳನ್ನು ಅಪ್ಪ ಅಮ್ಮ ಕರೆದುಕೊಂಡು ಬರುವಂತಾಗಿದೆ
ಬೈಪಾಸ್ ಸರ್ಜರಿ ಬರೋರೆಲ್ಲರೂ 60 ವರ್ಷದವರು. ನಾನು ಅತಿ ಕಡಿಮೆ ಎಂದರೆ 30 ವರ್ಷದ ವಯಸ್ಸಿನವರಿಗೂ ಬೈಪಾಸ್ ಮಾಡಿದ್ದೇನೆ. ಅಷ್ಟು ಕಡಿಮೆ ವಯಸ್ಸಿನವರೂ ಇದ್ದಾರೆ. 30 ವರ್ಷಕ್ಕೇ ಅವರಿಗೆ ಹೃದಯಾಘಾತ ಆಗುವ ಸಾಧ್ಯತೆ ಇತ್ತು. ಅದು ಗೊತ್ತಾಗಿ ಮೊದಲೇ ಬೈಪಾಸ್ಗೆ ಒಳಗಾಗಿ ಸರಿ ಮಾಡಿಕೊಂಡರು. 35-40ಕ್ಕೆ ಹೃದಯಾಘಾತ ಆಗಿದೆ ಎಂದರೆ ನಮಗೆ ಈಗಂತೂ ಆಶ್ಚರ್ಯವೇ ಆಗುತ್ತಿಲ್ಲ. ಅದು ಬಹಳ ಸಾಮಾನ್ಯವಾಗಿದೆ.
26 ವರ್ಷದ ವ್ಯಕ್ತಿ ಬಹಳ ಸ್ಥೂಲ ಕಾಯದವರು. ಸೀವಿಯರ್ ಹಾರ್ಟ್ ಅಟ್ಯಾಕ್ ಆಗಿತ್ತು. ಅವರಿಗೆ ಚಿಕಿತ್ಸೆ ಮಾಡಿದ್ದೆ. ಈ ರೀತಿಯ ಘಟನೆಗಳನ್ನು ಈ ಹಿಂದೆ ಕೇಳಿಯೇ ಇರಲಿಲ್ಲ. ಈ ಮುಂಚೆ ಮಕ್ಕಳು ತಂದೆ ತಾಯಿಯರನ್ನು ಕರೆದುಕೊಂಡು ಬರುತ್ತಿದ್ದರು. ಈಗ ತಂದೆ ತಾಯಿ ಮಕ್ಕಳನ್ನು ಕರೆದು ತರುವಂತೆ ಪರಿಸ್ಥಿತಿ ಬದಲಾಗಿದೆ.

ಚಿರಂಜೀವಿ ವಿಚಾರದಲ್ಲಿ ಏನಾಗಿರಬಹುದು?
ಚಿರಂಜೀವಿ ಸರ್ಜಾ ಅವರಲ್ಲಿ ಪಿಟ್ಸ್ ಕಾಣಿಸಿಕೊಂಡಿತ್ತು ಎನ್ನಲಾಗಿದೆ. ಹೀಗೆ ಆಗಿದ್ದರೆ ಮಿದುಳಿನಲ್ಲಿ ಕ್ಲಾಟ್ ಆಗಿದೆ ಎಂದರ್ಥ. ಅದನ್ನು ಗಂಭೀರವಾಗಿ ತಪಾಸಣೆ ಮಾಡಬೇಕಿತ್ತು. ಚೆಸ್ಟ್ ಪೇಯ್ನ್ ಇತ್ತೂ ಎಂದು ಕೇಳಿದ್ದೆ. ಹೆಚ್ಚಿನ ಸಂದರ್ಭದಲ್ಲಿ ಜನರು ಗ್ಯಾಸ್ಟ್ರೈಟಿಸ್ ಎಂದು ಆಂಟೈಸಿಡ್ ತಗೊಂಡು ಮನೆಯಲ್ಲಿ ಟ್ರೀಟ್ ಮಾಡಿಕೊಳ್ಳುತ್ತಾರೆ. ಆದರೆ ಅದರಿಂದ ಉಪಯೋಗ ಆಗೊಲ್ಲ. ಅದು ಕೆಲವೊಮ್ಮೆ ಕಾರ್ಡಿಯಾಕ್ ಸಿಂಪ್ಟಮ್ ಆಗಿರುತ್ತದೆ. ಎರಡೂ ಕಾಮನ್ ಸಿಂಪ್ಟಮ್ಸ್. ಹೊಟ್ಟೆಯ ಮೇಲ್ಭಾಗ, ಎದೆಯ ಕೆಳಭಾಗದ ನೋವು ಈ ಎರಡೂ ಕಾರಣಕ್ಕೂ ಬರುತ್ತದೆ.

ಜಿಮ್ನಿಂದ ಆಗಿರಲಾರದು
ಯಾವುದೇ ಗ್ಯಾಸ್ಟ್ರೈಟಿಸ್ ನೋವನ್ನು ನಿರ್ಲಕ್ಷಿಸಬಾರದು. ಎಂಡೋಸ್ಕೋಪಿ ಮಾಡಿಸಬೇಕು ಇಲ್ಲವೇ ಕಾರ್ಡಿಯಾಕಿನೇಷನ್ ಮಾಡಬೇಕು. ಮತ್ತೆ ಬಾಡಿ ಮಾಸ್ ಇಂಡೆಕ್ಸ್ ಎಲ್ಲ ನೋಡಬೇಕು. ಸರ್ಜಾ ದೇಹ ಕೂಡ ಚೆನ್ನಾಗಿ ಇತ್ತು. ಅವರು ತೆಳ್ಳಗೇನೂ ಇರಲಿಲ್ಲ. ಎಕ್ಸರ್ಸೈಜ್ನಿಂದ ಅಪಘಾತ-ಆಘಾತ ಆಗಿಲ್ಲ. ಅದರ ಸಾಧ್ಯತೆ ಕಡಿಮೆ. ಹೈ ಪ್ರೋಟೀನ್ ಡಯಟ್ ಒಳ್ಳೆಯದಲ್ಲ. ಎಕ್ಸರ್ಸೈಜ್ ಇಂಡ್ಯೂಸ್ಡ್ ಡೆತ್ಗಳು (ಅತಿಯಾದ ದೈಹಿಕ ಶ್ರಮದ ಕಾರಣದಿಂದ ಸಂಭವಿಸುವ ಸಾವು) ಎಕ್ಸರ್ಸೈಜ್ ಮಾಡುವಾಗಲೇ ಆಗುತ್ತದೆ. ಅದಕ್ಕೆ ಬೇರೆ ಕಾರಣಗಳು ಇರುತ್ತವೆ. ಅದನ್ನು ಹೈಪೋಟ್ರೋಫಿಕ್ ಅಬ್ಸ್ಟ್ರಕ್ಟಿವ್ ಕಾರ್ಡಿಯೋಮೈಪಥಿ (ಎಚ್ಓಸಿಎಂ) ಎಂದು ಹೇಳುತ್ತೇವೆ. ಇದು ಎಕ್ಸರ್ಸೈಜ್ ಮಾಡುವ ಸಂದರ್ಭದಲ್ಲಿಯೇ ಆಗುವುದು. ಬಳಿಕ ಆಗುವುದಿಲ್ಲ ಎಂದು ಅವರು ಹೇಳಿದರು.

ನಾವೇನು ಮಾಡಬೇಕು?
ಯಾವುದೇ ಹಾರ್ಟ್ ಅಟ್ಯಾಕ್ಗೆ ಒಂದು ಕಾರಣವನ್ನು ಗುರುತಿಸಲು ಆಗೊಲ್ಲ. ಅದು ಯಾವಾಗಲೂ ಬಹುಕಾರಣದ್ದು. ವಂಶಾವಳಿ, ಒತ್ತಡ, ಚಟುವಟಿಕೆ ಇಲ್ಲದಿರುವಿಕೆ, ಮಧುಮೇಹ ಹೀಗೆ ಅನೇಕ ಕಾರಣಗಳಿವೆ. ಅವರ ಕುಟುಂಬದವರು ಹೃದಯಾಘಾತದಿಂದ 50 ವರ್ಷಕ್ಕೆ ಸತ್ತಿದ್ದಾರೆ ಎಂದರೆ ಈ ರೀತಿಯ ಸಾಧ್ಯತೆಗಳು ಬಹಳ. ಜೆನೆಟಿಕ್ ಹಿಸ್ಟರಿ ಇದ್ದರೆ ಚಿಕ್ಕ ವಯಸ್ಸಿನಲ್ಲಿಯೇ ಇದು ಎದುರಾಗಬಹುದು. ಕುಟುಂಬದ ಜೀನ್ಸ್ನಲ್ಲಿ ಒಂದು ಅಂಶ ಬಂದರೂ ಸಾಧ್ಯತೆ ಇರುತ್ತದೆ.
ಯಾವುದೇ ಸಿಂಪ್ಟಮ್ಸ್ ನಿರ್ಲಕ್ಷ್ಯ ಮಾಡಬಾರದು. ರಿಸ್ಕ್ ತರುವ ಅಂಶಗಳನ್ನು ಕಡಿಮೆ ಮಾಡಬೇಕು. ಸ್ವಲ್ಪ ಅನುಮಾನ ಬಂದಾಗ ಇಸಿಜಿ ಮಾಡುವುದರಿಂದ ಉಪಯೋಗವಿಲ್ಲ. ಟಿಎಂಟಿ ಮಾಡಬೇಕಾಗುತ್ತದೆ. ಅದರಿಂದ ಬ್ಲಾಕೇಜ್ ಇದ್ದರೆ ಗೊತ್ತಾಗುತ್ತದೆ. ಡಯಾಬಿಟೀಸ್ ಕೂಡ ಬಹಳ ಕೆಟ್ಟದ್ದು. ಅದು ಐದು ವರ್ಷದಿಂದ ಇದ್ದರೆ ನಿಮ್ಮ ಹೃದಯವನ್ನು ಪ್ರತಿ ಆರು ತಿಂಗಳಿಗೆ ತಪಾಸಣೆ ಮಾಡಿಸಿಕೊಳ್ಳಬೇಕು. ಎಲ್ಲ ನಾರ್ಮಲ್ ಇದ್ದವರಿಗೂ ಹೃದಯಾಘಾತ ಆಗುವ ಸಾಧ್ಯತೆ ಇರುತ್ತದೆ.

ಆಸ್ಪತ್ರೆಯಲ್ಲಿದ್ದಾಗಲೂ ಬದುಕಿಸಲು ಆಗೊಲ್ಲ
ಎಲ್ಎಂಸಿಎ ಡಿಸೀಸ್ ಇದ್ದಾಗ ಹೃದಯಾಘಾತ ಆದರೆ ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಬರುವುದು ಇರಲಿ, ಆಸ್ಪತ್ರೆಯಲ್ಲಿಯೇ ಇದ್ದರೂ ರೋಗಿಗಳನ್ನು ಉಳಿಸಿಕೊಳ್ಳುವುದು ಕಷ್ಟ. ಅಷ್ಟು ತೀವ್ರವಾಗಿ ಆಗುತ್ತದೆ. ಪಲ್ಸ್ ರಿವೈವ್ ಮಾಡಿದರೂ ಉಳಿಸಲು ಆಗೊಲ್ಲ. ಅಂತಹ ಅನುಭವಗಳು ನನಗೇ ಆಗಿವೆ. ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಆಂಜಿಯೋಗ್ರಾಮ್ ಮಾಡಿ ಎಲ್ಎಂಸಿಎ ಡಯಾಗ್ನೋಸ್ ಮಾಡಿ ಒಂದೂವರೆಗೆ ನನಗೆ ಫೋನ್ ಮಾಡಿದ್ದರು. ಎರಡು ಗಂಟೆಗೆ ಬರುತ್ತೇನೆ ಎಂದು ಹೇಳಿದ್ದೆ. 1.50ಕ್ಕೆ ಮತ್ತೆ ಕರೆ ಬಂತು. ಹೃದಯಾಘಾತದಿಂದ ಅವರು ನಿಧನರಾದರು ಎಂದು ತಿಳಿಸಿದರು. ಈ ರೀತಿಯ ಸನ್ನಿವೇಶಗಳಲ್ಲಿ ಅವರನ್ನು ಉಳಿಸಿಕೊಳ್ಳುವುದು ಕಷ್ಟ.
ಇತ್ತೀಚಿನ ಎರಡು ಮೂರು ವರ್ಷದಲ್ಲಿ ಯುವಜನರಿಗೆ ಹೃದಯಾಘಾತ ಆಗುವುದು ಇಡೀ ಜಗತ್ತಿನಾದ್ಯಂತ ಹಾಟ್ ಟಾಪಿಕ್ ಆಗಿದೆ ಎನ್ನುತ್ತಾರೆ ಡಾ. ನಿಸರ್ಗ.


Click it and Unblock the Notifications











