ಮಲಯಾಳಂನಲ್ಲಿ ಸಾಕಷ್ಟು ಅವಕಾಶಗಳಿವೆ: ಬಾಬು
''ದಿನೇಶ್ ಬಾಬು ಕ್ರಿಯಾಶೀಲತೆ ಕಳೆದುಕೊಂಡಿದ್ದಾರೆ. ಒಳ್ಳೆಯ ಚಿತ್ರಗಳನ್ನು ಕೊಡುವುದನ್ನು ಬಿಟ್ಟು ಹಣದ ಹಿಂದೆ ಬಿದ್ದಿದ್ದಾರೆ. ಸಿಕ್ಕಾಪಟ್ಟೆ ಕಮಿಟ್ ಮೆಂಟ್ ಗಳನ್ನು ಇಟ್ಟುಕೊಂಡು ಯಾವುದನ್ನೂನೆಟ್ಟಗೆ ಮಾಡುತ್ತಿಲ್ಲ'' ಎಂದು ನಿರ್ಮಾಪಕ ಮಂಜು ಹರಿಹಾಯ್ದಿದ್ದರು. ಇದಕ್ಕೆ ಪ್ರತಿಯಾಗಿ ಮಂಜು ಕಡೆಗೆ ಇದೀಗ ದಿನೇಶ್ ಬಾಬು ಮಾತಿನ ಬಾಣಗಳನ್ನು ಬಿಟ್ಟಿದ್ದಾರೆ.
ಮಂಜು ಅವರ ಪ್ರಶ್ನೆಗಳು ಉತ್ತರಕ್ಕೆ ಯೋಗ್ಯವಲ್ಲ. ಇಲ್ಲ ಸಲ್ಲದ ಮಾತುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಂಡಿದ್ದಾರೆ. ಒಂದು ವೇಳೆ ಅವರು ನನಗೆ ಯಾವುದೇ ಚಿತ್ರ ಕೊಡದಂತೆ ನಿರ್ಮಾಪಕರ ಸಂಘದ ಮೊರೆ ಹೋದರೂ ನಾನು ತಲೆಕೆಡಿಸಿಕೊಳ್ಳಲ್ಲ. ಛಾಯಾಗ್ರಾಹಕನಾಗಿ ಕೆಲಸ ಮಾಡಲು ನನಗೆ ತಮಿಳು, ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ದಿನೇಶ್ ಬಾಬು ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಚಿತ್ರರಂಗದ ನಿರ್ದೇಶಕನಾಗಿ ನನ್ನ ವೃತ್ತಿ ಜೀವನದಲ್ಲಿ ಪ್ರತಿ ಹಂತದಲ್ಲೂ ವಿವಾದಗಳು ಸುತ್ತಿಕೊಂಡಿವೆ. ಎಷ್ಟು ದಿನ ಸಾಧ್ಯವೋ ಅಷ್ಟು ದಿನ ಇಲ್ಲಿ ನಿರ್ದೇಶಕನಾಗಿ ಕೆಲಸ ಮಾಡುತ್ತೇನೆ. ಚಿತ್ರ ನಿರ್ಮಾಣ ಎಂಬುದು ಕೌಟುಂಬಿಕ ವ್ಯವಹಾರ ಎಂಬುದನ್ನು ಮಂಜು ಮೊದಲು ಅರ್ಥ ಮಾಡಿಕೊಳ್ಳಲಿ. ಸಾರ್ವಜನಿಕವಾಗಿ ಸಮಸ್ಯೆಗಳನ್ನು ಸೃಷ್ಟಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಖಾರವಾಗಿ ಹೇಳಿದ್ದಾರೆ ದಿನೇಶ್ ಬಾಬು.
ಇನ್ನು ಯಾವುದೇ ಕಾರಣಕ್ಕೂ ಮಂಜು ಜತೆ ಯಾವುದೇ ಚಿತ್ರ ಮಾಡುವುದಿಲ್ಲ. ವಿಷ್ಣುವರ್ಧನ್ ಮಧ್ಯಸ್ಥಿಕೆ ವಹಿಸಿದರೂ ಅಷ್ಟೇ(ಮಂಜು ಮತ್ತು ದಿನೇಶ್ ಬಾಬು ಇಬ್ಬರಿಗೂ ವಿಷ್ಣು ಆಪ್ತಮಿತ್ರ ಇದ್ದಂತೆ). ನನಗೀಗ 53 ವರ್ಷ ವಯಸ್ಸು. 25 ಅಥವಾ 30ರಲ್ಲಿ ಮಾಡಿದಂತೆ ಈಗ ಸಾಧ್ಯವಾಗಲ್ಲ. ಪ್ರತಿಯೊಬ್ಬರೂ ಬದಲಾಗುತ್ತಾರೆ ಎಂದು ಮಂಜುಗೆ ಮಾರ್ಮಿಕವಾಗಿ ದಿನೇಶ್ ಬಾಬು ಹೇಳಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











