ದಿನೇಶ್ ಗಾಂಧಿ ನನ್ನನ್ನು ಬಳಸಿಕೊಂಡ: ಸುದೀಪ್
'ವೀರ ಮದಕರಿ' ಚಿತ್ರದ ಕಹಿ ಘಟನೆಗಳನ್ನು ಸುದೀಪ್ ಮರೆಯಲು ಪ್ರಯತ್ನಿಸುತ್ತಿದ್ದಾರೆ. ಬಾಕ್ಸಾಫೀಸ್ ಗಳಿಗೆಯಲ್ಲಿ ಗೆದ್ದಿರುವ ಈ ಚಿತ್ರದಿಂದ ನಿರ್ಮಾಪಕ ದಿನೇಶ್ ಗಾಂಧಿಗೆ ಸಾಕಷ್ಟು ಲಾಭವಾಗಿದೆ ಎನ್ನುತ್ತಾರೆ. ಆದರೆ ಸಂಭಾವನೆ ಮಾತ್ರ ಸುದೀಪ್ ಗೆ ಇದುವರೆಗೂ ಸಂದಾಯವಾಗಿಲ್ಲ.ಈ ಸಂಬಂಧ ದಿನೇಶ್ ಗಾಂಧಿ ಮತ್ತು ಸುದೀಪ್ ನಡುವೆ ಮಾತಿನ ಚಕಮಕಿ ಸಹ ನಡೆದಿತ್ತು. ದಿನೇಶ್ ನನ್ನನ್ನು ಬಳಸಿಕೊಂಡು ದುಡ್ಡು ಮಾಡಿಕೊಂಡರು ಅಷ್ಟೇ ಎನ್ನುತ್ತಾರೆ ಸುದೀಪ್.
''ವೀರಮದಕರಿ ಚಿತ್ರ ನಷ್ಟದಲ್ಲಿದೆ. ಕೈಯಲ್ಲಿ ದುಡ್ಡಿಲ್ಲ ಎಂದಿದ್ದರು ಚಿತ್ರದ ನಿರ್ಮಾಪಕ ದಿನೇಶ್ ಗಾಂಧಿ. ಆದರೆ ಇದೀಗ ರವಿಚಂದ್ರನ್ ನಾಯಕ ನಟನಾಗಿ' ಹೂ'ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ತಮ್ಮ ಫ್ಲಾಪ್ ಚಿತ್ರವೇ ದೊಡ್ಡ ನಾಯಕ ನಟನ ಚಿತ್ರ ನಿರ್ಮಿಸಲು ಸಹಾಯ ಮಾಡಿದೆ. ಈ ಕಾರಣಕ್ಕಾಗಿಯಾದರೂ ಖುಷಿ ಪಡುತ್ತಿದ್ದೇನೆ '' ಎಂದು ಸುದೀಪ್ ಪ್ರತಿಕ್ರಿಯಿಸಿದ್ದಾರೆ .
ಕಾಕತಾಳೀಯವೆಂಬಂತೆ ಸುದೀಪ್ ಹುಟ್ಟುಹಬ್ಬದಂದೇ(ಸೆಪ್ಟೆಂಬರ್ 2) ದಿನೇಶ್ ತಮ್ಮ 'ಹೂ' ಚಿತ್ರವನ್ನು ಆರಂಭಿಸಿದ್ದಾರೆ! ಆದರೆ ಸುದೀಪ್ ಮಾತ್ರ ಇದ್ಯಾವುದನ್ನ್ನೂ ತಲೆಗೆ ಹಾಕಿಕೊಳ್ಳದೆ 'ಜಸ್ಟ್ ಮಾತ್ ಮಾತಲ್ಲಿ' ಮುಳುಗಿದ್ದಾರೆ. ತಮ್ಮ ಮತ್ತೊಂದು ಚಿತ್ರ ಕಿಚ್ಚ ಹುಚ್ಚದಲ್ಲೂ ಬಿಜಿಯಾಗಿದ್ದಾರೆ.
''ದಿನೇಶ್ ತಮ್ಮ ಮಾತನ್ನ್ನು ಉಳಿಸಿಕೊಂಡಿಲ್ಲ. ಅವರೊಬ್ಬ ವಚನಭ್ರಷ್ಟ. ವೀರ ಮದಕರಿ ಚಿತ್ರದ ಕಹಿ ಅನುಭವಗಳು ಒಳ್ಳೆಯ ಪಾಠ ಕಲಿಸಿವೆ. ಇದೀಗ ವೀರ ಮದಕರಿ ಚಿತ್ರದ ಹಕ್ಕುಗಳನ್ನು ದಿನೇಶ್ ಮಾರಲು ಹೊರಟಿದ್ದಾರೆ. ಈ ಚಿತ್ರ ಹಿಂದಿಗೆ ಡಬ್ ಆಗಲಿದೆ. ಇದೇ ಚಿತ್ರದೊಂದಿಗೆ ಬಾಲಿವುಡ್ ನಲ್ಲೂ ಹಣ ಮಾಡಲು ಹೊರಟಿದ್ದಾರೆ. ತಮ್ಮ ಮುಂದಿನ ಚಿತ್ರಕ್ಕೆ ಹಣಬೇಕಾಗಿದೆಯಲ್ಲಾ! ಈಗಲೂ ತಮ್ಮ ಫ್ಲಾಪ್ ಚಿತ್ರವನ್ನೇ ನಂಬಿಕೊಂಡಿದ್ದಾರೆ! '' ಎಂದು ಸುದೀಪ್ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











