ಪರಭಾಷಾ ಚಿತ್ರಗಳ ಹಾವಳಿ:ನಿರ್ಮಾಪಕರು ಗರಂ
ಕನ್ನ್ನಡ ಭಾಷೆ, ಕನ್ನಡ ನಿರ್ಮಾಪಕರ ದುಃಸ್ಥಿತಿಗೆ ಪರಿಹಾರ ಅಗತ್ಯ. ಅಗತ್ಯಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳನ್ನು ಪ್ರದರ್ಶಿಸುವುದನ್ನು ನಿಲ್ಲಿಸಬೇಕು. ನಿರ್ಮಾಪಕರ ಹಿತ ಕಾಯಬೇಕು ಎಂದು ಒಕ್ಕೊರಲ ನಿರ್ಧಾರವನ್ನು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ತೆಗೆದುಕೊಂಡಿದೆ. ಇಂದುಸದಾಶಿವನಗರ ಕ್ಲಬ್ ನಲ್ಲಿ ನಡೆದ ತುರ್ತು ಮಹಾಸಭೆಯಲ್ಲಿ ಈ ನಿರ್ಣಯವನ್ನು ತೆಗೆದುಕೊಳ್ಳಲಾಯಿತು.
ನಿರ್ಮಾಪಕರ ಸಭೆಯ ಹಿನ್ನೆಲೆ
ರಾಜ್ಯದಲ್ಲಿ ಇತ್ತೀಚೆಗೆ ತೆಲುಗಿನ ಖ್ಯಾತ ನಟ ಚಿರಂಜೀವಿ ಅವರ ಮಗ ರಾಮ್ ಚರಣ್ ತೇಜ ಅಭಿನಯದ 'ಮಗಧೀರ' ಚಿತ್ರ ತೆರೆಕಂಡಿತ್ತು. ಭರ್ಜರಿ ಯಶಸ್ಸು ಕಾಣುತ್ತಿರುವ ಈ ಚಿತ್ರವನ್ನು ಅಗತ್ಯಕ್ಕಿಂತ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಅನುಮತಿ ನೀಡಲಾಗಿದೆ.ಇದು ನಿಯಮ ಬಾಹಿರವಾಗಿದೆ ಎಂದು ಸಾರಾ ಗೋವಿಂದು ಸೇರಿದಂತೆ ಹಲವಾರು ನಿರ್ಮಾಪಕರು ದೂರಿದ್ದರು. ಅಲ್ಲದೆ ,ಈ ಚಿತ್ರದ ಹೆಚ್ಚುವರಿ ಪ್ರದರ್ಶನದಿಂದ ಬರುವ ಲಾಭದ ಹಣದ ಪಾಲು ವಾಣಿಜ್ಯ ಮಂಡಳಿಗೆ ಸೇರುವಂತೆ ಮಾಡಬೇಕು. ಮಗಧೀರ ಚಿತ್ರದ ವಿತರಕರು ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಯಾಗಿದ್ದರೂ, ನಿಯಮ ಉಲ್ಲಂಘಿಸಿದ್ದಾರೆ. ಇದನ್ನು ಕೂಡಲೇ ಸರಿಪಡಿಸಬೇಕು ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಕೆಸಿಎನ್ ಚಂದ್ರಶೇಖರ್ ಆಗ್ರಹಪಡಿಸಿದ್ದಾರೆ.
(ದಟ್ಸ್ ಕನ್ನಡ ಸಿನಿಸುದ್ದಿ)


Click it and Unblock the Notifications












