"ಎಸ್. ನಾರಾಯಣ್ ಸರ್ ಕತೆ ಹೇಳುವಾಗ ನನ್ನ ಕಣ್ಣಲ್ಲಿ ನೀರು ಬಂತು.. ಇದೆಲ್ಲಾ ಅಪ್ಪಾಜಿ ಮಾಡಿಸಿದ್ದು": ಅನಿರುದ್ಧ್
'ಜೊತೆ ಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಕೈಬಿಟ್ಟಿದ್ದು ಅಭಿಮಾನಿಗಳಿಗೆ ಬೇಸರ ತಂದಿತ್ತು. ಇದೀಗ 'ಸೂರ್ಯವಂಶ' ಧಾರಾವಾಹಿಯಲ್ಲಿ ಮತ್ತೊಂದು ಪಾತ್ರದ ಮೂಲಕ ಅನಿರುದ್ಧ್ ವೀಕ್ಷಕರನ್ನು ರಂಜಿಸಲು ಬರ್ತಿದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕೆಲ ದಿನಗಳ ಹಿಂದೆ ಕಿರುತೆರೆ ನಿರ್ಮಾಪಕರ ಸಂಘ ಅನಿರುದ್ಧ್ ವಿರುದ್ಧ್ ಬ್ಯಾನ್ ಅಸ್ತ್ರ ಪ್ರಯೋಗಿಸಿತ್ತು. ಬ್ಯಾನ್ ಎನ್ನುವ ಪದ ಬಳಸದೇ ಇದ್ದರೂ 2 ವರ್ಷಗಳ ಕಾಲ ಕಿರುತೆರೆ ಕಾರ್ಯಕ್ರಮಗಳಲ್ಲಿ ಅವರಿಗೆ ಅವಕಾಶ ಕೊಡದಿರಲು ತೀರ್ಮಾನ ಮಾಡಿದ್ದರು. ಹಾಗಾಗಿ ಅನಿರುದ್ಧ್ ಮುಂದೇನು ಮಾಡುತ್ತಾರೆ? ಎನ್ನುವ ಕುತೂಹಲ ಇತ್ತು. ಕಿರುತೆರೆ ಬಿಟ್ಟು ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಾರಾ? ಎನ್ನುವ ಅನುಮಾನ ಮೂಡಿತ್ತು. ಜೊತೆಗೆ ತಾವೇ ಧಾರಾವಾಹಿ ನಿರ್ಮಿಸಿ, ನಟಿಸುತ್ತಾರಾ ? ಎನ್ನುವ ಚರ್ಚೆಯೂ ನಡೆದಿತ್ತು.
ಸದ್ಯ 'ಸೂರ್ಯವಂಶ' ಧಾರಾವಾಹಿಗೆ ಅನಿರುದ್ಧ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಧಾರಾವಾಹಿಯನ್ನು ಅವರು ನಿರ್ಮಿಸುತ್ತಿಲ್ಲ. ಬರೀ ನಟನೆಯನ್ನು ಮಾತ್ರ ಮಾಡುತ್ತಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಈ ಹೊಸ ಧಾರಾವಾಹಿ ಮೂಡಿ ಬರಲಿದೆ. ಈ ಬಗ್ಗೆ ಅವರು ಏನು ಹೇಳಿದ್ದಾರೆ? ಮುಂದೆ ಓದಿ.

ಸಂಘರ್ಷಗಳ ಮಧ್ಯೆ ಹೊಸ ಧಾರಾವಾಹಿ
"ಅಪ್ಪನವರ ಆಶೀರ್ವಾದ. ಎಸ್. ನಾರಾಯಣ್ ಸರ್ ನಿರ್ದೇಶನ. 'ಸೂರ್ಯವಂಶ' ಎನ್ನುವ ಟೈಟಲ್ ಇದೆ. ಉದಯ ಟಿವಿಯಂತಹ ದೊಡ್ಡ ವಾಹಿನಿ. ನಿಜಕ್ಕೂ ಈ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಬಹಳ ಸಂತಸ ತಂದಿದೆ. ಎಲ್ಲಾ ಸಂಘರ್ಷಗಳ ನಡುವೆ ಈ ಧಾರಾವಾಹಿ ಶುರುವಾಗುತ್ತಿರುವುದು ಅಭಿಮಾನಿಗಳ ಹಾರೈಕೆ, ಆಶೀರ್ವಾದದ ಫಲ. ಅವರ ಹಾರೈಕೆ, ಪ್ರೀತಿ, ಆಶೀರ್ವಾದಕ್ಕೆ ನಾನು ತಲೆ ಬಾಗುತ್ತೇನೆ"

ಆರ್ಯವರ್ಧನ್ ಬೇರೆ ಈ ಪಾತ್ರ ಬೇರೆ
"ಎಸ್. ನಾರಾಯಣ್ ಸರ್ ಕಥೆ ಹೇಳಿದ್ರು. ನಂತರ ಉದಯ ಟಿವಿಯವರು ಅಪ್ರೋಚ್ ಮಾಡಿದ್ರು. ಹೀಗೆ ಶುರುವಾಯಿತು.ಕಥೆ ಏನು ಎನ್ನುವುದನ್ನು ನಾನು ಹೇಳುವುದಿಲ್ಲ. ಆರ್ಯವರ್ಧನ್ ಪಾತ್ರಕ್ಕಿಂತ ವಿಭಿನ್ನವಾದ ಪಾತ್ರ ಇದು. ಒಂದಷ್ಟು ಸನ್ನಿವೇಶಗಳಲ್ಲಿ ಸೂಟು ಬೂಟು ಇರುತ್ತದೆ. ಆದರೆ ಬಹಳ ಭಿನ್ನವಾಗಿದೆ. ಕಾಸ್ಟ್ಯೂಮ್ ಸಹ ಬೇರೆ ರೀತಿಯಲ್ಲಿ ಇರುತ್ತದೆ. ಸಂಪೂರ್ಣವಾಗಿ ಬೇರೆ ಇರುತ್ತದೆ. ಆ ಪಾತ್ರಕ್ಕೂ ಇದಕ್ಕೂ ತುಂಬಾ ವ್ಯತ್ಯಾಸ ಇದೆ" ಎಂದಿದ್ದಾರೆ.

ಕಥೆ ಕೇಳಿ ನನ್ನ ಕಣ್ಣಲ್ಲಿ ನೀರುಬಂತು
"ಎಸ್. ನಾರಾಯಣ್ ಸರ್ ಕತೆ ಹೇಳುವಾಗ ಕಣ್ಣಲ್ಲಿ ನೀರು ಬಂತು. ಯಾಕಂದರೆ ಇಷ್ಟು ವರ್ಷ ಅವರು ಅಪ್ಪಾಜಿಗೆ ಕಥೆ ಹೇಳುತ್ತಿದ್ದರು. ಈಗ ನನಗೆ ಹೇಳುತ್ತಿದ್ದಾರೆ ಅಂದರೆ ಅದು ಅಪ್ಪಾಜಿ ಆಶೀರ್ವಾದ. ಎಸ್. ನಾರಾಯಣ್ ಜೊತೆ ನಾನು ಕೆಲಸ ಮಾಡಬೇಕು ಎಂದು ಅವರು ಬಹಳ ಇಷ್ಟಪಡುತ್ತಿದ್ದರು. ನನಗೂ ಹೇಳಿದ್ದರು. ಇಷ್ಟೆಲ್ಲಾ ಆದಮೇಲೆ ಅವರಿಂದಲೇ ಈ ಧಾರಾವಾಹಿ ಬರುವಂತಾಯಿತು. ಅಪ್ಪಾಜಿಯವರೇ ಇದನ್ನೆಲ್ಲಾ ಮಾಡಿಸಿದ್ದು."

ಬಹಳ ಬೇಗ ಧಾರಾವಾಹಿ ಪ್ರಸಾರ
'ಸೂರ್ಯವಂಶ' ಧಾರಾವಾಹಿ ಬಹಳ ಕುತೂಹಲ ಕೆರಳಿಸಿದೆ. ಕಾರಣ ಎಸ್. ನಾರಾಯಣ್ ನಿರ್ದೇಶನ ಮತ್ತು ಟೈಟಲ್. 1999ರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ 'ಸೂರ್ಯವಂಶ' ಚಿತ್ರದಲ್ಲಿ ನಟಿಸಿದ್ದರು. ಅದು ಸೂಪರ್ ಹಿಟ್ ಆಗಿತ್ತು. ಆ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಎಸ್. ನಾರಾಯಣ್ ಈಗ ಧಾರಾವಾಹಿ ಕಟ್ಟಿಕೊಡುತ್ತಿದ್ದಾರೆ. ಜೊತೆಗೆ ಅವರು ಕೂಡ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಆದಷ್ಟು ಬೇಗ 'ಸೂರ್ಯವಂಶ' ಧಾರಾವಾಹಿ ಪ್ರಸಾರ ಆಗುತ್ತದೆ ಎಂದು ಅನಿರುದ್ಧ್ ಮಾಹಿತಿ ನೀಡಿದ್ದಾರೆ.


Click it and Unblock the Notifications











