'ರಹದಾರಿ'ಯಿಂದ ಮರಳಿ ರಾಜಮಾರ್ಗ ಪ್ರವೇಶಿಸುತ್ತಿದ್ಧಾರೆ ಶ್ವೇತಾ ಶ್ರೀವಾತ್ಸವ್
ಶ್ವೇತಾ ಶ್ರೀವಾತ್ಸವ್ ಎಂದೊಡನೆ ಎಲ್ಲರಿಗೂ ನೆನಪಾಗುವುದು ಸಿಂಪಲ್ ಆಗಿ ಒಂದು ಲವ್ ಸ್ಟೋರಿ. ಆದರೆ ಅವರು ಈಗಾಗಲೇ ಮ್ಯಾರೇಜ್ ಸ್ಟೋರಿ, ಮದರ್ ಸ್ಟೋರಿ ಎಲ್ಲವನ್ನು ಮುಗಿಸಿಕೊಂಡು ಮತ್ತೆ ನಾಯಕಿಯಾಗಿ ಬರಲು ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ಮದುವೆಯಾದೊಡನೆ ಚಿತ್ರರಂಗದಿಂದ ಮರೆಯಾಗುವ ನಾಯಕಿಯರ ಟ್ರೆಂಡ್ ಈಗ ಬದಲಾಗಿದೆ. ವರ್ಷ ಬಿಟ್ಟು ಪೋಷಕ ನಟಿಯಾಗಿ ಮರಳುತ್ತಿದ್ದವರನ್ನು ಕಂಡಿದ್ದೇವೆ. ಆದರೆ ತಾಯಿಯಾದ ಮೇಲೆಯೂ ಗ್ಲಾಮರ್ ಗೆ ಯಾವುದೇ ಕೊರತೆ ಇಲ್ಲ ಎನ್ನುವುದನ್ನು ಸಾಬೀತು ಮಾಡುತ್ತಾ, ನಾಯಕಿಯಾಗಿಯೇ ಮರಳುತ್ತಿದ್ದಾರೆ.
ಮೂಲತಃ ರಂಗಭೂಮಿ ಕಲಾವಿದೆಯಾಗಿರುವ ಶ್ವೇತಾ, ಪತ್ರಿಕೋದ್ಯಮದಲ್ಲಿಯೂ ಅನುಭವ ಹೊಂದಿರುವಾಕೆ. ಕಥಕ್ ನೃತ್ಯ, ವೀಣಾ ವಾದನ, ಧಾರಾವಾಹಿ ಹೀಗೆ ಎಲ್ಲ ವಿಭಾಗಗಳಲ್ಲಿ ಜ್ಞಾನ ಪಡೆದಿರುವ ಶ್ವೇತಾ ನಿಜಕ್ಕೂ ಬಹುಮುಖ ಪ್ರತಿಭೆ. ಆದರೆ ಅವರ ವೈವಿಧ್ಯಮಯ ವಿದ್ಯೆಗಳನ್ನೆಲ್ಲ ಚಿತ್ರದೊಳಗೆ ತರುವಂಥ ಅವಕಾಶ ಇದುವರೆಗೆ ಅವರಿಗೆ ದೊರಕಿಲ್ಲ ಎಂದೇ ಹೇಳಬಹುದು. ಈ ಎರಡನೇ ಇನ್ನಿಂಗ್ಸ್ ಶ್ವೇತಾ ಶ್ರೀವಾತ್ಸವ್ ಅವರ ಹೊಸ ಮುಖವನ್ನು ತೋರಿಸುವಂತಾಗಲಿ ಎನ್ನುವುದು ನಮ್ಮ ಆಶಯ. ಮುಂದೆ ಓದಿ...

ಗರ್ಭಿಣಿಯಾದಾಗ ಸಹಜವಾಗಿ ದಪ್ಪಗಾಗಿದ್ದಿರಿ. ಈಗ ಮತ್ತೆ ಮೊದಲಿನಂತಾಗಲು ಕಸರತ್ತು ಮಾಡಬೇಕಾಯಿತೇ?
ಇಲ್ಲ. ಹೇಗೆ ಸಹಜವಾಗಿ ತೂಕ ಹೆಚ್ಚಿತ್ತೋ, ಅಷ್ಟೇ ಸಹಜವಾಗಿ ತೂಕ ಕಡಿಮೆಯಾಗಿದೆ! ಗರ್ಭಿಣಿಯಾಗಿದ್ದ ಸಮಯದಲ್ಲಿ ನನಗೆ ಸಿಹಿ ತಿನ್ನುವ ಬಯಕೆ ಹೆಚ್ಚಾಗಿತ್ತು. ಅದೇ ಸಂದರ್ಭದಲ್ಲಿ ನನ್ನ ತಂದೆ ನಾರ್ತ್ ಇಂಡಿಯಾಗೆ ಹೋಗಿದ್ದರು. ಅಲ್ಲಿಂದ ಬರುವಾಗ ಎಲ್ಲ ಭಾರತೀಯ ಸಿಹಿತಿನಿಸುಗಳನ್ನು ಕೂಡ ತಂದಿದ್ದರು. ಹಾಗೆ ಸಿಹಿ ತಿಂದು ದಪ್ಪಗಾಗುತ್ತಾ ಹೋದೆ. ಹೆರಿಗೆಯ ಬಳಿಕ ಒಂದಷ್ಟು ಸಮಯ ಮಾತ್ರ ರೆಸ್ಟ್ ನಲ್ಲಿದ್ದೆ. ಆದರೆ ಈ ಎರಡು ವರ್ಷಗಳಲ್ಲಿ ಮಗಳಿಗೆ ಎದೆಹಾಲು ನೀಡುವುದು, ಲಾಲನೆ ಪಾಲನೆ ಮಾಡುವುದರಲ್ಲಿ 28 ಕೆಜಿ ಕಡಿಮೆಯಾಗಿದ್ದೇನೆ. ಸರಿಯಾಗಿ ಇದೇ ಸಂದರ್ಭದಲ್ಲಿ ಸಿನಿಮಾ ಆಫರ್ ಗಳು ಕೂಡ ಬರತೊಡಗಿವೆ.

ನೀವು ಮತ್ತೆ ನಟಿಸಲು ಸಿದ್ಧ ಎಂದು ಘೋಷಿಸಿದ್ದೀರಿ ಎಂದಾಯಿತು?
ನಾನಾಗಿ ಯಾವುದೇ ಘೋಷಣೆ ಮಾಡಿಕೊಂಡಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಕೂಡ ಇತ್ತೀಚೆಗೆ ನನ್ನ ಮಗುವಿನ ಬಗ್ಗೆ ತೋರಿಸಿದ್ದೇ ಹೆಚ್ಚು. ದೇವರ ದಯೆ; ಆದರೂ ನನ್ನನ್ನು ಒಬ್ಬ ಸಕ್ರಿಯ ನಟಿಯಾಗಿ ಭಾವಿಸಿಕೊಂಡು ಒಂಬತ್ತು ಸಿನಿಮಾಗಳ ಆಫರ್ ಬಂತು ನೋಡಿ! ನಿಜಕ್ಕೂ ನನಗೆ ಖುಷಿಯಾಯಿತು. ಹಾಗೆ ಬಂದ ಒಂಬತ್ತು ಚಿತ್ರಗಳಲ್ಲಿ ಮೂರು ಸಿನಿಮಾಗಳು ಹಳ್ಳಿ ಪಾತ್ರವನ್ನೇ ಕೊಟ್ಟಿದ್ದರು. ಮತ್ತೆ ಕಿರಗೂರಿನ ಗಯ್ಯಾಳಿಗಳು ಛಾಯೆ ಮುಂದುವರಿಸುವುದು ಬೇಡ ಎಂದು ಅವುಗಳನ್ನು ನಿರಾಕರಿಸಿದೆ. ಇನ್ನು ಮೂರು ಸಿನಿಮಾಗಳಿಗೆ ಬೆಂಗಳೂರು ಬಿಟ್ಟು ದಿನಗಟ್ಟಲೆ ಚಿತ್ರೀಕರಣದಲ್ಲಿ ತೊಡಗಿಕೊಳ್ಳಬೇಕಿತ್ತು. ಮಗುವನ್ನು ಬಿಟ್ಟು ಅಷ್ಟುದಿನ ದೂರವಿರಲಾಗದು ಎಂದು ಅವುಗಳನ್ನು ಒಪ್ಪಲಿಲ್ಲ. ಉಳಿದ ಮೂರು ಚಿತ್ರಗಳಲ್ಲಿ ಎರಡು ಸಿನಿಮಾಗಳಿಗೆ ನಿರ್ಮಾಪಕರ ಸಮಸ್ಯೆ ಇತ್ತು. ಹಾಗಾಗಿ ಒಂಬತ್ತನೇ ಚಿತ್ರವನ್ನೇ ಒಪ್ಪಿಕೊಂಡೆ.

ಒಪ್ಪಿಕೊಂಡಿರುವ ಚಿತ್ರದ ವಿಶೇಷತೆಗಳ ಬಗ್ಗೆ ಹೇಳಿ
ನಾನು ಒಪ್ಪಿರುವ ಚಿತ್ರದ ಹೆಸರು ರಹದಾರಿ. ನಿರ್ದೇಶಕರ ಹೆಸರು ಸುರೇಶ್. ಈಗಾಗಲೇ `ಒಂದ್ ಕತೆ ಹೇಳ್ಲ?' ಎನ್ನುವ ಚಿತ್ರ ಮಾಡಿದ್ದಾರೆ. ನನಗೆ ಕತೆ ನರೇಟ್ ಮಾಡುವಾಗಲೇ ಅವರು ಪಾತ್ರಗಳ ಬಗ್ಗೆ, ಶಾಟ್ ಬಗ್ಗೆ ಕ್ಲಿಯರಾಗಿ ಹೇಳೋದನ್ನು ನೋಡಿದಾಗ ನನಗೆ ನಿರ್ದೇಶಕ ಸುನಿಯವರ ನೆನಪಾಯಿತು. ಇದು ನಾಯಕಿ ಪ್ರಾಧಾನ್ಯತೆ ಇರುವ ಹೊಂದಿರುವ ಚಿತ್ರ. ಅದು ನನಗೆ ವೈಯಕ್ತಿಕವಾಗಿ ಖುಷಿಯ ವಿಚಾರ. ಚಿತ್ರದಲ್ಲಿ ನಾನು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ರಾಬರಿ ಥ್ರಿಲ್ಲರ್ ಸಬ್ಜೆಕ್ಟ್. ಪಕ್ಕಾ ಕಮರ್ಷಿಯಲ್ ಔಟ್ ಎಂಡ್ ಔಟ್ ಚಿತ್ರ ಇದು. ಮಾಲಾಶ್ರೀಯವರಂತೆ ಆ್ಯಕ್ಷನ್ ಸನ್ನಿವೇಶಗಳಿವೆ. ತಮಾಷೆಯ ದೃಶ್ಯಗಳು ಕೂಡ ಇವೆ.

ಪೊಲೀಸ್ ಪಾತ್ರಕ್ಕಾಗಿ ಏನಾದರೂ ವಿಶೇಷ ತಯಾರಿ ಮಾಡಿದ್ದೀರ?
ಆಗಲೇ ಹೇಳಿದಂತೆ ತೂಕ ತನ್ನಷ್ಟಕ್ಕೇ ಕಡಿಮೆಯಾಗಿದೆ. ಫೈನ್ ಆ್ಯಂಡ್ ಫಿಟ್ ಆಗುವುದಕ್ಕಾಗಿ ಮತ್ತೆ ಯೋಗ ಶುರು ಮಾಡಿದ್ದೇನೆ. ವಾರದಲ್ಲಿ ಮೂರು ದಿನ ಯೋಗ ಇನ್ಸ್ ಟ್ರಕ್ಟರ್ ಮನೆಗೆ ಬರುತ್ತಾರೆ. ಸಿಹಿ ಬಯಸುವ ನಾಲಿಗೆಗೆ ಹಿಡಿತ ಹಾಕಿದ್ದೇನೆ. ಉಳಿದಂತೆ ನಟಿ ನನ್ನೊಳಗೆ ಸದಾ ಇರುವುದಾಗಿ ನಂಬಿದ್ದೇನೆ. ನಿರ್ದೇಶಕರು ಆಕ್ಷನ್ ಹೇಳಿದಾಗ ಪಾತ್ರವಾಗುತ್ತೇನೆ ಎನ್ನುವ ನಂಬಿಕೆ ಇದೆ. ಇನ್ನು ಉಳಿದಿರುವುದು ಪ್ರೇಕ್ಷಕರ ಪ್ರೋತ್ಸಾಹವೊಂದೇ. ಅದು ಸಿಕ್ಕಷ್ಟು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವ ಉತ್ಸಾಹ ಮೂಡುತ್ತದೆ.


Click it and Unblock the Notifications











