ಹುಟ್ಟುಹಬ್ಬದ ನಿಮಿತ್ತ ಗಾನ ಗಂಧರ್ವ ಎಸ್ಪಿಬಿಗೆ ನಮನ
ವಿಶ್ವದೆಲ್ಲೆಡೆ ಸಂಗೀತ ಪ್ರೇಮಿಗಳ ಹೃದಯ ಸಿಂಹಾಸನದಲ್ಲಿ ಆರಾಧ್ಯದೈವವಾಗಿರುವ ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಸಂಗೀತಕ್ಕೆ ಭಾಷೆಯ ಬೇಲಿಯಿಲ್ಲ, ಎಸ್ಪಿಬಿ ಹಾಡದೆ ಇರುವ ಶೈಲಿಯೇ ಇಲ್ಲ, ನಾಯಕ ಯಾರಾದರೂ ಸರಿ ಅವರ ಶರೀರಕ್ಕೆ ತಕ್ಕ ಶಾರೀರ ಒದಗಿಸುವ ಅಭಿಜಾತ ಕಲಾವಿದ ಬಾಲಸುಬ್ರಮಣ್ಯಂ ಅವರ ಕುರಿತ ಪರಿಚಯಾತ್ಮಕ ಲೇಖನ ಇಲ್ಲಿದೆ ಓದಿ - ಒನ್ ಇಂಡಿಯಾ ಕನ್ನಡ
ಜೂನ್ 4, ಗಾಯಕ ಡಾ ಎಸ್ ಪಿ ಬಾಲಸುಬ್ರಮಣ್ಯಂರವರ ಜನ್ಮ ದಿನ. ಆಂಧ್ರದ ನೆಲ್ಲೂರು ಜಿಲ್ಲೆಯ ಕೊನೆತಮ್ಮಪೇಟೆಯಲ್ಲಿ ಪದ್ಮಭೂಷಣ ಪದ್ಮಶ್ರೀ ಡಾ. ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಮಣ್ಯಂ ಜನಿಸಿದ್ದು ಜೂನ್ 4, 1946ರಲ್ಲಿ. ತಂದೆ ಎಸ್ ಪಿ ಸಾಂಬವಮೂರ್ತಿ ಹಾಗೂ ತಾಯಿ ಕಮಲೇಶ್ವರಿ. ಖ್ಯಾತ ಗಾಯಕಿ ಶ್ರೀಮತಿ ಎಸ್ ಪಿ ಶೈಲಜಾ ಇವರ ಕಿರಿಯ ಸಹೋದರಿ. ಪತ್ನಿ ಶ್ರೀಮತಿ ಸಾವಿತ್ರಿ ಹಾಗೂ ಮಕ್ಕಳು ಎಸ್ ಪಿ ಬಿ ಪಲ್ಲವಿ ಮತ್ತು ಎಸ್ ಪಿ ಬಿ ಚರಣ್.
1965 ರಿಂದ ಅಂದರೆ ಕಳೆದ ಸುಮಾರು ಐವತ್ತು ವರ್ಷಗಳಿಂದ ಡಾ. ಎಸ್ ಪಿ ಬಿ, 15ಕ್ಕೂ ಹೆಚ್ಚು ಭಾಷೆಗಳಲ್ಲಿ 50,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಇದರಲ್ಲಿ ಚಿತ್ರಗೀತೆ, ಭಕ್ತಿಗೀತೆ, ರಾಷ್ಟ್ರಭಕ್ತಿಗೀತೆ, ಭಾವಗೀತೆ ಮುಂತಾದ ವಿವಿಧ ಪ್ರಕಾರದ ಹಾಡುಗಳು ಸೇರಿವೆ. ತಮ್ಮ ಗಾಯನಕ್ಕಾಗಿ ಆರು ಬಾರಿ ವಿವಿಧ ಭಾಷೆಗಳಲ್ಲಿ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿದ ಸಾಧನೆ ಇವರದು. ಇವರು ಗಾಯನದಲ್ಲಿ ಮಾತ್ರವಲ್ಲದೇ, ನಿರ್ಮಾಣ, ನಿರ್ದೇಶನ, ನಿರೂಪಣೆ, ಹಿನ್ನೆಲೆ ದ್ವನಿ, ನಟನೆ, ಮಿಮಿಕ್ರಿ ಮತ್ತು ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡುತ್ತಿದ್ದಾರೆ.

ಪ್ರಮುಖ ಪ್ರಶಸ್ತಿ-ಗೌರವಗಳು:
1981-ಕಲೈಮಾಮಣಿ-ತಮಿಳುನಾಡು ಸರಕಾರ
1999-ಗೌರವ ಡಾಕ್ಟರೇಟ್-ಪೊಟ್ಟಿಶ್ರೀರಾಮುಲು ತೆಲುಗು ವಿಶ್ವವಿದ್ಯಾನಿಲಯ
2001-ಪದ್ಮಶ್ರೀ-ಭಾರತ ಸರಕಾರ
2009-ಗೌರವ ಡಾಕ್ಟರೇಟ್-ಸತ್ಯಭಾಮ ವಿಶ್ವವಿದ್ಯಾನಿಲಯ, ಚೆನ್ನೈ
2009-ಗೌರವ ಡಾಕ್ಟರೇಟ್-ಕಲಾಪ್ರಪೂರ್ಣ-ಆಂಧ್ರ ವಿಶ್ವವಿದ್ಯಾನಿಲಯ
2010-ಗೌರವ ಡಾಕ್ಟರೇಟ್-ಜವಾಹರಲಾಲ್ ನೆಹರೂ ತಾಂತ್ರಿಕ ವಿಶ್ವವಿದ್ಯಾನಿಲಯ, ಅನಂತಪುರ
2011-ಪದ್ಮಭೂಷಣ-ಭಾರತ ಸರಕಾರ
ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿಗಳು:
1980-ಚಿತ್ರ:ಶಂಕರಾಭರಣಂ (ತೆಲುಗು), ಹಾಡು-ಓಂಕಾರನಾದಾಲು
1982-ಚಿತ್ರ:ಏಕ್ ದುಜೆ ಕೆ ಲಿಯೇ (ಹಿಂದಿ), ಹಾಡು-ತೇರೇ ಮೇರೇ ಬೀಚ್ ಮೇ
1984-ಚಿತ್ರ:ಸಾಗರಸಂಗಮಂ (ತೆಲುಗು), ಹಾಡು-ವೇದಂ ಅನುಅನುವುನ ನಾದಂ
1989-ಚಿತ್ರ:ರುದ್ರವೀಣಾ (ತೆಲುಗು), ಹಾಡು-ಚೆಪ್ಪಾಲನಿ ಉಂದಿ
1996-ಚಿತ್ರ:ಗಾನಯೋಗಿ ಪಂಚಾಕ್ಷರಿ ಗವಾಯಿ (ಕನ್ನಡ), ಹಾಡು-ಉಮಂಡು ಘುಮಂಡು
1997-ಚಿತ್ರ:ಮಿನ್ಸಾರ ಕನವು (ತಮಿಳು), ಹಾಡು-ತಂಗ ತಾಮರೈ
ಇದಲ್ಲದೆ ಫಿಲಂಫೇರ್, ಫಿಲಂಫೇರ್-ದಕ್ಷಿಣ, ನಂದಿ ಪ್ರಶಸ್ತಿ, ಆಂಧ್ರ ಪ್ರದೇಶ-ತಮಿಳುನಾಡು-ಕರ್ನಾಟಕ-ಕೇರಳ ರಾಜ್ಯ ಪ್ರಶಸ್ತಿಗಳು ಮತ್ತು ಹಲವಾರು ಖಾಸಗಿ ಪ್ರಶಸ್ತಿಗಳಿಗೆ ಡಾ ಎಸ್ ಪಿ ಬಿ ಭಾಜನರಾಗಿದ್ದಾರೆ.
ಜನ್ಮದಿನದ ಈ ಸಂದರ್ಭದಲ್ಲಿ, ಇನ್ನೂ ಸಾವಿರಾರು ಹಾಡುಗಳು ಇವರ ಕಂಠಸಿರಿಯಿಂದ ಹರಿದು ಬರಲಿ, ದೇವರು ಆಯುರಾರೋಗ್ಯವನ್ನು ಕರುಣಿಸಿ ಸದಾ ಕಲಾದೇವಿಯ ಸೇವೆ ನಡೆಯುವಂತಾಗಲಿ ಎಂಬುದೇ ನಮ್ಮ ಹಾರೈಕೆ.[ಎಸ್ ಪಿ ಬಾಲಸುಬ್ರಮಣ್ಯಂ ಅವರ ಫೇಸ್ ಬುಕ್ ಪುಟ]


Click it and Unblock the Notifications











