ದೆಹಲಿ ರೇಪ್ 'ಜಾಸ್ಮಿನ್ ಡಾಟ್ 5' ಹಾಡು ಬಿಡುಗಡೆ
ಇತ್ತೀಚಿನ ದಿನಗಳಲ್ಲಿ ಪ್ರತಿದಿನ ಹೆಣ್ಣಿನ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ. ಮನುಷ್ಯನ ಬದಲಾದ ಜೀವನ ಶೈಲಿಯೂ ಇದಕ್ಕೆ ಪ್ರಮುಖ ಕಾರಣ. ಕಳೆದ ವರ್ಷ ದೇಶಾದ್ಯಂತ ದೊಡ್ಡ ಸುದ್ದಿಯಾದ ದೆಹಲಿಯ ನಿರ್ಭಯ ಎಂಬ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರದ ಪ್ರಕರಣವನ್ನು ಆಧಾರವಾಗಿಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ ಕನ್ನಡ ಚಿತ್ರವೊಂದು ನಿರ್ಮಾಣವಾಗಿದೆ. ಚಿತ್ರದ ಹೆಸರು 'ಜಾಸ್ಮಿನ್ ಡಾಟ್ 5'.
ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿರುವವರು ಕೃಷ್ಣ. ಇವರದೇ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಮಹಿಳಾ ಆಯೋಗದ ಪ್ರಮಿಳಾ ನೇಸರ್ಗಿ, ಲಹರಿ ಧ್ವನಿ ಸುರುಳಿ ಸಂಸ್ಥೆಯ ವೇಲು, 'ಉಗ್ರಂ' ಚಿತ್ರದ ಶ್ರೀಮುರುಳಿ ಅವರು 'ಜಾಸ್ಮಿನ್ ಡಾಟ್ 5' ಸಿ.ಡಿ.ಗಳನ್ನು ಲೋಕಾರ್ಪಣೆ ಮಾಡಿದರು.[ಇಲ್ಲೂ ಬಾಯ್ ಫ್ರೆಂಡ್ ಎದುರೇ ಗ್ಯಾಂಗ್ ರೇಪ್...!]
ಈ ಚಿತ್ರದ ನಾಯಕ ಮೋಹನ್ ಹಾಗೂ ನಿರ್ಮಾಪಕ ವಿನೋದ್ ಕುಮಾರ್ ಸ್ವಂತ ಅಣ್ಣ ತಮ್ಮಂದಿರು. ಸಹೋದರನ ನಾಯಕನಾಗುವ ಆಸೆಯನ್ನು ಈಡೇರಿಸುವ ಸಲುವಾಗಿ ಹಾಗೂ ಜನತೆಗೆ ಉತ್ತಮ ಸಂದೇಶವನ್ನು ನೀಡುವ ಉದ್ದೇಶದಿಂದ ಈ ಚಿತ್ರ ನಿರ್ಮಾಣ ಮಾಡಿರುವುದಾಗಿ ನಿರ್ಮಾಪಕ ವಿನೋದ್ ಕುಮಾರ್ ಹೇಳಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]ಸಂಜೀವ್ ಹಾಗೂ ಶ್ರೀಹರ್ಷ ಸೇರಿ ಈ ಚಿತ್ರದ ಹಾಡುಗಳಿಗೆ ಸಂಗೀತ ಒದಗಿಸಿದ್ದಾರೆ. 'ಉಗ್ರಂ' ನ ರವಿ ಬಸ್ರೂರು ಹಿನ್ನೆಲೆ ಸಂಗೀತ ಮಾಡಿದ್ದಾರೆ. ನವ್ಯ ಪ್ರಮುಖ ನಾಯಕಿಯಾಗಿದ್ದು ಮಾನಸ ದ್ವಿತೀಯ ನಾಯಕಿ ಪಾತ್ರ ನಿರ್ವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರದ 2 ಹಾಡುಗಳು ಹಾಗೂ ಪ್ರೋಮೋವನ್ನು ತೋರಿಸಲಾಯಿತು. ಕಥೆಯಲ್ಲಿ ತಾನೂ ಒಂದು ಪಾತ್ರವಾಗಿ ಮೂಡಿ ಬಂದಿರುವ ಬಸ್ ಆಕಾರದ ಡಬ್ಬಿಯೊಳಗಿಂದ ಸಿ.ಡಿ.ಗಳನ್ನು ಹೊರತೆಗೆದು ಅತಿಥಿಗಳು ಬಿಡುಗಡೆ ಮಾಡಿದರು.
ಇದೇ ಸಂದರ್ಭದಲ್ಲಿ ನಿರ್ಮಾಪಕ ವಿನೋದ್ ಕುಮಾರ್ ತಮ್ಮ ಇನ್ನೊಂದು ಚಿತ್ರದ ಟೈಟಲನ್ನು ಉದ್ಘಾಟಿಸಿದರು 'ಸ್ಕ್ರಾಪ್' ಎಂಬ ಈ ಚಿತ್ರವನ್ನು ಎಸ್.ಆರ್.ವಿದಾ ನಿರ್ದೇಶಿಸುತ್ತಿದ್ದಾರೆ. ಜಾಸ್ಮಿನ್ ಚಿತ್ರಕ್ಕೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ವಿದಾ ಈ ಚಿತ್ರವನ್ನು ಜುಲೈ ತಿಂಗಳಿಂದ ಪ್ರಾರಂಭಿಸಲಿದ್ದಾರೆ.
ಸಮಾರಂಭವನ್ನುದ್ದೇಶಿಸಿ ಮಾತನಾಡಿದ ನಿರ್ದೇಶಕ ಕೃಷ್ಣ ಇಲ್ಲೇ ಸ್ವರ್ಗ, ಇಲ್ಲೇ ನರಕ ಎಂಬ ಮಾತನ್ನು ನಂಬಿದವನು ನಾನು. ಪಾಪಕೃತ್ಯಗಳನ್ನು ಮಾಡಿದವರು ಕಾನೂನಿನ ಹಿಡಿತದಿಂದ ತಪ್ಪಿಸಿಕೊಳ್ಳಬಾರದು. ಅಂಥವರಿಗೆ ಉಗ್ರ ಶಿಕ್ಷೆಯಾಗಬೇಕು ಎಂಬ ಉದ್ದೇಶವಿಟ್ಟುಕೊಂಡು ಈ ಚಿತ್ರದ ಸ್ಕ್ರಿಪ್ಟ್ ಮಾಡಿದ್ದೇನೆ ಎಂದು ತಮ್ಮ ಚಿತ್ರದ ಆಶಯವನ್ನು ವಿವರಿಸಿದರು. ದೆಹಲಿ, ಮೈಸೂರು ಮತ್ತು ಮಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಿರುವುದಾಗಿಯೂ ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಪ್ರಮಿಳಾ ನೇಸರ್ಗಿ ಅವರು ಮಾತನಾಡುತ್ತಾ, 'ಜಾಸ್ಮಿನ್' ಎಂದರೆ ಮಲ್ಲಿಗೆ ಇದರ ಪರಿಮಳದಂತೆ ಚಿತ್ರವೂ ಜನರನ್ನು ತಲುಪಲಿ ಇಂಥ ಚಿತ್ರಗಳು ಸಮಾಜವನ್ನು ಬದಲಾಯಿಸಲು ಎಂದು ಹೇಳಿದರು. ನಟ ಮುರುಳಿ ಮಾತನಾಡಿ ನಾಯಕ ಮೋಹನ್ ಒಳ್ಳೆ ನೃತ್ಯಪಟು. ಆತನಿಗೆ ಉತ್ತಮ ಭವಿಷ್ಯವಿದೆ. ಇಂಡಸ್ಟ್ರೀಯಲ್ಲಿ ಆತ ಬೆಳೆಯಲಿ, ಮೆಸೇಜ್ ಕೊಡುವ ಸಿನಿಮಾ ಇದಾಗಿರುವುದರಿಂದ ಬೇಗನೇ ಜನರನ್ನು ತಲುಪಲಿದೆ ಎಂದು ಹೇಳಿದರು.
ನಾಯಕ ಮೋಹನ್ ಮಾತನಾಡಿ ಚಿಕ್ಕಂದಿನಿಂದಲೂ ಹೀರೋ ಆಗಬೇಕೆಂದು ಆಸೆ ಪಟ್ಟಿದ್ದೆ. ಕುಟುಂಬದವರ ಸಹಕಾರದಿಂದ ಇಂಥ ಒಳ್ಳೇ ಸಿನಿಮಾದಿಂದ ಇಂಡಸ್ಟ್ರೀಗೆ ಬರುತ್ತಿದ್ದೇನೆ ಎಂದು ಹೇಳಿಕೊಂಡರು. ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಮೇ ತಿಂಗಳಲ್ಲಿ ರಿಲೀಸ್ ಮಾಡುವ ಸಿದ್ಧತೆಯನ್ನು ಚಿತ್ರತಂಡ ಮಾಡಿಕೊಂಡಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












