ಕನ್ನಡಕ್ಕೆ ಬಾಲಿವುಡ್ ತಾರೆ ಭೂಮಿಕಾ ಚಾವ್ಲಾ
ಬಾಲಿವುಡ್ ತಾರೆ ಭೂಮಿಕಾ ಚಾವ್ಲಾ ಕಡೆಗೂ ಕನ್ನಡ ಚಿತ್ರಕ್ಕೆ ಎಸ್ ಎಂದಿದ್ದಾರೆ. ಥ್ರಿಲ್ಲರ್ ಮಂಜು ನಿರ್ದೇಶಿಸಲಿರುವ ಪೊಲೀಸ್ ಸ್ಟೋರಿ 3 ಚಿತ್ರಕ್ಕೆ ಭೂಮಿಕಾ ಆಗಮನ ಬಹುತೇಕ ಖಚಿತವಾಗಿದೆ. ಈ ಚಿತ್ರದ ನಾಯಕ ನಟ ಕಿಚ್ಚ ಸುದೀಪ್. ಈ ಚಿತ್ರವ ಮತ್ತೊಂದು ವಿಶೇಷವೆಂದರೆ, ಕೇವಲ 12 ಗಂಟೆಗಳಲ್ಲಿ ಚಿತ್ರೀಕರಿಸಲು ಉದ್ದೇಶಿಸಿರುವುದು.
ಆರು ಮಂದಿ ನಿರ್ದೇಶಕರು ಹಾಗೂ ಆರು ಮಂದಿ ಕ್ಯಾಮೆರಾಮೆನ್ಗಳ ಕೈಜೋಡಿಸಿ ದಾಖಲೆ ಸಮಯದಲ್ಲಿ ಚಿತ್ರವನ್ನು ಮುಗಿಸಲಿದ್ದಾರೆ ಎಂದಿದ್ದಾರೆ ಥ್ರಿಲ್ಲರ್ ಮಂಜು. ಚಿತ್ರದ ಮುಖ್ಯ ಸೂತ್ರಧಾರ ಅವರೇ. ಆನಂದ್ ಪಿ ರಾಜು, ಸಾಧು ಕೋಕಿಲ, ವಿಕ್ಟರಿ ವಾಸು, ಜೆ ಜಿ ಕೃಷ್ಣ ಹಾಗೂ ಶಂಕರ್ ಜೊತೆ ಥ್ರಿಲ್ಲರ್ ಮಂಜು ಆಕ್ಷನ್, ಕಟ್ ಹೇಳಲಿರುವ ನಿರ್ದೇಶಕರು.
ಕೆ ಕೃಷ್ಣಕುಮಾರ್, ಮನೋಹರ್, ಜನಾರ್ದನ ಬಾಬು, ಜೆ ಜಿ ಕೃಷ್ಣ, ಎಂ ಆರ್ ಸೀನು ಹಾಗೂ ಆನಂದ್ ಛಾಯಾಗ್ರಾಹಕರಾಗಿ ಕೆಲಸ ಮಾಡಲಿದ್ದಾರೆ. 'ಸುಗ್ರೀವ' ಚಿತ್ರವನ್ನು 10 ಮಂದಿ ನಿರ್ದೇಶಕರು ಹಾಗೂ ಅಷ್ಟೇ ಸಂಖ್ಯೆಯ ಛಾಯಾಗ್ರಾಹಕರು ಕೇವಲ 18 ಗಂಟೆಗಳಲ್ಲಿ ಚಿತ್ರೀಕರಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಈಗ ಈ ದಾಖಲೆಯನ್ನು ಅಳಿಸಲು ಥ್ರಿಲ್ಲರ್ ಮಂಜು ಮುಂದಾಗಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











