ಮಠ, ಎದ್ದೇಳು ಮಂಜುನಾಥ ಈಗ ಪುಸ್ತಕ ರೂಪದಲ್ಲಿ ಲಭ್ಯ
ಸದಾ ಏನಾದರೊಂದು ಹೊಸ ಹೊಸ ಪ್ರಯೋಗಗಳನ್ನು ಮಾಡುವುದರಲ್ಲಿ ಚಲನಚಿತ್ರ ನಿರ್ದೇಶಕ ಗುರು ಪ್ರಸಾದ್ ನಿಸ್ಸೀಮರು. ಅವರ ನಿರ್ದೇಶನದ ಎರಡು ಚಿತ್ರಗಳಾದ ಮಠ ಮತ್ತು ಎದ್ದೇಳು ಮಂಜುನಾಥ ಚಿತ್ರಗಳು ಪುಸ್ತಕ ರೂಪದಲ್ಲಿ ಲಭ್ಯ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ಪುಸ್ತಕಗಳನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ(ಮೇ.2) ಬಿಡುಗಡೆ ಮಾಡಿದರು.
ಮುಖ್ಯಮಂತ್ರಿಗಳು ಮಾತನಾಡುತ್ತಾ, ಕಾದಂಬರಿಗಳು ಚಲನಚಿತ್ರಗಳಾಗಿವೆ. ಆದರೆ ಚಲನಚಿತ್ರಗಳು ಪುಸ್ತಕ ರೂಪದಲ್ಲಿ ಬಂದಿರುವುದು ಇದೇ ಮೊದಲು ಎಂದು ಗುರುಪ್ರಸಾದ್ ಅವರನ್ನು ಪ್ರಶಂಶಿಸಿದರು. ಟೋಟಲ್ ಕನ್ನಡ ಸಂಸ್ಥೆ ಈ ಪುಸ್ತಕಗಳನ್ನು ಪ್ರಕಟಿಸಿದೆ ಎಂದು ಗುರು ಪ್ರಸಾದ್ ತಿಳಿಸಿದರು. ಅಕಾಡೆಮಿಕ್ ಶಿಸ್ತು ಮತ್ತು ಮನರಂಜನೆಯ ಹಿನ್ನೆಲೆಯಲ್ಲಿ ಈ ಪುಸ್ತಕಗಳನ್ನು ಹೊರತರಲಾಗಿದೆ.
ತಮ್ಮ ಚೊಚ್ಚಲ ಚಿತ್ರ ಮಠ ಮೂಲಕ ಗಮನಸೆಳೆದ ನಿರ್ದೇಶಕ ಗುರುಪ್ರಸಾದ್. ಈ ಚಿತ್ರದಲ್ಲಿ ಮಠಮಾನ್ಯಗಳಲ್ಲಿ ನಡೆಯುವ ಒಳಚಿತ್ರಣವನ್ನು ಹಾಸ್ಯ ಶೈಲಿಯಲ್ಲಿ ಪ್ರೇಕ್ಷಕರಿಗೆ ಉಣಬಡಿಸಿರುವುದು ವಿಶೇಷ. ನವರಸ ನಾಯಕ ಜಗ್ಗೇಶ್ ಅಭಿನಯದ 100ನೇ ಚಿತ್ರವಿದು. ವಿ ಮನೋಹರ್ ಸಂಗೀತ ಸಂಯೋಜನೆಯ ಹಾಡುಗಳು ಜನಪ್ರಿಯವಾಗಿವೆ.
ಮಠ ಬಳಿಕ ತೆರೆಕಂಡ ಗುರುಪ್ರಸಾದ್ ಅವರ ಎರಡನೇ ಚಿತ್ರ ಎದ್ದೇಳು ಮಂಜುನಾಥ. ಮೈಗಳ್ಳ, ನಿರುದ್ಯೋಗಿ ಮಂಜುನಾಥನ ಪಾತ್ರದಲ್ಲಿ ಜಗ್ಗೇಶ್ ಅಭಿನಯ ಅಮೋಘವಾಗಿ ನಟಿಸಿರುವ ಚಿತ್ರ. ಕುರುಡನಾಗಿ ತಬಲಾ ನಾಣಿ ಅವರ ಪಾತ್ರವೂ ಅಷ್ಟೇ ಸೊಗಸಾಗಿದೆ. ಈ ಚಿತ್ರದ ನಿರ್ದೇಶನಕ್ಕಾಗಿ ಗುರು ಪ್ರಸಾದ್ ಅವರಿಗೆ ಫಿಲಂಫೇರ್ ಪ್ರಶಸ್ತಿ ಲಭಿಸಿದೆ. ಸಮಾಜದ ಅಂಧಕಾರವನ್ನು ತಮ್ಮ ಚಿತ್ರಗಳ ಮೂಲಕ ಸೂಚ್ಯವಾಗಿ ಪ್ರೇಕ್ಷಕರ ಮುಂದಿಡುವುದು ಗುರು ಅವರ ಚಿತ್ರಗಳ ಸ್ಪೆಷಾಲಿಟಿ.


Click it and Unblock the Notifications











