ಆ.14ಕ್ಕೆ ರಾಜ್ ದ ಶೋ ಮ್ಯಾನ್ V/s ಪ್ರೇಮ್ ಕಹಾನಿ
ಸತತ ಸೋಲುಗಳಿಂದ ಕಂಗೆಟ್ಟಿದ್ದ ಕನ್ನಡ ಚಿತ್ರರಂಗದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆ ಕಾಣುತ್ತಿದೆ. ಈ ತಕ್ಕಮಟ್ಟಿನ ಚೇತರಿಕೆ ಹೀಗೇ ಮುಂದುವರಿಯಲಿದೆಯೇ ಇಲ್ಲವೇ ಎಂದು ಈ ತಿಂಗಳಲ್ಲಿ ನಿರ್ಧಾರವಾಗಬಹುದು. ಹೇಗೆಂದರೆ ಬಹು ನಿರೀಕ್ಷೆಯ ಚಿತ್ರಗಳಾದ 'ರಾಜ್' ಮತ್ತು 'ಪ್ರೇಮ್ ಕಹಾನಿ' ಒಂದೇ ದಿನ ಬಿಡುಗಡೆಗೊಳ್ಳುತ್ತಿದೆ. ಈ ಎರಡೂ ಚಿತ್ರಗಳು ನಿರೀಕ್ಷೆಯಂತೆ ಗೆದ್ದರೆ ಬಿರುಗಾಳಿ ವೇಗದಲ್ಲಿ ಚಿತ್ರರಂಗ ಚೇತರಿಸಿಕೊಳ್ಳಲಿದೆ. ಇಲ್ಲದಿದ್ದರೆ ಗಾಂಧಿನಗರ ನಿಂತ ನೀರಾಗಬಹುದು.
ಸುಮಾರು ಹತ್ತು ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ರಾಜ್ ಚಿತ್ರ ಸದ್ಯದ ಮಟ್ಟಿಗೆ ಬಿರುಗಾಳಿ ಎಬ್ಬಿಸಿರುವುದಂತೂ ನಿಜ. ಚಿತ್ರ ಹೆಚ್ಚುಕಮ್ಮಿ ಆಗಸ್ಟ್ 14ರಂದು ತೆರೆಕಾಣುವುದು ಪಕ್ಕಾ ಆಗಿದೆ. ವರಮಹಾಲಕ್ಷ್ಮಿ ಹಬ್ಬದ ದಿನದಂದು 'ಪ್ರೇಮ್ ಕಹಾನಿ' ಚಿತ್ರ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದ ನಿರ್ದೇಶಕ ಚಂದ್ರು ಮತ್ತೆ ಆಗಸ್ಟ್ 7ರಂದು ಬರುತ್ತೇವೆ ಎಂದಿದ್ದರು. ಈಗ 'ರಾಜ್' ಚಿತ್ರದ ಜೊತೆಯಲ್ಲೇ ಬರಲು ಮನಸ್ಸು ಮಾಡಿದ್ದಾರೆ.
ಈ ವರ್ಷ ಬಿಡುಗಡೆಗೊಂಡ ಚಿತ್ರಗಳಲ್ಲಿ ಎದ್ದೇಳು ಮಂಜುನಾಥ, ಕನ್ನಡದ ಕಿರಣ್ ಬೇಡಿ, ಈ ಶತಮಾನದ ವೀರಮದಕರಿ, ಸವಾರಿ,ಜಂಗ್ಲಿ ಮತ್ತು ಅಂಬಾರಿ ಚಿತ್ರಗಳು ಗೆದ್ದಿದ್ದರೆ, ಜೋಷ್, ವೆಂಕಟ ಇನ್ ಸಂಕಟ ಮತ್ತು ಬಿರುಗಾಳಿ ಚಿತ್ರಗಳು ನಿರ್ಮಾಪಕರಿಗೆ ಮೋಸ ಮಾಡಲಿಲ್ಲ. ಹಾಗೆಯೇ ದೊಡ್ಡ ಬಜೆಟ್ ನಲ್ಲಿ ನಿರ್ಮಾಣಗೊಂಡ ದುಬೈ ಬಾಬು, ಯೋಧ, ಹೊಡಿಮಗಾ, ನಂಯಜಮಾನ್ರು ಮತ್ತು ಸರ್ಕಸ್ ಚಿತ್ರಗಳು ದಯನೀಯ ಸೋಲುಂಡಿವೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











