ಟೈಮ್ಸ್ ಅಭಿಯಾನ: ಕನ್ನಡಿಗರ ಕಿರುಚಿತ್ರ ಅ-ನಾಗರಿಕ

"ಆಯ್ತು ಮೇಷ್ಟ್ರೆ, ಬರ್ತೀನಿ, ಅಪ್ಪ ಬರ್ತೀನಿ, ಅಮ್ಮ ಬರ್ತೀನಿ" ಅಂತ ಕೆಂಚ ಎಲ್ಲರಿಗೂ ಹೇಳಿ, ಅಲ್ಲಿಯೇ ಹತ್ತಿರದಲ್ಲಿಯೇ ನಿಂತು ಗಡ-ಗಡ ಶಬ್ಧಮಾಡುತ್ತ-ಧೂಳು ಉಗುಳುತ್ತಲಿದ್ದ ಬಸ್ಸನ್ನೇರಿ ಕೂತ.
ಬಸ್ ಹೊರಟಿತು ಪಟ್ಟಣದ ಕಡೆಗೆ. ಕೆಂಚನ ಮನದಲ್ಲಿ ಆತಂಕ ಮನೆಮಾಡಿತ್ತು, "ಅಲ್ಲಿ ಎಲ್ಲಾ ದೊಡ್ಡ ದೊಡ್ಡ ವಿದ್ಯಾವಂತ ಜನ ಇರ್ತಾರೆ, ನನ್ನಂತಹ ಹಳ್ಳಿ-ಹೈಕಳ ಹೇಗೆ ವ್ಯವಹಾರ ಮಾಡಬೇಕು? ನಮ್ಮಂತಹ ಮಣ್ಣಿನ ಮಕ್ಕಳು, ಅಲ್ಲಿಯ ತಂತ್ರಜ್ಞಾನದ ಮಕ್ಕಳೊಟ್ಟಿಗೆ ಹೇಗಿರಬೇಕು? ಎಷ್ಟೊಂದು ಶುಭ್ರವಾಗಿರ್ತಾರೆ ಪೇಪರ್ನಲ್ಲಿ ನೋಡದಾಗ, ಅಂತಹವರ ಮುಂದೆ ನಾವೆ ಕೊಳಕಾಗಿದ್ದೀವಿ ಅನ್ಸುತ್ತಲ್ಲ. ನನ್ನಿಂದ ಇನ್ನೊಬ್ರಿಗೆ ತೊಂದ್ರೆಯಾಗದಂತೆ ಹೇಗೆ ಇರ್ಬೇಕು...." ಈ ತರಹದ ಆಲೋಚನೆಗಳಲ್ಲಿ ಅವನ ಕಣ್ಣುಗಳಿಗೆ ನಿದ್ದೇನೆ ಸುಳಿಯಲಿಲ್ಲ.
ಹಳ್ಳಿಯಿಂದ ಬಸ್ಸು ದೂರವಾದಂತೆ ಅವನ ಆತಂಕ ಇಮ್ಮಡಿಯಾಗುತ್ತಿತ್ತು. ಅದರಲ್ಲೂ ಮೊದಲಬಾರಿಗೆ ಪಟ್ಟಣಕ್ಕೆ ಹೋಗುತ್ತಾ ಇದ್ದಿದ್ದರಿಂದ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿತ್ತು. ಆದರೆ ಹೇಗಾದ್ರು ಮಾಡಿ ಕೆಲ್ಸ ಗಿಟ್ಟಿಸಿಕೊಂಡು ಪಟ್ಟಣದವರಿಗಿಂತ ಹಳ್ಳಿಯವರೇನು ಕಡಿಮೆ ಅಂತ ತೋರಿಸಬೇಕೆಂಬ ಛಲ ಬಲವಾಗಿತ್ತು.
ಹಲವಾರು ಘಂಟೆಗಳ ಅವನ ಯೋಚನೆಗಳ ಡೊಂಬರಾಟ ಮುಗಿಯುವ ಮೊದಲೆ ಕೂಗು ಕೇಳಿತ್ತು, "ಬೆಂಗಳೂರು ಬಂತು ಇಳೀರಿ" ಅಂತ.ಅಲ್ಲಿಂದ ಶುರುವಾಯ್ತು ಅವನ ಗ್ರಹಚಾರದ ಕಾಟ. ವಿದ್ಯಾವಂತರೆ ಎಲ್ಲಿ ಬೇಕು ಅಲ್ಲಿ ಬಾಳೆಹಣ್ಣಿನ ಸಿಪ್ಪೆ ಎಸೆಯೋದು, ಉಗುಳೋದು ನೋಡಿ, ನನಗಷ್ಟೆಯೇಕೆ ತಪ್ಪು ಅನ್ನಿಸ್ತಿದೆ, ಅವರಿಗೂ ತಪ್ಪು ಅನ್ನಿಸಿದ್ರೆ ಹೀಗೆ ಮಾಡ್ತಿರಲಿಲ್ಲವಲ್ಲ ಅಂತ ಗಲಿಬಿಲಿಗೊಂಡ.
ಪಟ್ಟಣದ ಮಂದಿಯ ಬಗ್ಗೆ, ವ್ಯವಸ್ಥೆಯ ಬಗ್ಗೆ ಅವನಿಗಿದ್ದ ಭಾವನೆಗಳು ಒಂದೊಂದಾಗಿ ಸಾಯುತ್ತಾ ಹೋದವು, ಅದಕ್ಕೆ ಮುಖ್ಯ ಕಾರಣವಾಗಿದ್ದು, ಇಲ್ಲಿಯ ಜನರ ಬೇಜವಾಬ್ದಾರಿ ನಡವಳಿಕೆ. "ಹಳ್ಳೀಲು ಕೆಲವರು ಕೆಲವೊಂದು ಸಣ್ಣ ಪುಟ್ಟ ತಪ್ಪು ಮಾಡ್ತಾಯಿರ್ತಾರೆ ಆದರೆ ಅವರು ಅವಿದ್ಯಾವಂತರು. ಆದರೆ, ಇಲ್ಲಿ ವಿದ್ಯಾವಂತರೆನಿಸಿಕೊಂಡವರೆ ಅವಿದ್ಯಾವಂತರಿಗಿಂತ ಕೀಳಾಗಿದ್ದಾರಲ್ಲ" ಅಂತ ಬೇಸರಗೊಂಡ. ಪಟ್ಟಣ-ಪಟ್ಟಣದ ಮಂದಿಯ ಬಗ್ಗೆ ಆತಂಕದ ಬದಲಾಗಿ ಅಸಹ್ಯ ಮೂಡುವಂತಾಯ್ತು. ಒಂದೇ ದಿನದಲ್ಲಿ, ಜನರ ಭಾವನೆಗಳಿಗೆ ಸ್ಪಂದಿಸದ, ಅನಾಗರಿಕರಂತೆ ನಡೆದುಕೊಳ್ಳುವ ಯಾಂತ್ರಿಕ ಪಟ್ಟಣದ ಜೀವನ ಅವನನ್ನು ಬೇಸ್ತು ಬೀಳಿಸಿತ್ತು.
ಸಾಕಪ್ಪಾ ಇಲ್ಲಿಯ ಜೀವನ, ಹಳ್ಳಿಯ ಜೀವನವೆ ನೆಮ್ಮದಿ ಅಂತ ಮತ್ತೆ ಹಳ್ಳಿಗೆ ಹೋಗುವಂತಾಗಲು ಏನೇನು ಕಾರಣಗಳು ಅಂತ ಬಿಂಬಿಸಲು ಬೈಟೂ ಕಾಫೀ ಬಳಗ ಮಾಡಿದ ಪ್ರಯತ್ನವೆ ಈ ಕಿರುಚಿತ್ರ "ಅನ್-ಸಿವಿಲೈಜ್ಡ್". ಟೈಮ್ಸ್-ಆಫ್-ಇಂಡಿಯಾ ಪತ್ರಿಕೆಯವರು ಪ್ರಾರಂಭ ಮಾಡಿರುವ "ಭಾರತದ ಜೀವನದಲ್ಲಿ ಒಂದು ದಿನ"ದ ಶೀರ್ಷಿಕೆಯ ಅಡಿಯಲ್ಲಿ ಈ ದೃಶ್ಯಾವಳಿಯನ್ನು ಹಾಕಲಾಗಿದೆ.
ಇಲ್ಲಿಯ ನಾಗರಿಕರು ಅಂತ ಅನ್ನಿಸಿಕೊಂಡವರು ಅ-ನಾಗರಿಕರಾಗಿ ಯಾಕೆ ಅವನಿಗೆ ಕಂಡರು ಅಂತ ಈ ಕೊಂಡಿಯಲ್ಲಿ(http://goo.gl/Jkx84) ನೋಡಿ ಇಷ್ಟವೆನಿಸಿದರೆ ವೋಟ್ ಮಾಡಿ ಗೆಲ್ಲಿಸಿ, ಆಗ ಈ ಕಿರುಚಿತ್ರ ಎಲ್ಲಾ ಜನರಿಗೂ ತಲುಪಲು ಸಹಾಯ ಮಾಡಿದ ಹಾಗೆ ಆಗುತ್ತೆ.
ನಮ್ಮಲ್ಲಿ ಎಲ್ಲರೂ ಹೀಗಿದ್ದಾರೆ ಅಂತಲ್ಲ, ಆದರೆ ಕೆಲವರಲ್ಲಿ ಸೇರಿಕೊಂಡಿರುವ ಈ ತರಹದ ಭಾವನೆಗಳನ್ನು ಹೊರಹಾಕಲು, ಅವರು ಮಾಡುತ್ತಿರುವ ತಪ್ಪನ್ನು ತಿದ್ದಲು ನಾವು ಮಾಡಿರುವ ಸಣ್ಣ ಪ್ರಯತ್ನವಿದು. ನಾಗರಿಕ ಸಮಾಜ ನಾಗರಿಕವಾಗಿಯೆ ಉಳಿಯಲು ಪ್ರಯತ್ನ ಪಡೋಣ....ಕೈ ಜೊಡಿಸಿ....


Click it and Unblock the Notifications











