ಜಾತಿ, ಭೇಧ ಮರೆತ ವಿನಾಯಕ ಗೆಳೆಯರ ಬಳಗ
ನಾಗೇಂದ್ರ ಪ್ರಸಾದ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ 'ವಿನಾಯಕ ಗೆಳೆಯರ ಬಳಗ' ಚಿತ್ರದ ಚಿತ್ರೀಕರಣ ಕಳೆದ 25 ದಿನಗಳಿಂದ ದೊಡ್ಡಬಳ್ಳಾಪುರದಲ್ಲಿ ನಿರಂತರವಾಗಿ ನಡೆದಿದ್ದು ಕಳೆದ ವಾರ ಚಿತ್ರದ ಕ್ಲೈಮ್ಯಾಕ್ಸ್ ಹಾಡೊಂದನ್ನು ಬಹಳ ವಿಶೇಷವಾಗಿ ಚಿತ್ರೀಕರಿಸಲಾಯಿತು. ಗ್ರಾಮದ ತುಂಬ ತಳಿರುತೋರಣ ಕಟ್ಟಿ 108 ವಿನಾಯಕ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಗ್ರಾಮದ ನೂರಾರು ಗ್ರಾಮಸ್ಥರ ನಡುವೆ ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಎರಡು ರಾತ್ರಿ ಒಂದು ಹಗಲು ನಿರಂತರವಾಗಿ ನಡೆಸಲಾಯಿತು.
ಜಾತಿ, ಬೇಧ ಮರೆತು ಗ್ರಾಮಸ್ಥರು ಈ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಇದರೊಂದಿಗೆ ದೊಡ್ಡಬಳ್ಳಾಪುರ ಭಾಗದ ಚಿತ್ರೀಕರಣ ಮುಗಿದು ಉಳಿದ ಹಾಡು ಹಾಗೂ ಮಾತಿನ ಭಾಗವನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗುವುದು ಎಂದು ನಿರ್ಮಾಪಕರಾದ ಜಿ.ಟಿ.ಪಂಪಾಪತಿ ತಿಳಿಸಿದ್ದಾರೆ. ವಿಶೇಷ ಎಂದರೆ ಈ ಹಾಡಿನ ಚಿತ್ರೀಕರಣದಲ್ಲಿ ಚಿತ್ರದ ಬಹುತೇಕ ಎಲ್ಲಾ ಕಲಾವಿದರು ಪಾಲ್ಗೊಂಡಿದ್ದರು.
ಜಿ.ಟಿ. ಪ್ರೊಡಕ್ಷನ್ಸ್ ಲಾಂಛನದಲ್ಲಿ ಜಿ.ಟಿ.ಪಂಪಾಪತಿ ಈ ಚಿತ್ರ ನಿರ್ಮಿಸುತ್ತಿದ್ದು ವಿ.ನಾಗೇಂದ್ರ ಪ್ರಸಾದ್ ನಿರ್ದೇಶನವಿದೆ. 1985 ರಲ್ಲಿ ನಡೆದ ಒಂದು ಲವ್ ಸ್ಟೋರಿಯನ್ನು ಗಣಪತಿ ಉತ್ಸವದ ಹಿನ್ನೆಲೆಯಲ್ಲಿ ನಿರ್ದೇಶಕರು ಹೇಳ ಹೊರಟಿದ್ದಾರೆ. ವಿ.ಹರಿಕೃಷ್ಣರ ಸಂಗೀತ ಸಂಯೋಜನೆ ಮಳವಳ್ಳಿ ಸಾಯಿ ಕೃಷ್ಣರ ಸಂಭಾಷಣೆ, ಕೆ.ಎಂ.ಪ್ರಕಾಶ್ರ ಸಂಕಲನ, ಸೇಫ್ಟಿ ಪ್ರಕಾಶ್ರ ಛಾಯಾಗ್ರಹಣ ಈ ಚಿತ್ರಕ್ಕಿದ್ದು ವಿಜಯ ರಾಘವೇಂದ್ರ, ಮೇಘನ, ನವೀನ್, ಪ್ರತಾಪ್ ಮುನೇಶ್, ಶೋಭರಾಜ್, ಉಮಾ ಅಲ್ಲದೆ ಗುರುರಾಜ್ ಹೊಸಕೋಟೆ ಮತ್ತು ಚಿ. ಗುರುದತ್ ವಿಶೇಷ ಪಾತ್ರದಲ್ಲಿದ್ದಾರೆ.


Click it and Unblock the Notifications











