ನಾಗತಿ ಐಂದ್ರಿತಾ ಹಗರಣ ಮುಕ್ತಾಯ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯಸ್ಥಿಕೆಯಲ್ಲಿ ಐಂದ್ರಿತಾ ರೇ ಕಪಾಳಮೋಕ್ಷ ಪ್ರಕರಣ ಶುಕ್ರವಾರ ರಾತ್ರಿ ಅಂತೂ ಇಂತೂ ಸುಖಾಂತ್ಯಗೊಂಡಿದೆ. ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಐಂದ್ರಿತಾ ರೇ ಪ್ರಕರಣ ಮುಕ್ತಾಯ ಕಂಡಿದೆ.
ಶುಕ್ರವಾರ ರಾತ್ರಿ ನಡೆದ ಸಭೆಗೆ ಬಂದ ನಟಿ ಐಂದ್ರಿತಾ ರೇ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರಿಗೆ ದೂರಿನ ಪತ್ರ ನೀಡಿದರು. ನಂತರ ಈ ಸಂಬಂಧ ಸುದೀರ್ಘ ಚರ್ಚೆ ನಡೆಸಲಾಯಿತು. ಕೊನೆಗೆ ಐಂದ್ರಿತಾ ಮತ್ತು ನಾಗತಿ ನಡುವೆ ಸಂಧಾನ ಮಾಡುವಲ್ಲಿ ವಾಣಿಜ್ಯ ಮಂಡಳಿ ಸಫಲವಾಗಿದೆ.
ಸಂಧಾನ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್, ಸಂಧಾನ ಸಫಲವಾಗಿದ್ದು ಇಬ್ಬರೂ ಒಟ್ಟಿಗೆ ಕೆಲಸ ಮಾಡುವುದಾಗಿ ಒಪ್ಪ್ಪಿದ್ದಾರೆ.'ನೂರು ಜನ್ಮಕು'ಚಿತ್ರತಂಡದವರ ಅಭಿಪ್ರಾಯವನ್ನು ಪಡೆಯಲಾಯಿತು. ಐಂದ್ರಿತಾ, ನಾಗತಿ ಹಾಗೂ ಚಿತ್ರತಂಡದ ಮಾತುಗಳನ್ನು ಆಲಿಸಿದ ಬಳಿಕ ಇಬ್ಬರು ತಪ್ಪು ಮಾಡಿದ್ದಾರೆ ಎಂಬ ಅಭಿಪ್ರಾಯಕ್ಕೆ ಬರಲಾಯಿತು. ಇಬ್ಬರೂ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂಬ ಅರ್ಥ ಬರುವಂತೆ ಅಂಬರೀಷ್ ಮಾತನಾಡಿದರು.
ಈ ರೀತಿಯ ಘಟನೆಯನ್ನು ತಾವು ಸೇರಿದಂತೆ ಉದ್ಯಮದ ಎಲ್ಲರೂ ಖಂಡಿಸುತ್ತಿದ್ದೇವೆ. ನಾಗತಿಹಳ್ಳಿ ಅವರಿಗೆ ಪಶ್ಚಾತ್ತಾಪ ವ್ಯಕ್ತಪಡಿಸಿದರು. ಐಂದ್ರಿತಾ ಸಹ ಘಟನೆ ನಡೆದ ಕೂಡಲೆ ತರಾತುರಿಯಲ್ಲಿ ಮಾಧ್ಯಮಗಳ ಮುಂದೆ ಹೋಗಿದ್ದು ಸರಿಯಲ್ಲ ಎಂದು ಜಯಮಾಲಾ ಸಂಧಾನ ಸಭೆಯ ಬಳಿಕ ಪ್ರತಿಕ್ರಿಯಿಸಿದರು.
ಸಂಧಾನ ಸಭೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ರಾಕ್ ಲೈನ್ ವೆಂಕಟೇಶ್, ಹಿರಿಯ ಕಲಾವಿದ ದೊಡ್ಡಣ್ಣ, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್, ನಿರ್ಮಾಪಕರ ಸಂಘದ ಅಧ್ಯಕ್ಷ ಕೆ ಸಿ ಎನ್ ಚಂದ್ರಶೇಖರ್, ನಿರ್ಮಾಪಕ ಸಾ.ರಾ.ಗೋವಿಂದು, ನಿರ್ದೇಶಕ ದೊರೆ ಭಗವಾನ್ ಹಾಗೂ ಛಾಯಾಗ್ರಾಹಕ ಸಂತೋಷ್ ರೈ ಪತಾಜೆ ಹಾಜರಿದ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











