ಸ್ವಂತ ಬ್ಯಾನರ್ ನಲ್ಲಿ ಮುರಳಿ ಚಿತ್ರ 'ನಂದೇ'
'ಶಿವಮಣಿ' ಚಿತ್ರದ ಬಳಿಕ ನಾಯಕ ನಟ ಮುರಳಿ ಮತ್ತೊಂದು ಸಾಹಸ ಪ್ರಧಾನ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ತಮ್ಮದೇ ನಿರ್ಮಾಣದ 'ನಂದೇ' ಚಿತ್ರ ಅಕ್ಟೋಬರ್ 19ರಿಂದ ಚಾಲನೆ ಪಡೆದುಕೊಳ್ಳಲಿದೆ. ಹರಿಪ್ರಿಯಾ ನಾಯಕಿಯಾಗಿರುವ ಈ ಚಿತ್ರಕ್ಕೆ ಉಳಿದ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯಬೇಕಾಗಿದೆ.
ಪರೀಕ್ಷಾರ್ಥ ಚಿತ್ರೀಕರಣ ನಂತರ ನೈಜ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದೇವೆ ಎನ್ನುತ್ತಾರೆ ಮುರಳಿ. ಈ ಚಿತ್ರದ ತಾಂತ್ರಿಕ ವರ್ಗದಲ್ಲಿ ಸಾಕಷ್ಟು ಜನಪ್ರಿಯ ತಂತ್ರಜ್ಞರು ಇರುವುದರಿಂದ 'ನಂದೆ' ಬಗ್ಗೆ ಬಹಳಷ್ಟು ಕುತೂಹಲ ಮೂಡಿದೆ. ಕನ್ನಡದಲ್ಲೇ ಅತ್ಯುತ್ತಮ ಚಿತ್ರವಾಗಲಿದೆ ಎಂಬ ವಿಶ್ವಾಸವನ್ನು ಮುರಳಿ ವ್ಯಕ್ತಪಡಿಸಿದ್ದಾರೆ.
'ದಶಾವತಾರಂ' ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದ ರವಿವರ್ಮನ್, ಗಜನಿ ಚಿತ್ರಕ್ಕೆ ಕಲೆ ಬೆರೆಸಿದ್ದ ಸುನಿಲ್ ತಾಂತ್ರಿಕ ಬಳಗದಲ್ಲಿ ಇದ್ದಾರೆ. ಕನಲ್ ಕಣ್ಣನ್ ಸೇರಿದಂತೆ ದಕ್ಷಿಣದ ಖ್ಯಾತ ಸಾಹಸ ಕಲಾವಿದರು ಚಿತ್ರದ ಭಾಗವಾಗಲಿದ್ದಾರೆ ಎನ್ನುತ್ತಾರೆ ಮುರಳಿ. ಪನೊ ವಿಷನ್ ಕ್ಯಾಮೆರಾದಲ್ಲಿ ಸನ್ನಿವೇಶಗಳನ್ನು ಸೆರೆಹಿಡಿಯಲಿರುವುದಾಗಿ ಮುರಳಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











