ಬೆಳ್ಳಿತೆರೆಯಲ್ಲಿ ಡಾನ್ ಮುತ್ತಪ್ಪ ರೈ ಜೀವನ ಚರಿತ್ರೆ
ಮುತ್ತಪ್ಪ ರೈ! ಭೂಗತ ಜಗತ್ತಿನ ಅನಭಿಷಕ್ತ ದೊರೆ. ಈತನ ಜೀವನವನ್ನು ಆಧರಿಸಿದ ಚಿತ್ರ ನಿರ್ಮಿಸಲು ಹಲವು ನಿರ್ಮಾಪಕರು ಯತ್ನಿಸಿದರು. ಡಾನ್ ಯಾರಿಗೂ ಸಮ್ಮತಿಸಲಿಲ್ಲ. ಆಗ ಆತನ ಮೇಲೆ ಹತ್ತಾರು ಕೇಸುಗಳಿದ್ದವು. ಬಳಿಕ ಆತನ ವಿಚಾರಣೆ ನಡೆಯುತ್ತಿತ್ತು. ಆದ್ದರಿಂದ ಯಾರಿಗೂ ಅನುಮತಿ ದೊರೆತಿರಲಿಲ್ಲ.
ಇತ್ತೀಚೆಗೆ ನಿರ್ಮಾಪಕ ಧನ್ರಾಜ್ ಅನುಮತಿ ಪಡೆದುಕೊಂಡಿದ್ದಾರೆ. ಅವರು ನಾಯಕ, ನಾಯಕಿ ನಿರ್ದೇಶಕರ ತಲಾಶೆಯಲ್ಲಿದ್ದಾರೆ. ಎಲ್ಲಾ ಸರಿದೂಗಿದ ಕೂಡಲೇ ಚಿತ್ರೀಕರಣ ಆರಂಭ. ಈ ಚಿತ್ರ ರಾಜ್ಯದ ಗಡಿ ಮೀರಿ ಪ್ರದರ್ಶಿತವಾಗಲಿದೆ ಎಂಬ ಆಶಾಭಾವ. ಏಕೆಂದರೆ ಆತ ನಡೆಸಿದ ಕಾರುಬಾರು ಹಾಗೆ!
ಕರಾವಳಿಯ ಪುತ್ತೂರಿನ ಯುವಕನೊಬ್ಬ ಬ್ಯಾಂಕ್ ಉದ್ಯೋಗದ ಮೇಲೆ ಬೆಂಗಳೂರಿಗೆ ಬರುತ್ತಾನೆ. ಪರಿಸ್ಥಿತಿ ಒತ್ತಡಕ್ಕೆ ಮಣಿದು ಭೂಗತ ಜಗತ್ತನು ಪ್ರವೇಶಿಸುತ್ತಾನೆ.ಭೂಗತ ಜಗತ್ತಿನ ದೊರೆಯಾಗುತ್ತಾನೆ. ಅವನ ಸುತ್ತ-ಮತ್ತ ಅಭೇದ್ಯ ಜಾಲವೇ ಬೆಳೆಯುತ್ತದೆ. ವಿವಿಧ ಕಾರಣದಿಂದ ಆತ ದುಬೈಗೆ ತೆರಳುತ್ತಾನೆ. (ವಿದೇಶಿ ಚಿತ್ರೀಕರಣವೇ?)
ದಿನ ಕಳೆದಂತೆ ಬಂದೂಕಿನ ಮಾತುಗಳು ಬೇಸರವೆನಿಸುತ್ತದೆ. ಬಂದೂಕು ಕೆಳಗಿಟ್ಟು ಕಾನೂನಿಗೆ ಶರಣಾಗುತ್ತಾನೆ. ಕಾನೂನಿನ ಚೌಕಟ್ಟಿನಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಾನೆ. ತನ್ನ ಮುಂದಿನ ಬದುಕು ಸಮಾಜಸೇವೆಗೆ ಮೀಸಲು ... ಚಿತ್ರಕಥೆ ಹೀಗೆ ಸಾಗುತ್ತದೆ.
ನಿರ್ದೇಶಕ ಕಥೆಯನ್ನು ಯಾವ ರೀತಿ ನಿರೂಪಿಸುತ್ತಾನೆಂಬ ನಿರೀಕ್ಷೆ. ರೈ ಸುತ್ತ ಯಾವ್ಯಾವ ಅಧಿಕಾರಿ , ರಾಜಕಾರಣಿ, ಪೊಲೀಸ್ ಕಾಣಿಸಿಕೊಳ್ಳಲಿದ್ದಾರೆ?. ಕಾದು ನೋಡೋಣ.


Click it and Unblock the Notifications











