ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಚಾಪ್ಲಿನ್ ಪ್ರತಿಮೆ

ಹೇಮಂತ್ ಹೆಗಡೆ ನಿರ್ದೇಶಿಸುತ್ತಿರುವ 'ಹೌಸ್ ಫುಲ್' ಚಿತ್ರಕ್ಕಾಗಿ 67 ಅಡಿ ಎತ್ತರದ ಚಾರ್ಲಿ ಚಾಪ್ಲಿನ್ ರ ಬೃಹತ್ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. ಉಡುಪಿ ಜಿಲ್ಲೆಯ ಒತ್ತಿನೆಣೆಯಲ್ಲಿ ಸ್ಥಾಪಿಸಲು ಹೇಮಂತ್ ಉದ್ದೇಶಿಸಿದ್ದರು. ಕೆಲ ಹಿಂದುಪರ ಸಂಘಟನೆಗಳಿಂದ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಚಾಪ್ಲಿನ್ ಕ್ರೈಸ್ತ ಎಂಬುದೇ ವಿವಾದಕ್ಕೆ ಕಾರಣವಾಗಿತ್ತು.
ಕರಾವಳಿ ಪ್ರದೇಶದಲ್ಲಿ ವಿರೋಧ ವ್ಯಕ್ತವಾದ ನಂತರ ಶಿರಸಿ, ಬೈಂದೂರು ಮುಂತಾದ ಕಡೆಗಳಲ್ಲಿ ಪ್ರತಿಮೆ ಸ್ಥಾಪಿಸುವುದಕ್ಕೆ ಮನವಿ ಬಂದವು. ಪ್ರವಾಸಿ ತಾಣಗಳಲ್ಲಿ ಆ ಪ್ರತಿಮೆ ಸ್ಥಾಪಿಸಿದರೆ ಉತ್ತಮವಾಗಿರುತ್ತಿತ್ತು. ಹಾಗಾಗಿ ಖಾಸಗಿ ಸ್ಥಳವಾದರೂ ಸರಿ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಪ್ರತಿಮೆ ಸ್ಥಾಪಿಸುತ್ತಿದ್ದೇವೆ. ಕಾಮಗಾರಿ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಹೇಮಂತ್ ಹೆಗಡೆ ತಿಳಿಸಿದ್ದಾರೆ.
ಸಾಹಿತಿ ಕಲಾವಿದರಿಂದ ಪ್ರತಿಭಟನೆ
ಚಾರ್ಲಿ ಚಾಪ್ಲಿನ್ ಪ್ರತಿಮೆ ಸ್ಥಾಪನೆಗೆ ವಿರೋಧಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಎಂ.ಜಿ ರಸ್ತೆಯ ಗಾಂಧಿ ಪ್ರತಿಮೆ ಎದುರು ಕರ್ನಾಟಕ ಸಾಹಿತಿ ಕಲಾವಿದರ ಒಕ್ಕೂಟದ ಸದಸ್ಯರು ಶುಕ್ರವಾರ (ಮಾ.20) ಪ್ರತಿಭಟಿಸಿದ್ದರು. ಚಾಪ್ಲಿನ್ ವಿಶ್ವಮಾನ್ಯ ಕಲಾವಿದ. ಆತ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಆತನ ಪ್ರತಿಮೆ ಸ್ಥಾಪನೆಗೆ ವಿರೋಧ ವ್ಯಕ್ತವಾಗಿರುವುದು ದುರದೃಷ್ಟಕರ. ಕಲಾವಿದರು ಮತ್ತು ಸಾಹಿತಿಗಳ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಕರ್ನಾಟಕ ಸಾಹಿತಿ ಕಲಾವಿದರ ಒಕ್ಕೂಟವು ಮಾರ್ಚ್ 28ರಂದು ಸಂಸ ಬಯಲು ರಂಗಮಂದಿರದಲ್ಲಿ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ. ಇದೇ ಸಂದರ್ಭದಲ್ಲಿ 'ಕಡಲ ತೀರದ ತಲ್ಲಣಗಳು' ಪುಸ್ತಕ ಬಿಡುಗಡೆಯಾಗಲಿದೆ. ಮಾರ್ಚ್29ರಂದು ಚಾಪ್ಲಿನ್ ನಿರ್ದೇಶನದ, ಅಭಿನಯದ ಕೆಲ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಒಕ್ಕೂಟ ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಬಿ.ಸುರೇಶ್, ಶ್ರೀನಿವಾಸ್ ಕಪ್ಪ್ಪಣ್ಣ, ರಾಜೇಶ್ ಎಕ್ಸ್ ಫೋರ್ಟ್ ನ ರಾಜೇಶ್ ಮೆಹ್ತಾ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ಚಿತ್ರವಾರ್ತೆ)
ಒತ್ತಿನೆಣಿಯಲ್ಲಿ ಚಾಪ್ಲಿನ್ ಪ್ರತಿಮೆ ನಿರ್ಮಾಣಕ್ಕೆಅಡ್ಡಿ
ಚಾಪ್ಲಿನ್ ಪ್ರತಿಮೆಗೆ ಅಡ್ಡಿ; ಕಲಾವಿದರ ಪ್ರತಿಭಟನೆ
ಹೇಮಂತ್ ಹೆಗಡೆ ಚಿತ್ರದಲ್ಲಿ ಚಾರ್ಲಿಚಾಪ್ಲಿನ್!


Click it and Unblock the Notifications











