ಕನ್ನಡದ 'ಮಾಣಿಕ್ಯ' ಚಿತ್ರಕ್ಕೆ ಆಶಾ ಭೋಂಸ್ಲೆ ಹಾಡು!
ಕನ್ನಡಸೇರಿದಂತೆ ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ ನ ಪಂಚಭಾಷಾ ಚಿತ್ರವೊಂದನ್ನು ನಿರ್ದೇಶಕ ಪ್ರತಾಪ್ ಗೌಡ ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಉದ್ಯಾನ್ ಎಕ್ಸ್ ಪ್ರೆಸ್'. ಚಿತ್ರದಲ್ಲಿ
ನಾಲ್ಕು ಮಂದಿ ಕನ್ನಡ ತಾರೆಗಳು, ಇಬ್ಬರು ಬಾಲಿವುಡ್ ನಟಿಯರು ಸೇರಿದಂತೆ ಮೂವರು ಹೊಸಬರನ್ನು ಪರಿಚಯಿಸಲಿದ್ದಾರೆ.
ಪ್ರಚಿ ದೇಸಾಯಿ ಮತ್ತು ಗರಂ ಮಸಾಲಾ ಖ್ಯಾತಿಯ ನರ್ಗಿಸ್ ಈಗಾಗಲೇ ಉದಯನ್ ಎಕ್ಸ್ ಪ್ರೆಸ್ ಗೆ ಸಹಿ ಮಾಡಿದ್ದಾರೆ. ನೀತೂ, ಕಿರಣ್ ಶ್ರೀನಿವಾಸ್ ಮತ್ತು ಬಿಯಾಂಕ ದೇಸಾಯಿ ಚಿತ್ರದಲ್ಲಿನ ಕನ್ನಡ ತಾರೆಗಳು. ಹಬೀಬ್, ಲ್ಯಾಡ್ ಮತ್ತು ಸೂರಜ್ ಎಂಬ ಹೊಸ ಮುಖಗಳು ಚಿತ್ರದಲ್ಲಿವೆ.
'ಉದ್ಯಾನ್ ಎಕ್ಸ್ ಪ್ರೆಸ್' ಚಿತ್ರ ಹಾಲಿವುಡ್ ಮಟ್ಟದಲ್ಲಿರುತ್ತದೆ .ಬಾಲಿವುಡ್ ನಲ್ಲೂ ಉಪಯೋಗಿಸದ ತಾಂತ್ರಿಕತೆಯನ್ನು ತಮ್ಮ ಚಿತ್ರದಲ್ಲಿ ಬಳಸಿಕೊಳ್ಳುತ್ತಿದ್ದೇವೆ ಎನ್ನುತ್ತಾರೆ ನಿರ್ದೇಶಕ ಪ್ರತಾಪ್ ಗೌಡ. ಚಿತ್ರಕ್ಕೆ ಅಶೋಕ್ ಕಶ್ಯಪ್ ಕ್ಯಾಮೆರಾ ಹಿಡಿಯಲಿದ್ದಾರೆ.
ಪ್ರತಾಪ್ ಗೌಡ ಅವರ ಮತ್ತೊಂದು ಚಿತ್ರ 'ಮಾಣಿಕ್ಯ' ಕೈಗೆತ್ತಿಕೊಂಡಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಕಾಣಿಸಲಿದ್ದಾರೆ. ಅತಿಥಿ ಪಾತ್ರಗಳಲ್ಲಿ ಮನಿಷಾ ಕೋಯಿರಾಲ ಮತ್ತು ಜೀವನ್ ಅಭಿನಯಿಸಲಿದ್ದಾರೆ ಎಂಬ ವಿವರಗಳನ್ನು ಪ್ರತಾಪ್ ಈಗಾಗಲೇ ತಿಳಿಸಿದ್ದಾರೆ.
ಈ ಚಿತ್ರದ ಹಾಡೊಂದು ಆಶಾ ಭೋಂಸ್ಲೆ ಅವರ ಕಂಠದಲ್ಲಿ ಹೊರಹೊಮ್ಮಲಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಆಶಾ ಭೋಂಸ್ಲೆ ಅವರು ಕನ್ನಡದಲ್ಲಿ ಹಾಡಲಿದ್ದಾರೆ. ತಮ್ಮ ಚಿತ್ರದಲ್ಲಿ ಹಾಡಲು ಆಶಾ ಜಿ ಅವರನ್ನು ಕೇಳಿದಾಗ ಅವರು ಕೂಡಲೆ ಒಪ್ಪಿಗೆ ಸೂಚಿಸಿದರು ಎನ್ನುತ್ತಾರೆ ಪ್ರತಾಪ್.
''ಒಟ್ಟಿನಲ್ಲಿ ಅವರು ಕನ್ನಡ ಚಿತ್ರರಂಗವನ್ನು ಗುರುತಿಸಿ ಒಪ್ಪಿಕೊಳ್ಳುತ್ತಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. ಖ್ಯಾತ ಸಂಗೀತ ನಿರ್ದೇಶಕ ಬಪ್ಪಿ ಲಹರಿ ಹಾಡಿರುವ ಹಾಡಿನಲ್ಲಿ ಸ್ವತಃ ಅವರು ಕಾಣಿಸಲಿದ್ದಾರೆ'' ಎಂದು ಪ್ರತಾಪ್ ತಮ್ಮ ಚಿತ್ರದ ಬಗ್ಗೆ ವಿವರ ನೀಡಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











