ಕನ್ನಡ ಚಿತ್ರರಂಗಕ್ಕೆ ಕುಮಾರಸ್ವಾಮಿ ಪುನರಾಗಮನ
ಮಾಜಿ ಮುಖ್ಯಮಂತ್ರಿ ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ ಮರಳಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ರಾಜಕೀಯ ರಂಗಕ್ಕೆ ಅಡಿಯಿಡುವುದಕ್ಕೂ ಮುನ್ನ ಕುಮಾರಸ್ವಾಮಿ ಅವರು ಮೊದಲು ಗುರುತಿಸಿಕೊಂಡಿದ್ದು ಚಿತ್ರರಂಗದಲ್ಲಿ.ಕುಮಾರಸ್ವಾಮಿ ಕನ್ನಡ ಚಿತ್ರರಂಗಕ್ಕೆ ಹಿಂತಿರುಗುವ ಮೂಲಕ ಗಾಂಧಿನಗರದಲ್ಲಿ ಹೊಸ ಗಾಳಿ ಬೀಸಿದಂತಾಗಿದೆ.
ಕುಮಾರಸ್ವಾಮಿ ನಿರ್ಮಿಸಲಿರುವ ಹೊಸ ಚಿತ್ರವನ್ನು ಎಸ್ ನಾರಾಯಣ್ ನಿರ್ದೇಶಿಸಲಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ನಿರ್ಮಿಸಿದ್ದ ಐದು ಚಿತ್ರಗಳಿಗೆ ಎಸ್ ನಾರಾಯಣ್ ಆಕ್ಷನ್, ಕಟ್ ಹೇಳಿದ್ದರು. ಗಲಾಟೆ ಅಳಿಯಂದ್ರು, ಸೂರ್ಯವಂಶ, ಚಂದ್ರಚಕೋರಿ, ಜಿತೇಂದ್ರ ಮತ್ತು ಪ್ರೇಮೋತ್ಸವ ಚಿತ್ರಗಳನ್ನು ಎಚ್ಡಿಕೆ ನಿರ್ಮಿಸಿದ್ದರು.
ಮುಖ್ಯಮಂತ್ರಿಯಾಗಿ ಪದವಿ ಸ್ವೀಕರಿಸಿದ ಮೇಲೂ ಕುಮಾರಸ್ವಾಮಿ ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರು.ಚಿತ್ರವೊಂದನ್ನು ನಿರ್ಮಿಸುವ ಸಲುವಾಗಿ ವ್ಯಾಸರಾಯ ಬಲ್ಲಾಳರ 'ಹೆಜ್ಜೆ'ಕಾದಂಬರಿಯ ಹಕ್ಕುಗಳನ್ನು ಎಚ್ಡಿಕೆ ಪಡೆದಿದ್ದರು. ಆದರೆ ಕಾರಣಾಂತರಗಳಿಂದ ಆ ಚಿತ್ರ ಸೆಟ್ಟೇರಲಿಲ್ಲ.
ಎಚ್ಡಿಕೆ ನಿರ್ಮಿಸುತ್ತಿರುವ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಚಿತ್ರದ ನಾಯಕಿಯಾಗಿ ಪೂಜಾಗಾಂಧಿ ಅವರನ್ನು ನಿಕ್ಕಿ ಮಾಡಲಾಗಿದೆ. ನಾಯಕ ನಟನಿಗಾಗಿ ಹುಡುಕಾಟ ನಡೆದಿದ್ದು ಹೊಸ ಮುಖಕ್ಕಾಗಿ ಆಡಿಷನ್ ಸಹ ನಡೆಯುತ್ತಿದೆ. 400ಕ್ಕೂ ಹೆಚ್ಚು ಮಂದಿಯಿದ್ದ ಆಡಿಷನಲ್ಲಿ ಕಡೆಗೆ 40 ಮಂದಿಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಕಡೆಗೆ ಇವರಲ್ಲಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ಏತನ್ಮಧ್ಯೆ ಪೂಜಾಗಾಂಧಿ ಕಸ್ತೂರಿ ವಾಹಿನಿಗಾಗಿ ರಿಯಾಲಿಟಿ ಶೋ ಒಂದಕ್ಕೆ ಸಹಿ ಹಾಕಿದ್ದಾರೆ.


Click it and Unblock the Notifications











