ಪ್ರಾಣಾಪಾಯದಿಂದ ಪಾರಾದ 'ಆಪ್ತರಕ್ಷಕ'
'ಆಪ್ತರಕ್ಷಕ' ಚಿತ್ರೀಕರಣದ ವೇಳೆ ಅಪಘಾತ ಸಂಭವಿದ್ದನ್ನು ಡಾ.ವಿಷ್ಣು ನೆನಪಿಸಿಕೊಂಡಿದ್ದಾರೆ. ಅವರು ಕುದುರೆ ಸವಾರಿ ಸನ್ನಿವೇಶದಲ್ಲಿ ನಟಿಸುತ್ತಿರಬೇಕಾದರೆ ಆಯ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ. ಈ ಘಟನೆಯಲ್ಲಿ ತಮ್ಮ ಬೆನ್ನುಮೂಳೆ ಮುರಿಯಬೇಕಾಗಿತ್ತು, ಅದೃಷ್ಟವಶಾತ್ ಗಂಡಾಂತರದಿಂದ ಪಾರಾದೆ ಎನ್ನುತ್ತಾರೆ ವಿಷ್ಣು.
ಘಟನೆಯನ್ನು ವಿಷ್ಣು ವಿವರಿಸಿದ್ದು ಹೀಗೆ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಪ್ತರಕ್ಷಕ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಅದೊಂದು ಕುದುರೆ ಸವಾರಿಯ ಸಾಹಸ ಸನ್ನಿವೇಶ. ಸಾಹಸ ನಿರ್ದೇಶಕ ರಾಮ್ ಶೆಟ್ಟಿ ನಿರ್ದೇಶನಲ್ಲಿ ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಈ ಒಂದು ಸಾಹಸ ಸನ್ನಿವೇಶಕ್ಕಾಗಿ ನೂರಕ್ಕೂ ಹೆಚ್ಚು ಕುದುರೆಗಳನ್ನು ಬಳಸಿಕೊಳ್ಳಲಾಗಿದೆ ಎಂದರು.
ಕುದುರೆಯೊಂದನ್ನು ನನಗೆ ನೀಡಲಾಯಿತು. ಕುದುರೆಯನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದೆ. ಎಲ್ಲಾ ಓಕೆ ಎನ್ನಿಸಿತು.ಆದರೂ ನನ್ನ ಆರನೆ ಇಂದ್ರಿಯ ಮಾತ್ರ ಎಚ್ಚರಿಸುತ್ತಲೇ ಇತ್ತು. ಕುದುರೆ ಮೇಲೆ ಕುಳಿತು ಲಗಾಮನ್ನು ಎಳೆದೆ. ಆರಂಭದಲ್ಲಿ ಸಲೀಸಾಗಿ ಸಾಗಿದ ಕುದುರೆ ಸ್ವಲ್ಪ ದೂರ ಕ್ರಮಿಸಿದ ನಂತರ ಇದ್ದಕ್ಕಿದ್ದಂತೆ ವೇಗವನ್ನು ಹೆಚ್ಚಿಸಿತು. ವೇಗ ನನ್ನ ಕೈಮೀರಿತ್ತು. ಇದ್ದಕ್ಕಿದ್ದಂತೆ ಮುಂದಿನ ಎರಡೂ ಕಾಲುಗಳನ್ನು ಮೇಲಕ್ಕೆತ್ತಿ ನನ್ನನ್ನು ಕೆಳಕ್ಕೆ ಕೆಡವಿತು ಎಂದು ವಿಷ್ಣು ತಮಗಾದ ಅಪಘಾತವನ್ನು ವಿವರಿಸಿದರು.
ದೇವರ ದಯೆಯಿಂದ ನನ್ನ ಬೆನ್ನುಮೂಳೆ ಮುರಿಯಲಿಲ್ಲ. ಆದರೂ ಗಂಭೀರವಾಗಿ ಗಾಯಗೊಂಡೆ. ಸ್ಕಾನಿಂಗ್ ರಿಫೋರ್ಟ್ ನಿಂದ ಬಲವಾದ ಮೂಗೇಟುಗಳಾಗಿರುವುದು ಗೊತ್ತಾಗಿದೆ. ಚೇತರಿಸಿಕೊಳ್ಳಲು ಕೆಲ ವಾರಗಳ ಸಮಯ ಬೇಕಾಯಿತು ಎನ್ನುತ್ತಾರೆ ವಿಷ್ಣು. ಹಾಗಾಗಿ 'ಆಪ್ತರಕ್ಷಕ' ಸ್ವಲ್ಪ ತಡವಾಯಿತು ಎನ್ನುತ್ತ್ತಾರೆ ಅವರು.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











