ರಿಯಲ್ ಸ್ಟಾರ್ ಉಪೇಂದ್ರ ಮರಳಿ ನಿರ್ದೇಶನಕ್ಕೆ!
ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳಿಗೊಂದು ಸಂತಸದ ಸುದ್ದಿ! ಉಪೇಂದ್ರ ಮತ್ತೆ ಆಕ್ಷನ್, ಕಟ್ ಹೇಳಲು ನಿರ್ದೇಶಕನ ಕ್ಯಾಪ್ ತೊಡಲಿದ್ದಾರೆ. ಸ್ವತಃ ತಾವೇ ಚಿತ್ರವೊಂದನ್ನು ನಿರ್ಮಿಸಲಿದ್ದು ಜುಲೈ 31ರಂದು ಉಪೇಂದ್ರ ಅವರ ಹೊಸ ಚಿತ್ರ ಸೆಟ್ಟೇರಲಿದೆ.
ಎ, ಓಂ,ಶ್, ಸ್ವಸ್ತಿಕ್, ಎಚ್ ಟುಒ ನಂತಹ ಸನ್ನೆಗಳ ಮೂಲಕ ಚಿತ್ರಗಳನ್ನು ನಿರ್ದೇಶಿಸಿದ ಉಪೇಂದ್ರ ಈಗ ಮತ್ತೊಂದು ಚಿನ್ಹೆಯ ಮೂಲಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಈ ಬಾರಿ ಅವರು ತಮ್ಮ ಚಿತ್ರಕ್ಕೆ 'ಕೈ' ಚಿನ್ಹೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ! ಹೆಬ್ಬೆರಳು ಮತ್ತು ತೋರುಬೆರಳು ಉಂಗುರಾಕೃತಿಯಲ್ಲಿ ಉಳಿದ ಬೆರಳುಗಳು ನೆಟ್ಟನೆ ನಿಂತ ಸೂಪರ್ (ಅತ್ಯುತ್ತಮ)ಎಂದು ಕೈ ಸನ್ನೆ ಮೂಲಕ ತೋರುವ ಚಿನ್ಹೆಯೇ ಚಿತ್ರದ ಹೆಸರು!
ಈ ಕೈಸನ್ನೆಗೆ ಸೃಷ್ಟಿಸುವ ಗುಣವುಳ್ಳ ಎಂಬ ಅರ್ಥವೂ ಉಂಟಂತೆ. ಶಾಸ್ತ್ರೀಯ ನೃತ್ಯಗಳಲ್ಲೂ ಈ ಹಂಸ ಹಸ್ತಕ್ಕೆ ಪ್ರಾಮುಖ್ಯತೆಯುಂಟು. ಬುದ್ಧನ ಧ್ಯಾನಸ್ತ ಮುದ್ರೆಯೂ ಹೌದು. ಇಷ್ಟೆಲ್ಲಾ ಪ್ರಾಮುಖ್ಯತೆಯುಳ್ಳ ಸನ್ನೆಯನ್ನು ಉಪೇಂದ್ರ ಆಯ್ಕೆ ಮಾಡಿಕೊಂಡಿರುವುದು ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.
ಈ ಹಿಂದೆ ? (ಪ್ರಶ್ನಾರ್ಥಕ ಚಿನ್ಹೆ) ಎಂಬ ಚಿತ್ರವನ್ನೂ ಉಪೇಂದ್ರ ಕೈಗೆತ್ತಿಕೊಂಡಿದ್ದರು. ಕಾರಣಾಂತರಗಳಿಂದ ಆ ಚಿತ್ರ ನಿಂತೇಹೋಯಿತು. ತಮ್ಮ ಹೊಸ ಚಿತ್ರಕ್ಕೆ ಧ್ಯಾನ ಮುದ್ರೆಯನ್ನು ಯಾವ ರೀತಿ ವಿನ್ಯಾಸಗೊಳಿಸಬೇಕು ಎಂಬ ಚಿಂತನೆಯಲ್ಲಿ ಉಪೇಂದ್ರ ಮುಳುಗಿದ್ದಾರೆ. ಕಳೆದ ಎರಡು ವಾರಗಳಿಂದ ಇದಕ್ಕಾಗಿ ರಹಸ್ಯ ತಯಾರಿಯೂ ನಡೆದಿದೆಯಂತೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











