ಬೆಂಗಳೂರಿನಲ್ಲಿ ಎರಡು ದಿನ ಮಮ್ಮೂಟಿ ಶಿಕಾರಿ
ಮಲಯಾಳಂ ಚಿತ್ರರಂಗದ ಮೆಗಾಸ್ಟಾರ್ ಮಮ್ಮೂಟಿ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ 'ಶಿಕಾರಿ' ಮಾಡಿದ್ದಾರೆ. ಕನ್ನಡ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ನಿರ್ಮಿಸುತ್ತಿರುವ ದ್ವಿಭಾಷಾ ಚಿತ್ರ 'ಶಿಕಾರಿ' ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಿತು.
ಶುಕ್ರವಾರ (ನ.26) ಮತ್ತು ಶನಿವಾರ (ನ.27) ಬೆಂಗಳೂರು ಅರಮನೆಯ ಸಪೋಟಾ ಗಾರ್ಡನ್ನಲ್ಲಿ ನಡೆದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಅವರು, ತಮ್ಮ ಸರಳತೆಯ ಮೂಲಕ ಗಮನಸೆಳೆದರು. ಮಮ್ಮೂಟಿ ಅವರ ಸಾಹಸ ಸನ್ನಿವೇಶಗಳು ಎಲ್ಲರನ್ನೂ ಆಕರ್ಷಿಸಿದವು.
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಅಭಿನಯವನ್ನು ಮಮ್ಮುಟ್ಟಿ ಅಭಿನಯ ಹೋಲುವಂತಿತ್ತು. 'ಶಿಕಾರಿ' ಚಿತ್ರದಲ್ಲಿ ಮಮ್ಮುಟ್ಟಿ ಅವರದು ಸಾಫ್ಟ್ವೇರ್ ಟೆಕ್ಕಿ ಪಾತ್ರವಂತೆ. ಕಾದಂಬರಿ ಓದುವುದೆಂದರೆ ಈ ಟೆಕ್ಕಿಗೆ ಎಲ್ಲಿಲ್ಲದ ಹುಚ್ಚು. ಬಳಿಕ ಕಾದಂಬರಿಯಲ್ಲಿನ ಒಂದು ಪಾತ್ರವನ್ನು ಕಲ್ಪಿಸಿಕೊಂಡು ತಾನೇ ಆ ಪಾತ್ರವಾಗುವುದು ಈ ಟೆಕ್ಕಿಯ ವಿಚಿತ್ರ ಹವ್ಯಾಸ.
ಈಗಾಗಲೆ 'ಶಿಕಾರಿ' 47 ದಿನಗಳ ಚಿತ್ರೀಕರಣ ಪೂರೈಸಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 'ಶಿಕಾರಿ' ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದ ನಿರ್ದೇಶಕ ಅಭಯ ಸಿಂಹ, ಪ್ರಸ್ತುತ ನಮ್ಮ ಸಮಸ್ಯೆಗಳಿಗೆ ಇತಿಹಾಸದಲ್ಲಿ ಉತ್ತರ ಸಿಗುತ್ತದೆ ಎಂದರು.
ಈ ಚಿತ್ರಕ್ಕೆ ಕೆ ಮಂಜು ನಿರ್ಮಾಪಕರು. ಮಮ್ಮುಟ್ಟಿ, ಪೂನಂ ಬಾಜ್ವ, ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದಾರೆ. ವಿ ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ. ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಡಿಸೆಂಬರ್ 10ರಂದು ಚಿತ್ರೀಕರಿಸಲಾಗುತ್ತದೆ. ಮಾರ್ಚ್ 2011ರ ವೇಳೆಗೆ 'ಶಿಕಾರಿ' ತೆರೆಕಾಣಲಿದೆ ಎಂದು ಅಭಯ ಸಿಂಹ ವಿವರ ನೀಡಿದ್ದಾರೆ.


Click it and Unblock the Notifications











