ರಿಯಲ್ ಸ್ಟಾರ್ ಉಪೇಂದ್ರ ಈಗ ಆರಕ್ಷಕ
ಒಬ್ಬೊಬ್ಬ ನಿರ್ದೇಶಕರಿಗೆ ಒಂದೊಂದು ತರಹ ಸೆಂಟಿಮೆಂಟು. ಕೆಲವರು 'ಚ' ಕಾರದಲ್ಲೆ ಚಿಲಿಪಿಲಿ ಆಡಿದ್ದಾರೆ. ಇನ್ನೂ ಕೆಲವರಿಗೆ 'ಮ'ಕಾರದ ಮೇಲೆ ಎಲ್ಲಿಲ್ಲದ ಮಮಕಾರ. ಅದೇ ರೀತಿ ಪಿ ವಾಸು ಅವರಿಗೆ 'ಆ' ಕಾರದ ಮೇಲೆ ಸೆಂಟಿಮೆಂಟು ಜಾಸ್ತಿ. ಈ ಹಿಂದೆ ಅವರು ಆಪ್ತಮಿತ್ರ, ಆಪ್ತರಕ್ಷಕ ಚಿತ್ರಗಳನ್ನು ತೆರೆಗೆ ತಂದಿದ್ದರು. ಈಗ ತಮ್ಮ ನೂತನ ಚಿತ್ರಕ್ಕೆ 'ಆರಕ್ಷಕ' ಎಂದು ಹೆಸರಿಟ್ಟಿದ್ದಾರೆ. ಚಿತ್ರದ ನಾಯಕ ನಟ ಬೇರಾರು ಅಲ್ಲ ನಮ್ಮ ರಿಯಲ್ ಸ್ಟಾರ್ ಉಪೇಂದ್ರ.
ಈಗಾಗಲೆ ಸೆಟ್ಟೇರಿರುವ ಈ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಬಿರುಸಿನಿಂದ ಸಾಗುತ್ತಿದೆ. ಉದಯರವಿ ಫಿಲಂಸ್ ಲಾಂಛನದಡಿಯಲ್ಲಿ ಕೃಷ್ಣಪ್ರಜ್ವಲ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ. ಐದು ಹಾಡುಗಳು ಚಿತ್ರದಲ್ಲಿದೆ. ಈ ಪೈಕಿ ಎರಡು ಹಾಡುಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ.
ಮೈಸೂರು, ಕೇರಳ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ. ಸದಾ, ಸೀತಾ, ಶಯಾಜಿ ಶಿಂಧೆ, ರಾಗಿಣಿ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ. ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುರೇಶ್ ಅರಸ್ ಸಂಕಲನ, ವೇಣು ಕಲಾ ನಿರ್ದೇಶನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮತ್ತು ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











