ಸೆಲೆಬ್ರಿಟಿಗಳಿಗೋಸ್ಕರ ಆ ನಿಯಮ ಮುರಿಯುತ್ತಾರಾ ಚಾಲೆಂಜಿಂಗ್ ಸ್ಟಾರ್?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಶೂಟಿಂಗ್ ಮುಕ್ತಾಯವಾಗಿದ್ದು ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗ್ತಿದೆ. ಅಭಿಮಾನಿಗಳೇ ದೊಡ್ಡಮಟ್ಟದಲ್ಲಿ ಚಿತ್ರವನ್ನು ಪ್ರೇಕ್ಷಕರ ಬಳಿ ಕೊಂಡೊಯುತ್ತಿದ್ದು, ದರ್ಶನ್ ಸಿನಿಮಾ ಪ್ರಚಾರದ ವಿಚಾರದಲ್ಲಿ ಆ ನಿಯಮ ಮುರಿಯುವಂತೆ ಕಾಣುತ್ತಿದೆ.
ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಸದ್ಯ ಚಿತ್ರದ ಒಂದು ಥೀಮ್ ಪೋಸ್ಟರ್ ಹಾಗೂ ಟೀಸರ್ ಮಾತ್ರ ರಿಲೀಸ್ ಆಗಿದೆ. ಇತ್ತೀಚೆಗೆ ಪೋಲೆಂಡ್ನಲ್ಲಿ ಚಿತ್ರತಂಡ ಶೂಟಿಂಗ್ ಮುಗಿಸಿ ಬಂದಿದ್ದು, ದರ್ಶನ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಸಹ ಮುಗಿಸಿದ್ದಾರೆ. ರಚಿತಾ ರಾಮ್ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದು, ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ದೊಡ್ಡ ತಾರಾಗಣ 'ಕ್ರಾಂತಿ' ಬಳಗದಲ್ಲಿದೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ದಂಪತಿ ಬಹಳ ಅದ್ಧೂರಿಯಾಗಿ ಈ ಕಮರ್ಷಿಯಲ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಆನ್ಲೈನ್ನಲ್ಲಿ ಮಾತ್ರವಲ್ಲ ಆಫ್ಲೈನ್ನಲ್ಲೂ 'ಕ್ರಾಂತಿ' ಸಿನಿಮಾ ಪ್ರಚಾರ ಜೋರಾಗಿ ನಡೀತಿದೆ. ದಚ್ಚು ಅಭಿಮಾನಿಗಳು ರಾಜ್ಯದ ಮೂಲೆ ಮೂಲೆಯಲ್ಲಿ ಸಿನಿಮಾ ಪೋಸ್ಟರ್ಗಳು ರಾರಾಜಿಸುವಂತೆ ಮಾಡಿದ್ದಾರೆ. ಹಬ್ಬ, ಜಾತ್ರೆ, ದೇವಸ್ಥಾನ ಹೀಗೆ ಎಲ್ಲಾ ಕಡೆ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ನೆಚ್ಚಿನ ನಟನ ಜೊತೆ 'ಕ್ರಾಂತಿ' ಮಾಡಲು ತಮ್ಮ ತನು-ಮನ-ಧನ ಅರ್ಪಿಸಿದ್ದಾರೆ. ಅಭಿಮಾನಿಗಳ ಪ್ರೀತಿ ಕಂಡು ಕೆಲ ದಿನಗಳ ಹಿಂದೆ ದರ್ಶನ್ ಪೋಲೆಂಡ್ನಿಂದ ಟ್ವೀಟ್ ಮಾಡಿದ್ದರು. "ನಲ್ಮೆಯ ಸೆಲೆಬ್ರಿಟಿಗಳು ತೋರುತ್ತಿರುವ ಪ್ರೀತಿಗೆ ನಾ ಸದಾ ಚಿರಋಣಿ" ಎಂದು ಬರೆದಿದ್ದರು.

ಆ ನಿಯಮ ಮುರಿಯುತ್ತಾರಾ 'ಕ್ರಾಂತಿ'ವೀರ?
ಇತ್ತೀಚೆಗೆ ಸ್ಯಾಂಡಲ್ವುಡ್ನಲ್ಲಿ ದೊಡ್ಡ ದೊಡ್ಡ ಸಿನಿಮಾಗಳಿಗೆ ಬಹಳ ದೊಡ್ಡಮಟ್ಟದಲ್ಲೇ ಪ್ರಚಾರ ಕಾರ್ಯ ನಡೀತಿದೆ. ಟ್ರೈಲರ್ ಲಾಂಚ್, ಪ್ರೀ ರಿಲೀಸ್ ಈವೆಂಟ್ ಅಂತೆಲ್ಲಾ ಸೂಪರ್ ಸ್ಟಾರ್ಗಳನ್ನು ಕರೆಸಿ ಸಿನಿಮಾ ಬೂಸ್ಟ್ ಮಾಡುವ ಪ್ರಯತ್ನ ಮಾಡ್ತಾರೆ. ಆದರೆ 'ಕ್ರಾಂತಿ' ಸಿನಿಮಾ ವಿಚಾರದಲ್ಲಿ ದರ್ಶನ್ ಈ ನಿಯಮ ಮುರಿಯುವ ಸಾಧ್ಯತೆ ಇದೆ. ತಮ್ಮ ಅಭಿಮಾನಿಗಳಿಗೋಸ್ಕರ ದಚ್ಚು ಈ ನಿರ್ಧಾರ ಕೈಗೊಂಡರೂ ಅಚ್ಚರಿ ಪಡಬೇಕಿಲ್ಲ.

ಚಿತ್ರತಂಡ ಪ್ರಚಾರ ಶುರು ಮಾಡಿಲ್ಲ
ಹಾಗೆ ನೋಡಿದರೆ 'ಕ್ರಾಂತಿ' ಚಿತ್ರತಂಡ ಇನ್ನು ಸರಿಯಾಗಿ ಪ್ರಚಾರ ಕಾರ್ಯ ಶುರು ಮಾಡಿಲ್ಲ. ಬರೀ ಅಭಿಮಾನಿಗಳೇ ಪ್ರಚಾರಕ್ಕೆ ಮುಂದೆ ಬಂದಿದ್ದಾರೆ. ಈವರೆಗೆ ಚಿತ್ರತಂಡ ಸಿನಿಮಾ ಬಗ್ಗೆ ಹೆಚ್ಚೇನು ಮಾತನಾಡಿಲ್ಲ. ಚಿತ್ರದ ಕೆಲಸಗಳೆಲ್ಲಾ ಮುಗಿದ ಮೇಲೆ ಪ್ರಚಾರ ಪ್ರಾರಂಭಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಮುಂದೆ ಟೀಸರ್, ಟ್ರೈಲರ್, ಸಾಂಗ್ಸ್ ಅಂತ ಸಾಕಷ್ಟು ಸರ್ಪ್ರೈಸ್ಗಳು ಅಭಿಮಾನಿಗಳಿಗಾಗಿ ಕಾಯುತ್ತಿದೆ.

ರಾಜ್ಯೋತ್ಸವಕ್ಕೆ ದರ್ಶನ್ 'ಕ್ರಾಂತಿ'?
ನವೆಂಬರ್ನಲ್ಲಿ ರಾಜ್ಯೋತ್ಸವದ ವಿಶೇಷವಾಗಿ 'ಕ್ರಾಂತಿ' ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದಲ್ಲಿ ಕನ್ನಡ ಶಾಲೆಗಳ ಉಳಿವು ಮತ್ತು ಅಕ್ಷರ ಕ್ರಾಂತಿಯ ಬಗ್ಗೆ ಚರ್ಚಿಸಲಾಗಿದೆ. ಹಾಗಾಗಿ ರಾಜ್ಯೋತ್ಸವದಲ್ಲಿ ಸಿನಿಮಾ ಬಂದರೆ ಚೆನ್ನಾಗಿರುತ್ತೆ ಅನ್ನುವುದು ಚಿತ್ರತಂಡದ ಲೆಕ್ಕಾಚಾರ.

ಹಬ್ಬಕ್ಕೆ ದರ್ಶನ್ ಹೊಸ ಸಿನಿಮಾ ಆರಂಭ
'ಕ್ರಾಂತಿ' ಚಿತ್ರದ ಕೆಲಸಗಳನ್ನು ಮುಗಿಸಿರೋ ದರ್ಶನ್ ಹೊಸ ಚಿತ್ರಕ್ಕೆ ಸಿದ್ಧತೆ ನಡೆಸಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ದರ್ಶನ್ ನಟಿಸ್ತಿದ್ದು, ಈಗಾಗಲೇ ಹೊಸ ಲುಕ್ನಲ್ಲಿ ಫೋಟೊಶೂಟ್ ಸಹ ಮಾಡಿರುವ ಸುಳಿವು ಸಿಕ್ತಿದೆ. ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲೇ ಸಿನಿಮಾ ಸೆಟ್ಟೇರಲಿದೆ. ಇದು ದರ್ಶನ್ ನಟನೆಯ 56ನೇ ಸಿನಿಮಾ. ರಾಕ್ಲೈನ್ ವೆಂಕಟೇಶ್ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.


Click it and Unblock the Notifications











