ಬಂಡಾಯಕ್ಕೆ ಬೆಂಬಲ: ಜನಸಾಹಿತ್ಯ ಸಮ್ಮೇಳನದ ಪರ ನಟ ಕಿಶೋರ್
ಸರ್ಕಾರಿ ಅನುದಾನದಲ್ಲಿ ಹಾವೇರಿಯಲ್ಲಿ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಜನಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಈ ಜನ ಸಾಹಿತ್ಯ ಸಮ್ಮೇಳನಕ್ಕೆ ನಟ ಕಿಶೋರ್ ಬೆಂಬಲ ಸೂಚಿಸಿದ್ದಾರೆ.
ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಮುಸ್ಲಿಂ ಲೇಖಕರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಹಿರಿಯ ಪತ್ರಕರ್ತ ಬಿ.ಎಂ.ಹನೀಫ್ ಹಾಗೂ ಹಿರಿಯ ವಿದ್ವಾಂಸ ಪುರುಷೋತ್ತಮ ಬಿಳಿಮಲೆಯವರು ಎತ್ತಿದ ತಕರಾರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜೋಷಿಯವರು ಸೂಕ್ತವಾಗಿ ಪ್ರತಿಕ್ರಿಯಿಸದ ಕಾರಣ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿಯಾಗಿ ಜನಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದೆ.
ಜನ ಸಾಹಿತ್ಯ ಸಮ್ಮೇಳನಕ್ಕೆ ಹಲವು ಸಾಹಿತಿಗಳು ಬೆಂಬಲ ಸೂಚಿಸಿದ್ದು, ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಇದೀಗ ಸಿನಿಮಾ ನಟ ಕಿಶೋರ್ ಅವರೂ ಸಹ ಜನಸಾಹಿತ್ಯ ಸಮ್ಮೇಳನಕ್ಕೆ ಬೆಂಬಲ ಘೋಷಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.

ಜನಸಾಹಿತ್ಯ ಸಮ್ಮೇಳನದ ಪರವಾಗಿ ಹಾಗೂ ಸರ್ಕಾರದ ನೆರಳಲ್ಲಿ ನಡೆಯುವ ಪರಿಷತ್ತಿನ ಸಮ್ಮೇಳನದ ವಿರುದ್ಧ ಫೇಸ್ ಬುಕ್ನಲ್ಲಿ ಬರೆದುಕೊಂಡಿರುವ ಕಿಶೋರ್, ''ಆಳುವ ಅರೆಮನೆಗೆ ಸೀಮಿತವಾಗಿದ್ದ ಸಾಹಿತ್ಯ, 12ನೇ ಶತಮಾನದ ವಚನಕಾರರ ಬಂಡಾಯದಿಂದ ಜನಸಾಹಿತ್ಯ ಕ್ರಾಂತಿಯಾದ ಹಾಗೆ ಒಡೆದಾಳುವ ನಿರಂಕುಶ ಧರ್ಮಾಂಧ ರಾಜಕಾರಣದ ಸಂಕೋಲೆಯಿಂದ ಮುಕ್ತವಾಗಿ, ಕನ್ನಡ ನಾಡಿನ ಅಸ್ಮಿತೆಯ, ಸಾಂಸ್ಕೃತಿಕ ಜೀವಂತಿಕೆಯ, ಸೃಜನಶೀಲ ಜೀವಶಕ್ತಿಯ, ಜೀವ ಪ್ರೀತಿಯ ಸಂಕೇತವಾಗಿ, ಜನಸಾಹಿತ್ಯ ಸಮ್ಮೇಳನ ಜನೋತ್ಸವವಾಗಿ ಯಶಸ್ವಿಯಾಗಲೆಂಬ ಹಾರೈಕೆ'' ಎಂದಿದ್ದಾರೆ.
ಜನ ಸಾಹಿತ್ಯ ಸಮ್ಮೇಳನವು ಜನವರಿ 08 ರಂದು ಬೆಳಿಗ್ಗೆ 10 ಗಂಟೆಯಿಂದ ಕೆ.ಆರ್.ಸರ್ಕಲ್, ಗಾಂಧಿ ನಗರದ ಅಲುಮ್ನಿ ಹಾಲ್ನಲ್ಲಿ ನಡೆಯಲಿದೆ. ಕಿಶೋರ್ ಸಹ ಜನಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಸ್ವತಂತ್ರ್ಯ ಆಲೋಚನೆಯ ನಟ ಕಿಶೋರ್ ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಅವರ ಬಹುತೇಕ ಸಾಮಾಜಿಕ ಜಾಲತಾಣದ ಪೋಸ್ಟ್ಗಳು ಖಾಸಗೀಕರಣದ ವಿರೋಧಿಯಾಗಿ, ರೈತರ ಪರವಾಗಿ, ಕೋಮುವಾದದ ವಿರುದ್ಧವಾಗಿ, ಜಾತ್ಯಾತೀತತೆ, ಸಮಾನತೆಯ ಪರವಾಗಿಯೂ ಇರುತ್ತಾವೆ.
ಆಗಾಗ್ಗೆ ತಮ್ಮ ಪೋಸ್ಟ್ಗಳಲ್ಲಿ ಕೇಂದ್ರ ಸರ್ಕಾರ ನೀತಿಗಳನ್ನು ಟೀಕಿಸುವ, ವಿಮರ್ಶಿಸುವ ಸ್ವಾತಂತ್ರ್ಯವನ್ನು ಕಿಶೋರ್ ಬಳಸಿಕೊಳ್ಳುತ್ತಾರೆ. ಮಾನವತಾವಾದಿಯಾಗಿರುವ ಕಿಶೋರ್ ಕೆಲವು ದಿನಗಳ ಹಿಂದಷ್ಟೆ ತಾವೇ ನಟಿಸಿದ್ದ 'ಕಾಂತಾರ' ಸಿನಿಮಾದಲ್ಲಿ ಬರುವ ದೈವದ ಕುರಿತಾಗಿ ಹಾಕಿದ್ದ ಪೋಸ್ಟ್ ಚರ್ಚೆಗೆ ಕಾರಣವಾಗಿತ್ತು.
ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸಾಪಿನಲ್ಲಿ ಹರಿದು ಬಂತು. ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ ಏಕೆ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ. ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಥೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ ಎಂದು ಕಿಶೋರ್ ಬರೆದುಕೊಂಡಿದ್ದರು.


Click it and Unblock the Notifications











