ಕಬಿನಿ, ನಾಗರಹೊಳೆ ಸುತ್ತಾಡಿದ 'ಪ್ರೇಮಲೋಕ' ಚೆಲುವೆ ಜೂಹಿ ಚಾವ್ಲಾ
'ಪ್ರೇಮಲೋಕ' ಸಿನಿಮಾದಿಂದ ಕನ್ನಡಿಗರಿಗೆ ಪರಿಚಯವಾಗಿ ಆ ನಂತರ ಹಲವು ಕನ್ನಡ ಸಿನಿಮಾಗಳಲ್ಲಿ ನೆನಪುಳಿಯುವ ಪಾತ್ರಗಳನ್ನು ನಿರ್ವಹಿಸಿರುವ ಕನ್ನಡದ ನಟಿ ಜೂಹಿ ಚಾವ್ಲಾ ಈಗ ಮತ್ತೆ ಕರ್ನಾಟಕಕ್ಕೆ ಬಂದಿದ್ದಾರೆ.
ಹೌದು, ಈ ಸುಂದರ ವದನೆ ಇತ್ತೀಚೆಗೆ ಮತ್ತೆ ಕರ್ನಾಟಕಕ್ಕೆ ಬಂದಿದ್ದಾರೆ. ಆದರೆ ಈ ಬಾರಿ ಬಂದಿರುವುದು ಸಿನಿಮಾದ ಚಿತ್ರೀಕರಣಕ್ಕೆ ಅಲ್ಲ ಬದಲಿಗೆ ಪ್ರವಾಸಕ್ಕೆ.
ಹೌದು, ಫೆಬ್ರವರಿ 16 ರಂದು ಮೈಸೂರಿಗೆ ಬಂದಿದ್ದ ನಟಿ ಜೂಹಿ ಚಾವ್ಲಾ ಇಲ್ಲಿನ ನಾಗರಹೊಳೆ, ಕಬಿನಿ ಪ್ರದೇಶದಲ್ಲಿ ಸುತ್ತಾಡಿ, ಪ್ರಕೃತಿಯ ರಮ್ಯತೆಯನ್ನು ಆಸ್ವಾದಿಸಿದ್ದಾರೆ.

ಕುಟುಂಬದೊಂದಿಗೆ ಬಂದಿದ್ದ ಅವರು ಕಬಿನಿ, ನಾಗರಹೊಳೆ ಸುತ್ತ-ಮುತ್ತಲ ಪ್ರದೇಶಗಳಲ್ಲಿ ಓಡಾಡಿ ಆನಂದಿಸಿದ್ದಾರೆ. ನಾಗರಹೊಳೆಯಲ್ಲಿ ಒಂದು ಗಿಡವನ್ನೂ ನೆಟ್ಟಿರುವ ಜೂಹಿ ಚಾವ್ಲಾ ತಮ್ಮ ಪ್ರವಾಸದ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಾರಾಪುರ ಜಗಂಲ್ ಲಾಡ್ಜ್ನಲ್ಲಿ ತಂಗಿದ್ದ ಜೂಹಿ ಚಾವ್ಲಾ ಸ್ಥಳೀಯ ಆಹಾರವನ್ನು ಸವಿದು ಬಹು ಖುಷಿಪಟ್ಟಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳೊಟ್ಟಿಗೆ ಮಾತನಾಡಿ ಅರಣ್ಯ, ಕಾಡು ಮಂದಿ ಇನ್ನಿತರೆ ವಿಷಯಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ ಜೂಹಿ ಚಾವ್ಲಾ.
ಕೆಲವು ದಿನಗಳ ಹಿಂದಷ್ಟೆ ನಟ ಅಕ್ಷಯ್ ಕುಮಾರ್ ಸಹ ನಾಗರಹೊಳೆ, ಕಬಿನಿ ಪ್ರದೇಶಕ್ಕೆ ಪ್ರವಾಸಕ್ಕೆ ಬಂದಿದ್ದರು. ನಟ ದರ್ಶನ್ ಅವರಂಥೂ ನಾಗರಹೊಳೆಗೆ ಆಗಾಗ್ಗೆ ಹೋಗಿ ಬುರುತ್ತಲೇ ಇರುತ್ತಾರೆ.
ನಟಿ ಜೂಹಿ ಚಾವ್ಲಾ ಮೊದಲಿಗೆ ರವಿಚಂದ್ರನ್ ಜೊತೆ ಪ್ರೇಮಲೋಕ ಸಿನಿಮಾದಲ್ಲಿ ನಟಿಸಿದರು. ಆ ನಂತರ ಕಿಂದರ ಜೋಗಿ, ರಣಧೀರ, ಶಾಂತಿ-ಕ್ರಾಂತಿ ಸಿನಿಮಾಗಳಲ್ಲಿ ನಟಿಸಿದರು. 2017 ರಲ್ಲಿ ರಮೇಶ್ ಅರವಿಂದರ ಪುಷ್ಪಕ ವಿಮಾನ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು ಈ ನಟಿ.


Click it and Unblock the Notifications











