ಮಾನವೀಯರಾಗಿ, ಮನುಷ್ಯರಾಗಿ ಎಂದವರು ದೇಶದ್ರೋಹಿಗಳೇ? ಸಾಯಿ ಪಲ್ಲವಿಗೆ ರಮ್ಯಾ ಬೆಂಬಲ
ಸಾಯಿ ಪಲ್ಲವಿ ನಟಿಸಿರುವ 'ವಿರಾಟ ಪರ್ವಂ' ಸಿನಿಮಾ ನಾಳೆ (ಜೂನ್ 17)ರಂದು ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಾಯಿ ಪಲ್ಲವಿ, ''ಕಾಶ್ಮೀರ್ ಫೈಲ್ಸ್' ಸಿನಿಮಾದ ಉಲ್ಲೇಖ ಮಾಡಿ, ಕಾಶ್ಮೀರದಲ್ಲಿ ಧರ್ಮದ ಹೆಸರಲ್ಲಿ ಪಂಡಿತರನ್ನು ಹತ್ಯೆ ಮಾಡಿದ್ದು ತಪ್ಪು, ಹಾಗೆಯೇ ಗೋರಕ್ಷಣೆಯ ಹೆಸರಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಕೊಲ್ಲುವುದೂ ತಪ್ಪೆ'' ಎಂದಿದ್ದರು.
ಧಾರ್ಮಿಕ ವಿಷಯ ಮಾತ್ರವೇ ಅಲ್ಲದೆ, ಭಾರತ-ಪಾಕಿಸ್ತಾನದ ವಿಷಯ ಹಾಗೂ ಶಾಂತಿಯ ವಿಷಯವಾಗಿಯೂ ಸಾಯಿ ಪಲ್ಲವಿ ಮಾತನಾಡಿದ್ದರು. ಸಾಯಿ ಪಲ್ಲವಿ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸಾಯಿ ಪಲ್ಲವಿಯವರನ್ನು ಟ್ರೋಲ್ ಸಹ ಮಾಡಿದ್ದಾರೆ. ಹಲವರು ಸಾಯಿ ಪಲ್ಲವಿ ಪರವಾಗಿ ಪೋಸ್ಟ್ಗಳನ್ನು ಹಾಕಿದ್ದಾರೆ ಅದರಲ್ಲಿ ಕನ್ನಡದ ನಟಿ ರಮ್ಯಾ ಸಹ ಒಬ್ಬರು.

ಮಾನವೀಯತೆ ಇರಿಸಿಕೊಳ್ಳಿ ಎಂದವರು ದೇಶದ್ರೋಹಿಗಳೇ: ರಮ್ಯಾ ಪ್ರಶ್ನೆ
''ಇಂದು ಪರಿಸ್ಥಿತಿ ಹೇಗಿದೆ ಎಂದರೆ 'ಮನುಷ್ಯರಾಗಿ', 'ಮಾನವೀಯತೆ ಮೆರೆಯಿರಿ' ಎಂದು ಯಾರಾದರೂ ಹೇಳಿದರೆ ಅವರನ್ನು ದೇಶದ್ರೋಹಿಗಳು ಎನ್ನಲಾಗುತ್ತಿದೆ. ಅದೇ 'ಗುಂಡು ಹಾರಿಸಿ' ಎಂದವರು, ದ್ವೇಷ ಹರಡುವವರನ್ನು ನಿಜವಾದ ನಾಯಕರು, ದೇಶಪ್ರೇಮಿಗಳು ಎಂದು ಲೇಬಲ್ ಮಾಡಲಾಗುತ್ತಿದೆ. ಎಂಥಹಾ ತಿರುಚಿದ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ'' ಎಂದು ಟ್ವೀಟ್ ಮಾಡಿದ್ದಾರೆ ರಮ್ಯಾ.

ಸಾಯಿ ಪಲ್ಲವಿ ವಿರುದ್ಧ ಟ್ರೋಲಿಂಗ್, ಬೆದರಿಕೆ ನಿಲ್ಲಬೇಕು: ರಮ್ಯಾ
ಸಾಯಿ ಪಲ್ಲವಿ ಮೇಲೆ ಆಗುತ್ತಿರುವ ಟ್ರೋಲಿಂಗ್ ಮತ್ತು ಬೆದರಿಕೆಗಳು ನಿಲ್ಲಬೇಕು. ಪ್ರತಿಯೊಬ್ಬರಿಗೂ ಅಭಿಪ್ರಾಯ ಹೊಂದುವ ಅರ್ಹತೆ ಇದೆ. ಅಥವಾ ಮಹಿಳೆಯರು ಅಭಿಪ್ರಾಯ ಹೊಂದಬಾರದೆ? ಯಾವುದೇ ಒಬ್ಬ ಸಭ್ಯ, ಸಾಮಾನ್ಯ ಮನುಷ್ಯ ಹೇಳುವುದನ್ನೇ ಸಾಯಿ ಪಲ್ಲವಿ ಹೇಳಿದ್ದಾರೆ. ದಯೆ ಇರಲಿ ಮತ್ತು ದಮನಕ್ಕೊಳಗಾದವರನ್ನು ರಕ್ಷಿಸಿ ಎಂದಿದ್ದಾರೆ. ಭಿನ್ನಾಭಿಪ್ರಾಯವನ್ನು ನಿಂದನೆಯ ದಾರಿಯಿಂದ ಮಾತ್ರವೇ ಹೇಳಬೇಕೆ'' ಎಂದು ಸಾಯಿ ಪಲ್ಲವಿ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್ ನಿಲ್ಲಿ ಎಂದಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ, ''ದೌರ್ಜನ್ಯಕ್ಕೊಳಗಾದವರನ್ನು ರಕ್ಷಿಸಬೇಕು'' ಎಂದ ಸಾಯಿ ಪಲ್ಲವಿಯ ಮಾತುಗಳನ್ನು ಬರೆದು ಶಹಭಾಶ್ ಎಂದಿದ್ದಾರೆ.

ಭಾರತದ ಸೈನಿಕರು, ಪಾಕಿಸ್ತಾನದ ಸೈನಿಕರು
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಾಯಿ ಪಲ್ಲವಿ, ''ಪಾಕಿಸ್ತಾನದ ಸೈನಿಕರು, ನಮ್ಮ ದೇಶದ ಸೈನಿಕರನ್ನು ಶತ್ರುಗಳೆಂದು, ಭಯೋತ್ಪಾದಕರೆಂದು ಭಾವಿಸುತ್ತಾರೆ. ಏಕೆಂದರೆ ನಾವು ಈ ಕಡೆ ಇದ್ದೇವೆ, ನಮ್ಮ ಸೈನಿಕರು ಪಾಕಿಸ್ತಾನದ ಸೈನಿಕರನ್ನು ಭಯೋತ್ಪಾದಕರು, ವೈರಿಗಳು ಎಂದುಕೊಳ್ಳುತ್ತಾರೆ. ಹೀಗೆ ದೃಷ್ಟಿಕೋನಗಳು ಒಂದೊಂದು ಸಂದರ್ಭದಲ್ಲಿ ಒಂದೊಂದು ರೀತಿ ಬದಲಾಗಿಬಿಡುತ್ತವೆ'' ಎಂದಿದ್ದರು.

'ದಿ ಕಾಶ್ಮೀರ್ ಫೈಲ್ಸ್' ಹಾಗೂ 'ಗೋರಕ್ಷಕರ ಹಿಂಸಾಚಾರ'
ಅದೇ ಸಂದರ್ಶನದಲ್ಲಿ ಮುಂದೆ ಮಾತನಾಡುತ್ತಾ, ''ಕೆಲವು ದಿನಗಳ ಮುಂದೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಂತು ಅದರಲ್ಲಿ ಕಾಶ್ಮೀರಿ ಪಂಡಿತರ ಮೇಲೆ ಹೇಗೆ ಹಿಂಸೆ ಮಾಡಲಾಯಿತು ಎಂದು ಅವರು ತೋರಿಸಿದ್ದಾರೆ. ಹಾಗೆ ಕಳೆದ ವರ್ಷವೇ ಇರಬೇಕು ಕೋವಿಡ್ ಸಮಯದಲ್ಲಿ ವ್ಯಕ್ತಿಯೊಬ್ಬ ಗಾಡಿಯಲ್ಲಿ ಹಸು ತೆಗೆದುಕೊಂಡು ಹೋಗುತ್ತಿದ್ದ. ಡ್ರೈವ್ ಮಾಡುತ್ತಿದ್ದ ವ್ಯಕ್ತಿ ಮುಸ್ಲಿಂ ಆಗಿದ್ದ ಎಂಬ ಕಾರಣಕ್ಕೆ ಅವನ ಮೇಲೆ ಹಲ್ಲೆ ಮಾಡಲಾಯಿತು. ಜೈ ಶ್ರೀರಾಮ್ ಘೋಷಣೆ ಕೂಗಲಾಯಿತು. ಇದನ್ನು ನೋಡಿದಾಗ ಆಗ ಕಾಶ್ಮೀರದಲ್ಲಿ ನಡೆದಿದ್ದಕ್ಕೂ ಈಗ ನಡೆದಿದ್ದಕ್ಕೂ ವ್ಯತ್ಯಾಸ ಇಲ್ಲ ಎರಡೂ ಒಂದೇ'' ಎಂದಿದ್ದಾರೆ. ಅಲ್ಲದೆ ವ್ಯಕ್ತಿ ಒಳ್ಳೆಯವರಾಗಿಲ್ಲದಿದ್ದರೆ ಎಡ ಅಥವಾ ಬಲ ಎರಡರಲ್ಲೂ ನ್ಯಾಯ ಇರುವುದಿಲ್ಲ ಎಂದಿದ್ದಾರೆ.


Click it and Unblock the Notifications











