ಅಂಬರೀಶ್ ಅಭಿಮಾನಿ ಮಾರ್ಕೆಟ್ ರಾಜು ಇನ್ನಿಲ್ಲ, 'ಬುಲ್ ಬುಲ್' ಘಟನೆ ಸ್ಮರಿಸಿದ ಕವಿರಾಜ್
ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಪ್ಪಟ ಅಭಿಮಾನಿ ಮಾರ್ಕೆಟ್ ರಾಜು ನಿಧನರಾಗಿದ್ದಾರೆ. ಅಂಬಿ ಕುಟುಂಬಕ್ಕೆ ಆಪ್ತರೂ ಆಗಿದ್ದ ರಾಜು ನಿಧನ ರೆಬೆಲ್ ಸ್ಟಾರ್ ಅಭಿಮಾನಿ ವಲಯದಲ್ಲಿ ತೀರಾ ನೋವುಂಟು ಮಾಡಿದೆ.
ಮಾರ್ಕೆಟ್ ರಾಜು ನಿಧನಕ್ಕೆ ಸುಮಲತಾ ಅಂಬರೀಶ್, ಅಭಿಷೇಕ್ ಸಹ ಕಂಬನಿ ಮಿಡಿದಿದ್ದಾರೆ. ಈ ಕುರಿತು ಫೇಸ್ನಲ್ಲಿ ಸಂತಾಪ ಸೂಚಿಸಿರುವ ಸುಮಲತಾ ''ಅಂಬರೀಶ್ ಅವರ ಅಪ್ಪಟ ಅಭಿಮಾನಿ, ನಮ್ಮ ಕುಟುಂಬಕ್ಕೆ ತೀರಾ ಹತ್ತಿರವಾಗಿದ್ದ ಮಾರ್ಕೆಟ್ ರಾಜು ಅವರ ನಿಧನ, ನನಗು ಹಾಗೂ ಅಭಿಷೇಕ್ ಗು ತೀವ್ರ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಈ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿ'' ಎಂದು ಸಂತಾಪ ಸೂಚಿಸಿದ್ದಾರೆ.
ಮಾರ್ಕೆಟ್ ರಾಜು ಅವರ ನಿಧನಕ್ಕೆ ಸಾಹಿತಿ, ನಿರ್ದೇಶಕ ಕವಿರಾಜ್ ಸಹ ಬೇಸರ ವ್ಯಕ್ತಪಡಿಸಿದ್ದು, ಅವರ ಬಗೆಗಿನ ಒಂದಿಷ್ಟು ನೆನಪು ಬಿಚ್ಚಿಟ್ಟಿದ್ದಾರೆ. ಮುಂದೆ ಓದಿ....

ಇಷ್ಟು ಅಬಿಮಾನ ಹೇಗೆ ಸಾಧ್ಯ
''ಅಭಿಮಾನವನ್ನೇ ಬದುಕಾಗಿಸಿಕೊಂಡು ಬದುಕುವವರ ಬಗ್ಗೆ ನನಗೆ ಯಾವಾಗಲೂ ಒಂದು ಅಚ್ಚರಿ . "ಇಷ್ಟು ಅಬಿಮಾನ ಹೇಗೆ ಸಾಧ್ಯ ?" ಅನ್ನೋ ಮೆಚ್ಚುಗೆ ಜೊತೆಗೆ "ಬೇಕಾ ಇಷ್ಟೆಲ್ಲಾ ?" ಅನ್ನೋ ಪ್ರಶ್ನೆ ಕೂಡಾ ಯಾವಾಗಲೂ ಜೊತೆಗೂಡಿರುತ್ತೆ. ನನ್ನ ಅಂತಾ ಬೆರಗಿಗೆ ಕಾರಣ ಆದವರಲ್ಲಿ ಈ ಮಾರ್ಕೆಟ್ ರಾಜು ಕೂಡಾ ಒಬ್ಬರು.'' - ಕವಿರಾಜ್

ಪ್ರತಿದಿನಿ ಆಫೀಸ್ಗೆ ಬರ್ತಿದ್ದರು
''ನಾನು ಒಬ್ಬ ಸಹ ನಿರ್ಮಾಪಕ ಆಗಿದ್ದ 'ಬುಲ್ ಬುಲ್' ಸಿನಿಮಾ ಬಿಡುಗಡೆ ವೇಳೆಗೆ ಇವರು ಪ್ರತಿದಿನ ತಪ್ಪದೆ ಗಾಂಧಿನಗರದ ತೂಗುದೀಪ ಡಿಸ್ಟ್ರಿಬ್ಯೂಷನ್ ಆಫೀಸಿಗೆ ಬರುತ್ತಿದ್ದರು. ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆಯಾಗಿ ಅಂಬರೀಷ್ ಸರ್ ಅಭಿನಯಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆಫೀಸಿಗೆ ಬರುತ್ತಿದ್ದ ರಾಜು ವಿಚಾರಿಸುತ್ತಿದ್ದದ್ದು ಕೇವಲ ಅಂದರೆ ಕೇವಲ ಅವರ ಬಾಸ್, ಅಣ್ಣಾ, ಅಂಬರೀಷ್ ಅವರ ಬಗ್ಗೆ ಮಾತ್ರ. ಅವರ ಕಟೌಟ್ ಎಷ್ಟು ಅಡಿ ಮಾಡಿಸುತ್ತಿದ್ದೀರಿ ? ಎಷ್ಟು ಹಾರ ಹಾಕುತ್ತೀರಿ ? ಹೀಗೆ... ಯಾವುದಾದರೂ ಜಾಹೀರಾತಿನ ಪೋಸ್ಟರಲ್ಲಿ ಅಂಬರೀಶ್ ಅವರ ಚಿತ್ರ ಕಾಣದಿದ್ದರೆ , ಅಥವಾ ಚಿಕ್ಕದಾಗಿದ್ದರೆ ರಾಜು ಬೆಳ್ಳಂಬೆಳಗ್ಗೆ ಆಫೀಸಲ್ಲಿ ಹಾಜರು "ಏನಣ್ಣಾ ಹಿಂಗ್ ಮಾಡಿದೀರಿ ?" ಅಂತಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು.

ಅಂಬರೀಷ್ ಅಣ್ಣನ ಅಭಿಮಾನಿ ಅನ್ನೋದೆ ಇವರ ಅಸ್ಮಿತೆ
''ಆಮೇಲಾಮೇಲೆ "ರಾಜು ಬೈತಾನಪ್ಪ, ಅಂಬರೀಷ್ ಸರ್ ಫೋಟೋ ಸರಿಯಾಗಿ ಹಾಕಿ " ಅಂತಾ ಡಿಸೈನರ್ ಗೆ ಹೇಳೋ ಹಾಗಾಗಿತ್ತು. ಪ್ರತಿ ಕ್ಷಣ ಅಣ್ಣನ ಧ್ಯಾನ , ಗುಣಗಾನ ಬಿಟ್ಟರೆ ಬೇರೆ ಮಾತೇ ಇರಲಿಲ್ಲ. ಅಕ್ಷರಶಃ ಅಭಿಮಾನವನ್ನೇ ಉಸಿರಾಡುತ್ತಿದ್ದ ಮನುಷ್ಯ. ಅಂಬರೀಷ್ ಅಣ್ಣನ ಅಭಿಮಾನಿ ಅನ್ನೋದೆ ಇವರ ಅಸ್ಮಿತೆಯಾಗಿತ್ತು.'' - ಕವಿರಾಜ್
Recommended Video

ಅಭಿಮಾನದ ವಿಚಾರದಲ್ಲಿ ಇವರೇ ಮೊದಲಿಗರು
''ಮಾರ್ಕೆಟಿನ ಒರಟ ಅಂತಾ ಹೊರನೋಟಕ್ಕೆ ಕಾಣಿಸಿದರು ನಿಜದಲ್ಲಿ ತುಂಬಾ ಮುಗ್ಧರಾಗಿದ್ದರು. ಬಹುಶಃ ನಾನು ಕಂಡ ಅಂಬರೀಷ್ ಸರ್ ಅವರ ಅಭಿಮಾನಿಗಳಲ್ಲಿ ಅಭಿಮಾನದ ವಿಚಾರದಲ್ಲಿ ಇವರೇ ಮೊದಲಿಗರು. ಇವರು ಇನ್ನಿಲ್ಲ ಎಂಬ ಸುದ್ದಿ ವಿಷಾದ ಮೂಡಿಸಿತು.'' ಎಂದು ಸಂತಾಪ ಸೂಚಿಸಿದ್ದಾರೆ.


Click it and Unblock the Notifications











