'ಅರಗಿಣಿ' ನಟ ಸಿದ್ಧಾರ್ಥ್ ಅಲಿಯಾಸ್ ಹರೀಶ್ ಇನ್ನಿಲ್ಲ
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಅರಗಿಣಿ' ಧಾರಾವಾಹಿಯಲ್ಲಿ ನಾಯಕನಾಗಿ ನಟನೆ ಮಾಡುತ್ತಿದ್ದ ಕಿರುತೆರೆ ನಟ ಹರೀಶ್ ಅವರು ಅಕಾಲಿಕ ಮರಣವನ್ನಪ್ಪಿದ್ದಾರೆ. ನಟ ಹರೀಶ್ ಅವರು 'ಅರಗಿಣಿ' ಧಾರಾವಾಹಿಯಲ್ಲಿ ಸಿದ್ಧಾರ್ಥ್ ಪಾಟೀಲ್ ಎಂಬ ಪಾತ್ರ ಪೋಷಣೆ ಮಾಡುತ್ತಿದ್ದರು.
ಧಾರಾವಾಹಿಲ್ಲಿ 'ಚಿನ್ನು' ಅಂತಾನೇ ಕರೆಸಿಕೊಳ್ಳುತ್ತಿದ್ದ ಹರೀಶ್ ಅವರು ಹಲವು ದಿನಗಳಿಂದ ಡೆಂಗ್ಯೂ ಮತ್ತು ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಹರೀಶ್ ಅವರು ಇಂದು (ಸೆಪ್ಟೆಂಬರ್ 6) ಮೃತಪಟ್ಟಿದ್ದಾರೆ. ಮುಂದೆ ಓದಿ...

ಐ.ಸಿ.ಯು.ನಲ್ಲಿದ್ದ ನಟ
ತೀವ್ರ ಡೆಂಗ್ಯೂ ಜ್ವರ ಮತ್ತು ಜಾಂಡೀಸ್ ಒಟ್ಟೊಟ್ಟಿಗೆ ಅಟ್ಯಾಕ್ ಮಾಡಿದ ಕಾರಣ ನಟ ಹರೀಶ್ ಅವರನ್ನು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು.

'ಅರಗಿಣಿ' ಮೂಲಕ ಪರಿಚಯ
ಮೊದಲ ಬಾರಿಗೆ ಸುವರ್ಣ ವಾಹಿನಿಯ 'ಅರಗಿಣಿ' ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ಚಿತ್ರದುರ್ಗ ಮೂಲದ ಹರೀಶ್ ಅವರು, ತದನಂತರ ಹಲವು ಧಾರಾವಾಹಿಗಳಲ್ಲಿ ಪಾತ್ರ ಮಾಡಿದ್ದರು.

ಖುಷಿ-ಸಿದ್ಧಾರ್ಥ್ ಜೋಡಿ
'ಅರಗಿಣಿ' ಧಾರಾವಾಹಿಯಲ್ಲಿ ಖುಷಿ-ಸಿದ್ಧಾರ್ಥ್ ಅಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದ್ದ ಈ ಧಾರಾವಾಹಿಯನ್ನು ನೋಡಲು ಎಲ್ಲರೂ ಮುಗಿ ಬೀಳುತ್ತಿದ್ದರು. ಈ ಧಾರಾವಾಹಿಯಲ್ಲಿ ಹರೀಶ್ ಅವರು ಶ್ರೀಮಂತ ಬಿಜಿನೆಸ್ ಮ್ಯಾನ್ ಆಗಿ ಸಿಡುಕನ ಪಾತ್ರದಲ್ಲಿ ನಟಿಸುತ್ತಿದ್ದರು.

ಕಲರ್ಸ್ ನಲ್ಲಿದ್ದರು ಹರೀಶ್
'ಅರಗಿಣಿ' ಧಾರಾವಾಹಿ ಮುಗಿದ ನಂತರ ನಟ ಹರೀಶ್ ಅವರು ಸದ್ಯಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಓಂ ಶಕ್ತಿ ಓಂ ಶಾಂತಿ' ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದರು.

ಹುಟ್ಟೂರಿನಲ್ಲಿ ಅಂತ್ಯಕ್ರಿಯೆ
ನಟ ಹರೀಶ್ ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಚಿತ್ರದುರ್ಗಕ್ಕೆ ಕೊಂಡೊಯ್ಯಲಾಗಿದ್ದು, ಆರ್.ಆರ್ ನಗರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಸಣ್ಣ ವಯಸ್ಸಿನ ಹರೀಶ್ ಅವರನ್ನು ಕಳೆದುಕೊಂಡ ಇಡೀ ಕಿರುತೆರೆ ಲೋಕ ಕಂಬನಿ ಮಿಡಿದಿದೆ.


Click it and Unblock the Notifications











