ಈ ಸಿನಿಮಾಗಳಿಗೂ 'ಗಂಧದಗುಡಿ'ಗೂ ಲಿಂಕ್: ಅಪ್ಪು 'ಪವರ್ ಸ್ಟಾರ್' ಟೈಟಲ್ ಬೇಡ ಎಂದಿದ್ಯಾಕೆ?
ಅಕ್ಟೋಬರ್ 28ಕ್ಕೆ ಡಾ. ಪುನೀತ್ ರಾಜ್ಕುಮಾರ್ ಭಾಗವಾಗಿರುವ 'ಗಂಧದಗುಡಿ' ಡಾಕ್ಯೂಮೆಂಟರಿ ಸಿನಿಮಾ ಬಿಡುಗಡೆ ಆಗ್ತಿದೆ. ಟ್ರೈಲರ್ ಸೂಪರ್ ಹಿಟ್ ಆಗಿ ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದೆ. ಇಂತಹ ಹೊತ್ತಲ್ಲೇ ನಿರ್ದೇಶಕ ಅಮೋಘವರ್ಷ ಮಾತನಾಡಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಟೀಸರ್ ನೋಡಿದ್ದ ಪುನೀತ್ ರಾಜ್ಕುಮಾರ್ ಟೈಟಲ್ ಕಾರ್ಡ್ನಲ್ಲಿ 'ಪವರ್ ಸ್ಟಾರ್' ಎನ್ನುವುದನ್ನು ತೆಗೆಯುವಂತೆ ಎಂದು ಮನವಿ ಮಾಡಿದ್ದರಂತೆ.
ಪುನೀತ್ ರಾಜ್ಕುಮಾರ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ 'ಗಂಧದಗುಡಿ' ಸಿನಿಮಾದಲ್ಲಿ ಜೀವಿಸಿದ್ದಾರೆ. ತಾವು ತಾವಾಗಿಯೇ ಕಾಣಿಸಿಕೊಂಡಿದ್ದಾರೆ. ಅದೇ ಕಾರಣಕ್ಕೆ ಟೀಸರ್ನಲ್ಲಿ 'ಪವರ್ ಸ್ಟಾರ್' ಎನ್ನುವುದನ್ನು ತೆಗೆಯಲು ಹೇಳಿದ್ದರು. ಹಾಗಾಗಿ ಟ್ರೈಲರ್ನಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜ್ಕುಮಾರ್ ಎಂದು ಹಾಕಲಾಗಿದೆ. ಭಾರತೀಯ ಚಿತ್ರರಂಗದಲ್ಲೇ 'ಗಂಧದಗುಡಿ' ಅಪರೂಪದ ಪ್ರಾಜೆಕ್ಟ್. ಡಿಸ್ಕವರಿ ಚಾನೆಲ್ನ ಜನಪ್ರಿಯ ಟಿವಿ ಶೋ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮಕ್ಕಾಗಿ ಪ್ರಧಾನಿ ಮೋದಿ, ರಜನಿಕಾಂತ್ ಸೇರಿದಂತೆ ಕೆಲ ಬಾಲಿವುಡ್ ಸ್ಟಾರ್ಸ್ ಬೇರ್ ಗ್ರಿಲ್ಸ್ ಜೊತೆ ಕಾಡುಮೇಡು ಅಲೆದಿದ್ದರು. ಆದರೆ 'ಗಂಧದಗುಡಿ' ಅದಕ್ಕಿಂತಲೂ ಭಿನ್ನವಾಗಿ ಡಾಕ್ಯುಮೆಂಟರಿ ಸಿನಿಮಾ. ಸಿಲ್ವರ್ಸ್ಕ್ರೀನ್ ಮೇಲೆ ಅಪ್ಪಳಿಸಲಿದೆ.
ಪುನೀತ್ ರಾಜ್ಕುಮಾರ್ ಅವರಾಗಿಯೇ ಕಾಣಿಸಿಕೊಂಡಿರುವ ಸಿನಿಮಾ 'ಗಂಧದಗುಡಿ'. ಈ ಹಿಂದೆ ಕೂಡ ಕೆಲ ಸಿನಿಮಾಗಳಲ್ಲಿ ಅಪ್ಪು ಅವರಾಗಿಯೇ ಕಾಣಿಸಿಕೊಂಡು ಗೆದ್ದಿದ್ದರು. ಅವರ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅಂತಹ ಸಿನಿಮಾಗಳ ಲಿಸ್ಟ್ ಮುಂದೆ ಇದೆ ಓದಿ..

ಅಪ್ಪು ಅವರಾಗಿಯೇ ಕಾಣಿಸಿಕೊಂಡಿರುವ ಸಿನಿಮಾ
'ಗಂಧದಗುಡಿ' ಕಮರ್ಷಿಯಲ್ ಸಿನಿಮಾ ಅಲ್ಲ. ಕರ್ನಾಟಕದ ಮಣ್ಣಿನ ಘಮವನ್ನು ಪ್ರಪಂಚಕ್ಕೆ ಪರಿಚಯಿಸುವ ಪ್ರಯತ್ನ ಈ ಸಿನಿಮಾ ಮೂಲಕ ನಡೀತಿದೆ. ಕಾಡು, ನದಿ, ಬೆಟ್ಟ, ಜಲಪಾತವನ್ನು ನೋಡುತ್ತಾ ಅಪ್ಪು ಕಳೆದುಹೋಗಿದ್ದಾರೆ. ಅಪ್ಪು ಪ್ರಕೃತಿ ಮಾತೆಗೆ ಕೈ ಮುಗಿದು ಧನ್ಯರಾಗಿದ್ದಾರೆ. ಪುನೀತ್ ರಾಜ್ಕುಮಾರ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಇಲ್ಲಿಅಭಿನಯ ಇಲ್ಲ. ಡ್ಯಾನ್ಸ್, ಫೈಟ್ ಇಲ್ಲ. ನಾವು ನೀವು ಟ್ರೆಕ್ಕಿಂಗ್ ಹೋಗಿ ಬಂದಂತೆ ಅಪ್ಪು ಓಡಾಡಿ ಬಂದಿದ್ದಾರೆ. ಕರ್ನಾಟಕದ ಬೆಟ್ಟ, ಸಮುದ್ರ, ಜಲಪಾತ, ಪ್ರಾಣಿ ಪಕ್ಷಿಗಳ ಬಗೆಗೆ ಎಲ್ಲರಿಗೂ ಇರುವಂತಹ ಕುತೂಹಲ ಅವರಿಗೂ ಇದೆ. ಅದನ್ನು ಸುಂದರವಾಗಿ ತೆರೆಮೇಲೆ ಕಟ್ಟಿಕೊಡಲಾಗಿದೆ. ಬಯಲುಸೀಮೆಯಿಂದ ಹಿಡಿದು ಕಡಲ ತೀರದವರೆಗೆ, ಬರಡು ಭೂಮಿಯಿಂದ ಪಶ್ಚಿಮಘಟ್ಟಗಳವರೆಗೆ ಸುತ್ತಾಡಿ ಈ ಡಾಕ್ಯುಮೆಂಟರಿ ಸಿನಿಮಾ ನಿರ್ಮಿಸಲಾಗಿದೆ.

'ಮೈತ್ರಿ' ಚಿತ್ರದಲ್ಲೂ ಇಂತದ್ದೇ ಪ್ರಯತ್ನ
7 ವರ್ಷಗಳ ಹಿಂದೆ ಬಂದಿದ್ದ 'ಮೈತ್ರಿ' ಚಿತ್ರದಲ್ಲಿ ಪುನೀತ್ ಅವರು ಪುನೀತ್ ರಾಜ್ ಕುಮಾರ್ ಆಗಿಯೇ ಕಾಣಿಸಿಕೊಂಡಿದ್ದರು. 'ಕರುನಾಡ ಕೋಟ್ಯಾಧಿಪತಿ' ಕಾರ್ಯಕ್ರಮದ ನಿರೂಪಕರಾಗಿ, ನಟರಾಗಿ ಅವರದು ಸಹಜಾಭಿನಯ. ಚಿತ್ರದುದ್ದಕ್ಕೂ ಅವರ ಪಾತ್ರ ನೈಜವಾಗಿ ಮೂಡಿಬಂದಿತ್ತು. ಅಪ್ಪು ನಡೆಸಿಕೊಡುತ್ತಿದ್ದ 'ಕನ್ನಡದ ಕೋಟ್ಯಾಧಿಪತಿ' ಸೂಪರ್ ಹಿಟ್ ಆಗಿತ್ತು. ಅದನ್ನೇ ಚಿತ್ರದಲ್ಲೂ ತರಲಾಗಿತ್ತು. ಹಾಗಾಗಿ ಪುನೀತ್ ಅವರಾಗಿಯೇ ಪ್ರೇಕ್ಷಕರ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದರು.

ಹಂಬಲ್ ಪೊಲಿಟಿಷಿಯನ್ ಜೊತೆ ಪುನೀತ್
ಇನ್ನು 'ಡ್ಯಾನಿಶ್ ಸೇಠ್' ನಟನೆಯ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ಮಾಡಿದ್ದರು. ಈ ಚಿತ್ರದಲ್ಲೂ ನಟ ಪುನೀತ್ ರಾಜ್ಕುಮಾರ್ ಆಗಿ ತಮ್ಮದೇ ಪಾತ್ರದಲ್ಲಿ ಮಿಂಚಿದ್ದರು. ಸಿನಿಮಾದ ನಾಯಕ ಡ್ಯಾನಿಶ್ ಸೇಠ್ ಅಥಿತಿ ಆಗಿ ಹೋಗಿದ್ದ ಕಾರ್ಯಕ್ರಮದಲ್ಲಿ ಪುನೀತ್ ಮುಖ್ಯ ಅತಿಥಿ ಆಗಿರುತ್ತಾರೆ. ಎರಡ್ಮೂರು ನಿಮಿಷ ಅಪ್ಪು ಈ ಚಿತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷರನ್ನು ರಂಜಿಸಿದ್ದರು.

'ಪಡ್ಡೆಹುಲಿ' ಶ್ರೇಯಸ್ಗೆ ಅಪ್ಪು ಬೆಂಬಲ
ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮಂಜು ನಟನೆಯ 'ಪಡ್ಡೆಹುಲಿ' ಚಿತ್ರದಲ್ಲೂ ಪುನೀತ್ ಅವರಾಗಿಯೇ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ನಾಯಕನ ಸಂಗೀತ ಸಾಧನೆಗೆ ತಿರುವು ನೀಡುವ ಪಿ.ಆರ್. ಕೆ ಸಂಗೀತ ಸಂಸ್ಥೆ ಮಾಲೀಕನ ಪಾತ್ರದಲ್ಲಿ ಅಪ್ಪು ಗಮನ ಸೆಳೆದಿದ್ದರು. ಹೀಗೆ ಮೂರ್ನಾಲ್ಕು ಸಿನಿಮಾಗಳಲ್ಲಿ ಪುನೀತ್ ರಾಜ್ಕುಮಾರ್ ಅವರಾಗಿಯೇ ಕಾಣಿಸಿಕೊಂಡಿದ್ದು ವಿಶೇಷ. ಇದು ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನ ಕೂಡ.


Click it and Unblock the Notifications











