ಡಿಸೆಂಬರ್ 8 ರಿಂದ ಬಹುರೂಪಿ ರಂಗೋತ್ಸವ: ವಿಷಯ ವಸ್ತು 'ಭಾರತೀಯತೆ'
ಮೈಸೂರಿನ ರಂಗಾಯಣದಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ನಡೆಯುವ ಬಹುರೂಪಿ ರಂಗೋತ್ಸವ ಈ ಬಾರಿ ಡಿ. 8 ರಿಂದ 15 ರವರೆಗೆ ಹಮ್ಮಿಕೊಳ್ಳಲಾಗಿದೆ.
ರಂಗಾಯಣದ ಬಿ.ವಿ.ಕಾರಂತರ ರಂಗಚಾವಡಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ, ಈ ಬಾರಿಯ ಬಹುನಿರೀಕ್ಷಿತ ರಾಷ್ಟ್ರೀಯ ರಂಗೋತ್ಸವವನ್ನು 'ಭಾರತೀಯತೆ' ಎಂಬ ಶೀರ್ಷಿಕೆಯಡಿ ನಡೆಸಲಾಗುತ್ತಿದೆ ಎಂದರು.
ಭಾರತವೆಂದರೆ ಅದು ಕೇವಲ ನೆಲವೊಂದೇ ಅಲ್ಲ. ನಾವು ಇದನ್ನು 'ಮಾತೆ' ಎಂದು ಪೂಜಿಸುತ್ತೇವೆ. ಇದು ನಮ್ಮ ವ್ಯಕ್ತಿತ್ವದ ಹೆಗ್ಗುರುತು. ಇಲ್ಲಿರುವ ದೊಡ್ಡ ಜನಸಂಖ್ಯೆಯೇ ನಮ್ಮ ಅತಿದೊಡ್ಡ ಸಂಪನ್ಮೂಲ. ವಿವಿಧತೆಯಲ್ಲಿ ಏಕತೆಯೇ ನಮ್ಮ ಶಕ್ತಿ. ಜನರಲ್ಲಿ ದೇಶಕ್ಕೆ, ಅಖಂಡತೆಗೆ ನೆರವಾಗುವಂತಹ ಅಂತಃ ಪ್ರೇರಣೆ ಮತ್ತು ಒಟ್ಟಾರೆಯಾಗಿ ಸಮಾಜಕ್ಕೆ ಒಳಿತಾಗಬೇಕೆನ್ನುವ ಆಶಯವನ್ನು ಇಡೀ ನಾಟಕೋತ್ಸವ ಒಳಗೊಳ್ಳಲಿದೆ ಎಂದರು.
ಈ ರಾಷ್ಟ್ರೀಯ ರಂಗೋತ್ಸವದ ಅತಿಥಿಗಳ ವಿವರ, ನಾಟಕಗಳ, ಚಲನಚಿತ್ರೋತ್ಸವ, ಜನಪದೋತ್ಸವ, ವಿಚಾರ ಸಂಕಿರಣ, ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದ ಸಂಪೂರ್ಣ ವಿವರಗಳನ್ನು ಸದ್ಯದಲ್ಲಿಯೇ ನೀಡುವುದಾಗಿ ತಿಳಿಸಿದರು.

ಮಹಾ ಪುರುಷರ ದಿವ್ಯ ಪರಂಪರೆಯನ್ನು ನಮ್ಮ ಜನ ನಿರಾಕರಿಸುವಂತಹ ಸ್ಥಿತಿಯನ್ನು ತಂದ ಮೆಕಾಲೆವಾದಿಗಳ, ಮತಾಂತರಿ ಮಿಷನರಿಗಳ, ಉಗ್ರಗಾಮಿಗಳ ಅಭಿಮಾನಿಗಳನ್ನು, ಇವನ್ನೇ ಜಾತ್ಯತೀತ ಎನ್ನುವ ಡೋಂಗಿಗಳ ಅಪಾಯಕಾರಿ ಬೌದ್ಧಿಕ ರಿವಾಜುಗಳನ್ನು ಬದಲಿಸಿ, ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸುವುದು ಇಂದು ಅನಿವಾರ್ಯವಾಗಿದೆ. ಇಂದಿನ ಯುವಪೀಳಿಗೆಗೆ ಮತ್ತೆ ಮತ್ತೆ ನಮ್ಮ ಇತಿಹಾಸ ನೆನಪಾಗಬೇಕು, ರಾಷ್ಟ್ರಪ್ರೇಮದ ಪಾಂಚಜನ್ಯ ಮೊಳಗಬೇಕು. ಈ ಸದಾಶಯವೇ ಭಾರತೀಯತೆ' ಶೀರ್ಷಿಕೆಯಾಗಿದೆ ಎಂದು ಮಾಹಿತಿ ನೀಡಿದರು.
ನವೆಂಬರ್ 13ರಂದು 'ಟಿಪ್ಪು ನಿಜ ಕನಸುಗಳು' ಎಂಬ ಕೃತಿ ಬಿಡುಗಡೆ ಮಾಡಲಾಗುವುದು. ನವೆಂಬರ್ 20ರಂದು 'ಟಿಪ್ಪು ನಿಜ ಕನಸುಗಳು' ನಾಟಕ ಪ್ರದರ್ಶನ ಮಾಡಲಾಗುತ್ತದೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಇದೇ ಸಮಯದಲ್ಲಿ ಮಾಹಿತಿ ನೀಡಿದ್ದಾರೆ. ಟಿಪ್ಪುವಿನ ಸತ್ಯ ವಿಚಾರಗಳನ್ನು ತಿಳಿಸುವ ಉದ್ದೇಶದಿಂದ ಕೃತಿ ರಚನೆ ಮಾಡಲಾಗಿದ್ದು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ, ಸಂಸದ ಪ್ರತಾಪ್ ಸಿಂಹ, ರೋಹಿತ್ ಚಕ್ರತೀರ್ಥ ಪಾಲ್ಗೊಳ್ಳುತ್ತಾರೆ. ನವೆಂಬರ್ 20ರಂದು 3 ಗಂಟೆ 20 ನಿಮಿಷದ ನಾಟಕ ಪ್ರದರ್ಶನ ಆಗಲಿದೆ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು.
ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ಸಂಚಾಲಕ ಜಗದೀಶ್ ಮಾನವಾರ್ತೆ ಸೇರಿದಂತೆ ಇತರರು ಇದ್ದರು.


Click it and Unblock the Notifications











