ರಮ್ಯಾ 'ನೀರ್ ದೋಸೆ'ಯಲ್ಲಿ ಮತ್ತೆ ಬದಲಾವಣೆ
ಅದು ನೀರ್ ದೋಸೆ ಆದರೂ ಅಷ್ಟೇ ಮಸಾಲೆ, ಸೆಟ್ ದೋಸೆ ಆದರೂ ಅಷ್ಟೇ. ಎಲ್ಲರ ಮನೆ ದೋಸೆನೂ ತೂತು. ಅಂದಹಾಗೆ ನಾವು ಈಗ ದೋಸೆ ಸಮಾಚಾರ ಮಾತನಾಡುತ್ತಿಲ್ಲ. ಗೋಲ್ಡನ್ ಗರ್ಲ್ ರಮ್ಯಾ ಅಭಿನಯಿಸುತ್ತಿರುವ ನೀರ್ ದೋಸೆ ಚಿತ್ರದಲ್ಲಿ ಇನ್ನೊಂದು ಮಹತ್ತರ ಬೆಳವಣಿಗೆಯಾಗಿದೆ.
ಈ ಚಿತ್ರದಲ್ಲಿ ಮತ್ತೊಬ್ಬ ಬೆಡಗಿ ಭಾವನಾ (ಮಲ್ಲು ಬೆಡಗಿ ಭಾವನಾ ಅಲ್ಲ) ಅಭಿನಯಿಸಲು ಒಪ್ಪಿಕೊಂಡಿದ್ದರು. ಈಗ ನೀರ್ ದೋಸೆ ಚಿತ್ರದಿಂದ ಅವರು ಹೊರಬಿದ್ದಿದ್ದಾರೆ. ತಾವು ನಿರೀಕ್ಷಿಸಿದಷ್ಟು ಸಂಭಾವನೆ ಸಿಗಲಿಲ್ಲ ಎಂದು ಅವರು ಚಿತ್ರದಿಂದ ಹೊರಹೋಗಿದ್ದಾರೆ ಎನ್ನಲಾಗಿದೆ.
ಭಾವನಾ ಅವರ ಜಾಗಕ್ಕೆ ಈಗ ಮತ್ತೊಬ್ಬ ಬೆಡಗಿ ಸುಮನ್ ರಂಗನಾಥ್ ಆಗಮನವಾಗುತ್ತಿದೆ. ರಮ್ಯಾ ಅಭಿನಯದ 'ಸಿದ್ಲಿಂಗು' ಚಿತ್ರದಲ್ಲಿ ಆಂಡಳಮ್ಮ ಟೀಚರ್ ಪಾತ್ರವನ್ನು ಸುಮನ್ ರಂಗನಾಥ್ ಪೋಷಿಸಿದ್ದರು. ಈಗ ಮತ್ತೊಮ್ಮೆ ರಮ್ಯಾ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.
ಇಷ್ಟಕ್ಕೂ ಚಿತ್ರದಲ್ಲಿ ಸುಮನ್ ರಂಗನಾಥ್ ಅವರ ಪಾತ್ರ ಏನು ಎತ್ತ ಎಂಬ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಇನ್ನು ಭಾವನಾ ಅವರ ವಿಚಾರಕ್ಕೆ ಬರುವುದಾರೆ ಈ ಹಿಂದೆಯೂ ಅವರು ಹಲವಾರು ಚಿತ್ರಗಳನ್ನು ಒಲ್ಲೆ ಎಂದಿದ್ದರು. ಅವುಗಳಲ್ಲಿ ಮುಖ್ಯವಾಗಿ 'ಎದೆಗಾರಿಕೆ' ಚಿತ್ರವನ್ನು ಹೆಸರಿಸಬಹುದು.
ನವರಸ ನಾಯಕ ಜಗ್ಗೇಶ್ ಅವರು ಚಿತ್ರದ ನಾಯಕ ನಟ. ಬಿ.ಎಸ್.ಸುಧೀಂದ್ರ ಹಾಗೂ ವಿ ಬಾಬು ಚಿತ್ರದ ನಿರ್ಮಾಪಕರು. 'ಸಿದ್ಲಿಂಗು' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ವಿಜಯ್ ಪ್ರಕಾಶ್ ಈ ಚಿತ್ರದ ನಿರ್ದೇಶಕರು. (ಏಜೆನ್ಸೀಸ್)


Click it and Unblock the Notifications











