ತಾಲಿಬಾನ್ ಅಟ್ಟಹಾಸ: ಅನಂತ್ ನಾಗ್ ಹೇಳಿಕೆ ಖಂಡಿಸಿದ ನಟ ಚೇತನ್
''ಭಾರತ ಸುರಕ್ಷಿತವಲ್ಲ ಎಂದು ಹೇಳಿದ್ದ ನಟರು ಅಫ್ಘಾನಿಸ್ತಾನಕ್ಕೆ ಹೋಗಲಿ, ಅಲ್ಲಿನ 'ಸ್ವರ್ಗ'ದಲ್ಲಿ ಆರಾಮವಾಗಿ ಜೀವನ ಮಾಡಲಿ'' ಎಂದು ಹಿರಿಯ ನಟ ಅನಂತ್ನಾಗ್ ಖಾಸಗಿ ಟಿವಿ ವಾಹಿನಿಯೊಂದರ ಜೊತೆ ಮಾತನಾಡಿದ ಸಂದರ್ಭದಲ್ಲಿ ಹೇಳಿದ್ದರು. ಅನಂತ್ ನಾಗ್ ಅವರ ಈ ಅಭಿಪ್ರಾಯದ ಬಗ್ಗೆ 'ಆ ದಿನಗಳು' ಖ್ಯಾತಿಯ ಚೇತನ್ ಕುಮಾರ್ ಟ್ವೀಟ್ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Recommended Video
ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಪಡಿಸಿಕೊಂಡಿದ್ದು, ನೂತನ ಸರ್ಕಾರ-ಕಾನೂನು ರಚಿಸುವ ತಯಾರಿ ನಡೆಸಿದ್ದಾರೆ. ಈ ನಡುವೆ ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ಭಯಭೀತಗೊಂಡ ಜನರು ತಪ್ಪಿಸಿಕೊಂಡು ಹೋಗುತ್ತಿದ್ದಾರೆ. ಯುಎಸ್, ಭಾರತ ಹಾಗೂ ಇನ್ನಿತರ ದೇಶಗಳು ಏರ್ಲಿಫ್ಟ್ ಮಾಡುವ ವೇಳೆ ಅಫ್ಘಾನಿಸ್ತಾನಿಯರು ವಿಮಾನಗಳನ್ನು ಹತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಾಲಿಬಾನ್ ಉಗ್ರರ ದೌರ್ಜನ್ಯಕ್ಕೆ ಅನೇಕರು ಪ್ರಾಣ ಕಳೆದುಕೊಂಡಿರುವ ಬಗ್ಗೆಯೂ ವರದಿಗಳಾಗಿವೆ. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಕನ್ನಡದ ಹಿರಿಯ ನಟ ಅನಂತ್ ನಾಗ್ ಪ್ರತಿಕ್ರಿಯಿಸಿದ್ದು, ಭಾರತದ ಸುರಕ್ಷಿತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದವರನ್ನು ಕುಟುಕಿದ್ದಾರೆ. ಅವರ ಮಾತಿಗೆ ಚೇತನ್ ಸ್ಪಂದಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಅನಂತ್ ಅಭಿಪ್ರಾಯಕ್ಕೆ ಆಕ್ಷೇಪ
''ಖ್ಯಾತ ಚಲನಚಿತ್ರ ನಟರಾದ ಅನಂತ್ ನಾಗ್ ರವರ ತಾಲಿಬಾನ್ ಕುರಿತು ಮಾತನಾಡಿದ ಸಂದರ್ಶನವನ್ನು ಈಗಷ್ಟೇ ನೋಡಿದೆ. ಇತಿಹಾಸ/ಭೌಗೋಳಿಕ ರಾಜಕೀಯದ ಬಗ್ಗೆ ಅವರ ಆಲೋಚನೆಗಳಲ್ಲಿ ಹಿಂಜರಿತ, ಸೀಮಿತ ಮತ್ತು ಪಂಥೀಯತೆ ಕಾಣುತ್ತವೆ.
ಅವರು ಹೇಳಿದರು: ಯಾವ '[ಭಾರತೀಯ] ನಟರು ಇಲ್ಲಿ ಸುರಕ್ಷತೆ ಇಲ್ಲ ಎಂದು ಭಾವಿಸುವವರು, ಅಲ್ಲಿ 'ಸ್ವರ್ಗ'ಕ್ಕೆ [ಅಫ್ಘಾನಿಸ್ತಾನ] ಹೋಗಬಹುದು'. ಸಹಿಷ್ಣುತೆಯು ಕ್ರೂರತೆಯನ್ನು ವಿಮರ್ಶಿಸುವುದು ವಿಪರ್ಯಾಸ'' ಎಂದು ಟೀಕಿಸಿದ್ದಾರೆ.

ಭಾರತದಲ್ಲಿ ಸುರಕ್ಷತೆ ಇಲ್ಲ ಎಂದಿದ್ದ ಅಮೀರ್ ಖಾನ್
ಈ ಹಿಂದೆ ಅಸಹಿಷ್ಣುತೆ ಬಗ್ಗೆ ಮಾತನಾಡುವ ವೇಳೆ ತನ್ನ ಪತ್ನಿ ಭಾರತದ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದರು. ''ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬುದು ನಮ್ಮ ಕುಟುಂಬದ ಅನುಭವಕ್ಕೂ ಬಂದಿದೆ. ಮಕ್ಕಳ ಭವಿಷ್ಯಕ್ಕಾಗಿ ಈ ದೇಶವನ್ನು ತೊರೆಯೋಣ ಎಂದು ಪತ್ನಿ ಕಿರಣ್ ರಾವ್ ನನ್ನಲ್ಲಿ ಹೇಳಿದ್ದರು'' ಎಂದು ಅಮೀರ್ ಖಾನ್ ಕಾರ್ಯಕ್ರಮವೊಂದರಲ್ಲಿ ವಿವರಿಸಿದ್ದರು. ಈ ಹೇಳಿಕೆ ನಂತರ ಅಮೀರ್ ಖಾನ್ ವಿರುದ್ಧ ಟೀಕೆಗಳು ವ್ಯಕ್ತವಾದವು. ದೇಶಬಿಟ್ಟು ಹೋಗಿ ಎಂದು ಅನೇಕರು ಕಿಡಿಕಾರಿದರು.
'ಗೆಳೆಯ' ಅಮೀರ್ ಖಾನ್ ಬಗ್ಗೆ ಶಾರುಖ್ ಹೇಳಿದ್ದೇನು?

ಅನಂತ್ ನಾಗ್ ಏನು ಹೇಳಿದರು?
ತಾಲಿಬಾನ್ ಉಗ್ರರ ಕೃತ್ಯಗಳ ಬಗ್ಗೆ ಟಿವಿ ಮಾಧ್ಯಮದ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ''ಇಲ್ಲಿ ಕೆಲವು ನಟರು ಹೇಳಿದ್ದಾರಲ್ಲ, ನಮಗೆ ಭದ್ರತೆ ಇಲ್ಲ, ಭಾರತದಲ್ಲಿ ಇರಲು ಭಯವಾಗ್ತಿದೆ ಅಂತ. ಅಂಥಹವರು ಆರಾಮವಾಗಿ ಅಫ್ಘಾನಿಸ್ತಾನಕ್ಕೆ ಹೋಗಿ ಅಲ್ಲಿರಬಹುದು'' ಎಂದು ನಟ ಅನಂತ್ನಾಗ್ ಕಾಲೆಳೆದರು. ಅನಂತ್ ನಾಗ್ ಅವರ ಈ ಮಾತು ಕೇಳಿದ ತಕ್ಷಣ ಮೊದಲು ನೆನಪಾಗಿದ್ದೇ ಅಮೀರ್ ಖಾನ್ ವಿವಾದ. ಕೇವಲ ಅಮೀರ್ ಮಾತ್ರವಲ್ಲ ಇನ್ನುಷ್ಟು ಸೆಲೆಬ್ರಿಟಿಗಳು ಭಾರತದ ಸುರಕ್ಷತೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವುದು ವರದಿಗಳಾಗಿವೆ.

ಮೋದಿ ನಾಯಕತ್ವದ ಮೇಲೆ ನಂಬಿಕೆ ಇದೆ
ಇದೇ ಸಂದರ್ಶನದಲ್ಲಿ ಮಾತನಾಡಿದ ಅನಂತ್ ನಾಗ್ ''ಇಂತಹ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಕೈಲಾದದನ್ನು ಮಾಡಬೇಕು ಅಂತಲೇ ಮೋದಿ ಅವರು ಎಲ್ಲರಿಗೂ ವೀಸಾ, ಮುಸಲ್ಮಾನರಿಗೆ 180 ದಿನದ ವೀಸಾ ಕೊಡುತ್ತೇವೆ ಎಂದು ಘೋಷಿಸಿದ್ದಾರೆ. ಹಾಗಾಗಿ ನಾವು ಆಶಾದಾಯಕವಾಗಿ ಇರೋಣ. ಇನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುವ ಸಾಧ್ಯತೆ ಖಂಡಿತ ಇದೆ ಆದರೆ ಈ ವಿಷಯ ನಮ್ಮ ಭದ್ರತಾ ಮುಖ್ಯಸ್ಥರಿಗೂ ತಿಳಿದಿದೆ ಅದಕ್ಕೆ ಸೂಕ್ತಕ್ರಮವನ್ನು ಅವರು ತೆಗೆದುಕೊಳ್ಳುತ್ತಾರೆ. ಹಿಂದೆ ಏನು ಆಗಬೇಕಾದದ್ದು ಆಗಿರಲಿಲ್ಲವೊ ಅದು ಮೋದಿ ಅವರ ನೇತೃತ್ವದಲ್ಲಿ ಆಗುತ್ತದೆ, ಮೋದಿ ಮಾಡಿ ತೋರಿಸುತ್ತಾರೆ ಎಂಬ ನಂಬಿಕೆ ನನ್ನದು'' ಎಂದಿದ್ದಾರೆ.


Click it and Unblock the Notifications











