ಕಿರುತೆರೆಯ ಮೇಲೆ ಕೊರೊನಾ ಎಫೆಕ್ಟ್: ನಿರ್ದೇಶಕ ಸೀತಾರಾಮ್ ವಿಶ್ಲೇಷಣೆ
ಕೊರೊನಾ ಪರಿಣಾಮ ಬೀರದ ಕ್ಷೇತ್ರವಿಲ್ಲ, ವ್ಯಕ್ತಿಯಿಲ್ಲ. ಪ್ರತಿಯೊಬ್ಬರೂ ಆತಂಕದಲ್ಲಿಯೇ ದಿನ ದೂಡುತ್ತಿದ್ದಾರೆ. ಸಿನಿಮಾ ಉದ್ಯಮವಂತೂ ಕೊರೊನಾ ಹೊಡೆತಕ್ಕೆ ಮಕಾಡೆ ಮಲಗಿದೆ. ಭರವಸೆಯ ಬೆಳಕೂ ಸಹ ಬಹುದೂರವೇ ಇದೆ. ಕಿರುತೆರೆಗೂ ಕೊರೊನಾ ದೊಡ್ಡ ಹೊಡೆತವನ್ನೇ ನೀಡಿದೆ. ಆದರೆ ಸರ್ಕಾರವು, ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶ ನೀಡಿದ ಕಾರಣ, ಕಿರುತೆರೆ ಚೇತರಿಕೆಯ ಹಾದಿಗೆ ಮರಳುವ ಸಾಧ್ಯತೆ ಇದೆ.
ಕೊರೊನಾ ಪರಿಣಾಮ ಕಿರುತೆರೆಯ ಮೇಲೆ ಹೇಗಾಗಬಹುದು? ಕೊರೊನಾ ನಂತರ ಕಿರುತೆರೆ ಎದುರಿಸಬಹುದಾದ ಸವಾಲುಗಳೇನು? ಎಂಬುದರ ಬಗ್ಗೆ ನಿರ್ದೇಶಕ ಟಿ.ಎನ್.ಸೀತಾರಾಮ್ ಫಿಲ್ಮೀಬೀಟ್ ಕನ್ನಡದೊಂದಿಗೆ ಮಾತನಾಡಿದ್ದಾರೆ.

ಆರೋಗ್ಯದ ಭಯ ಎಲ್ಲರಿಗೂ ಇದೆ: ಸೀತಾರಾಮ್
ಧಾರಾವಾಹಿಗಳ ಚಿತ್ರೀಕರಣಕ್ಕೆ ಅವಕಾಶವನ್ನೇನೋ ನೀಡಿದ್ದಾರೆ ಆದರೆ ಆರೋಗ್ಯದ ಭಯ ಎಲ್ಲರಿಗೂ ಇದೆ. ಸರ್ಕಾರ ವಿಧಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಿ ಚಿತ್ರೀಕರಣ ಮಾಡುವುದು ಸುಲಭವೂ ಅಲ್ಲ ಎನ್ನುತ್ತಾರೆ ಸೀತಾರಾಮ್.

'ಕಡಿಮೆ ಜನರೊಂದಿಗೆ ಚಿತ್ರೀಕರಣ ಬಹು ಕಷ್ಟ'
ಹತ್ತು-ಹನ್ನೆರಡು ಜನರನ್ನು ಮಾತ್ರವೇ ಇಟ್ಟುಕೊಂಡು ಧಾರಾವಾಹಿ ಚಿತ್ರೀಕರಿಸುವುದು ಬಹಳ ಕಷ್ಟ. ಮದುವೆಯೊಂದರ ದೃಶ್ಯವಿದೆ ಎಂದುಕೊಂಡರೆ ಅದನ್ನು ಚಿತ್ರೀಕರಿಸಲು ಸಾಧ್ಯವೇ? ಆ ದೃಶ್ಯವನ್ನೇ ತೆಗೆದು ಹಾಕಬೇಕಾಗುತ್ತದೆ, ಆದರೆ ಅದು ಕತೆಯೊಂದಿಗೆ ಮಾಡಿಕೊಳ್ಳುವ ಕಾಂಪ್ರಮೈಸ್ ಆಗುತ್ತದೆ ಅದು ಒಟ್ಟಾರೆ ಧಾರಾವಾಹಿ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಎಂದರು ಸೀತಾರಾಮ್.

ಕಿರುತೆರೆ ಕಲಾವಿದರು, ತಂತ್ರಜ್ಞರು ಸಂಕಷ್ಟದಲ್ಲಿದ್ದಾರೆ
ಕೊರೊನಾ ದಿಂದಾಗಿ ಕಿರುತೆರೆ ಕಲಾವಿದರು, ತಂತ್ರಜ್ಞರು ಬಹುವಾಗಿ ಬಾಧೆಗೀಡಾಗಿದ್ದಾರೆ. 60 ವರ್ಷ ಮೇಲ್ಪಟ್ಟವರು ಚಿತ್ರೀಕರಣದಲ್ಲಿ ಭಾಗವಹಿಸುವಂತಿಲ್ಲ ಎಂಬ ನಿಯಮ ಹಾಕಲಾಗಿದೆ, ಹಾಗಾದಲ್ಲಿ ಅವರ ಆರ್ಥಿಕ ಪರಿಸ್ಥಿತಿ ಹೇಗಾಗಬೇಡ. ಮುಖ್ಯ ಭೂಮಿಕೆಯ ನಟ-ನಟಿಯರೂ ಸಹ ತೊಂದರೆಗೆ ಸಿಲುಕಿದ್ದಾರೆ. ಜ್ಯೂನಿಯರ್ ಆರ್ಟಿಸ್ಟ್ಗಳು, ಪೋಷಕ ಪಾತ್ರಗಳ ನಟರಂತೂ ಬಹಳ ಸಮಸ್ಯೆಯಲ್ಲಿದ್ದಾರೆ ಎಂದರು ಸೀತಾರಾಮ್.

'ಭರವಸೆಯ ಬೆಳಕೂ ಇದೆ'
ಆದರೆ ಈ ಸಮಯದಲ್ಲಿ ಭರವಸೆಯ ಬೆಳಕೂ ಒಂದಿದೆ. ಸಿನಿಮಾ ಮಂದಿರಗಳು ಮುಚ್ಚಿರುವ ಮತ್ತು ಸಿನಿಮಾ ಮಂದಿರಗಳು ತೆರೆಯಲು ಇನ್ನೂ ಸಾಕಷ್ಟು ಸಮಯ ಇರುವ ಕಾರಣ ಜನ ಮನರಂಜನೆಗೆ ಕಿರುತೆರೆಗೆ ಹೆಚ್ಚು ಆತುಕೊಂಡಿದ್ದಾರೆ. ಹೆಚ್ಚು ಮಂದಿ ಟಿವಿ ನೋಡುವಂತಾಗಿದೆ. ಇದು ಕಿರುತೆರೆಗೆ ಕಂಟೆಂಟ್ ನೀಡುತ್ತಿರುವವರ ಜವಾಬ್ದಾರಿಯನ್ನೂ ಹೆಚ್ಚಿಸಿದೆ ಎಂದರು ಸೀತಾರಾಮ್.


Click it and Unblock the Notifications











