ಕೋಡಿ-ದಿಗಂತ್ ಜೋಡಿಗೆ ರಮ್ಯಾ ಗ್ರೀನ್ ಸಿಗ್ನಲ್
ತೆಲುಗು ಸೂಪರ್ ಹಿಟ್ ಚಿತ್ರ 'ಅರುಂಧತಿ' ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶಿಸಲಿರುವ ಕನ್ನಡ ಚಿತ್ರದಲ್ಲಿ ತಾವು ನಟಿಸಲಿರುವುದು ಪಕ್ಕಾ ಎಂಬುದನ್ನು ರಮ್ಯಾ ಸಾಕಷ್ಟು ಬಾರಿ ಹೇಳಿದ್ದಾರೆ. ಆದರೆ ಅದ್ಯಾಕೋ ರಮ್ಯಾ ಮಾತನ್ನು ಹೆಚ್ಚಿನ ಜನ ನಂಬುತ್ತಿಲ್ಲ. ಚಂದ್ರ ಚಿತ್ರಕ್ಕೆ ಕೈಕೊಟ್ಟಿದ್ದರಿಂದ ರಮ್ಯಾ ಮಾತನ್ನು ನಂಬುತ್ತಿಲ್ಲವೋ ಅಥವಾ ಚಿತ್ರತಂಡಕ್ಕೇ ರಮ್ಯಾ ಬಗ್ಗೆ ಇನ್ನೂ ನಂಬಿಕೆ ಬಂದಿಲ್ಲವೋ, ಒಟ್ಟಿನಲ್ಲಿ ರಮ್ಯಾ-ದಿಗಂತ್ ಜೋಡಿ ಹೆಚ್ಚು ಸುದ್ದಿಯಾಗಿಲ್ಲ.

ರಮ್ಯಾ 'ನೋ ಸಿಗ್ನಲ್' ನೀಡಿದ ನಂತರ ಚಂದ್ರಕ್ಕೆ ರಾಷ್ಟ್ರೀಯ ಖ್ಯಾತಿಯ ಶ್ರೀಯಾ ಸರನ್ ಆಗಮನವಾಗಿದೆ. ಆದರೆ ರಮ್ಯಾ ಮಾತ್ರ ಅದೇನೋ ಕಳೆದುಕೊಂಡಂತೆ ಚಡಪಡಿಸುತ್ತಿಲ್ಲ. ಬದಲಿಗೆ ಬರುತ್ತಿರುವ ಅವಕಾಶವನ್ನೂ ಅಳೆದು, ತೂಗಿ ಒಪ್ಪಿಕೊಳ್ಳುತ್ತಿದ್ದಾರೆ. ಜಾನಿ ಮೇರಾ ನಾಮ್-2 ಬಗ್ಗೆ ಆಫರ್ ಬಂದರೂ ಇನ್ನೂ ಒಪ್ಪಿಲ್ಲ ರಮ್ಯಾ. ಕಥೆ ಕೇಳಿದ ಮೇಲೆಯೇ ನಿರ್ಧಾರ ಎಂದಿದ್ದಾರೆ. ಆದರೆ ಕೋಡಿ ರಾಮಕೃಷ್ಣ ಚಿತ್ರಕ್ಕೆ ರಮ್ಯಾ ಡೇಟ್ಸ್ ಕೊಟ್ಟಿದ್ದಾರೆ.
ಜೂನ್ ತಿಂಗಳಲ್ಲಿ ಮುಹೂರ್ತ ಆಚರಿಸಿಕೊಂಡು ಚಿತ್ರೀಕರಣ ಪ್ರಾರಂಭಿಸುವ ಯೋಜನೆ ನಿರ್ದೇಶಕ ಕೋಡಿಯವರದು. ದಿಗಂತ್ ಕೂಡ ಲೈಫು ಇಷ್ಟೇನೆ ನಂತರ ಹಿಟ್ ಒಂದಕ್ಕೆ ಕಾಯುತ್ತಿದ್ದಾರೆ. ಕೋಡಿ ರಾಮಕೃಷ್ಣ ಸಿನಿಮಾ ಮ್ಯಾಜಿಕ್ ಬಗ್ಗೆ ಎಲ್ಲರಿಗೂ ಗೊತ್ತು. ಜೊತೆಯಲ್ಲಿ ಲಕ್ಕಿ ಸ್ಟಾರ್ ರಮ್ಯಾ ಬೇರೆ ಇದ್ದಾರೆ. ಹಾಗಾಗಿ ಪ್ರೇಕ್ಷಕರಿಗೂ, ಘೋಷಣೆಯಾಗಿರುವ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆಯಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











