ನನಗೇನು ಆಗಿಲ್ಲ ಕ್ಷೇಮವಾಗಿದ್ದೇನೆ: ಡಿಸ್ಕೋ ಶಾಂತಿ
"ಅನಾರೋಗ್ಯದ ನಿಮಿತ್ತ ನಟಿ ಡಿಸ್ಕೋ ಶಾಂತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಪರಿಸ್ಥಿತಿ ವಿಷಮಿಸಿದೆ. ಸದ್ಯಕ್ಕೆ ಅವರು ಸಿಂಗಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಸ್ವತಃ ಡಿಸ್ಕೋ ಶಾಂತಿ ಅವರು ಮಾಧ್ಯಮಗಳೊಂದಿಗೆ ಮುಖಾಮುಖಿಯಾಗಿ ತಮ್ಮ ಆರೋಗ್ಯ ಪರಿಸ್ಥಿತಿ ಬಗ್ಗೆ ವಿವರ ನೀಡಿದ್ದಾರೆ.
ಮುಖ್ಯವಾಗಿ ಇಂಟರ್ ನೆಟ್ ಮಾಧ್ಯಮಗಳಲ್ಲಿ ಡಿಸ್ಕೋ ಶಾಂತಿ ಅನಾರೋಗ್ಯದ ಬಗ್ಗೆ ನಾನಾ ತರಹದ ಸುದ್ದಿಗಳು ಹರಿದಾಡಿದ್ದವು. ಯಕೃತ್ತಿನ ಕಸಿ ಚಿಕಿತ್ಸೆಗಾಗಿ ಅವರು ಸಿಂಗಪುರದ ಆಸ್ಪತ್ರೆ ದಾಖಲಾಗಿದ್ದಾರೆ ಎಂಬ ಸುದ್ದಿಯೂ ಒಂದು. ಇವೆಲ್ಲವನ್ನೂ ಡಿಸ್ಕೋ ಶಾಂತಿ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. [ನಟಿ ಡಿಸ್ಕೋ ಶಾಂತಿ ಸಿಂಗಪುರ ಆಸ್ಪತ್ರೆಗೆ ದಾಖಲು]

"ನನಗೇನು ಆಗಿಲ್ಲ. ನಾನು ಕ್ಷೇಮವಾಗಿದ್ದೇನೆ" ಎಂದಿದ್ದಾರೆ. ತನ್ನ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಅವರು ಚೆನ್ನೈನ ತನ್ನ ಸಹೋದರಿ ನಿವಾಸದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ಮಾಧ್ಯಮಗಳೊಂದಿಗೆ ಮಾತನಾಡುತ್ತಾ, "ನನಗೆ ಜಾಂಡೀಸ್ ಕಾರಣದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು ನಿಜ. ಚಿಕಿತ್ಸೆಗಾಗಿ ಚೆನ್ನೈಗೆ ಬಂದಿದ್ದೇನೆ. ತನ್ನ ಸಹೋದರಿ ಲಲಿತಾ ಕುಮಾರಿ ಅವರ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದೇನೆ." ಎಂದು ವಿವರ ನೀಡಿದರು.
ಮಾಂಸಾಹಾರ ಸೇವಿಸಬಾರದು ಎಂದು ವೈದ್ಯರು ಸೂಚಿಸಿದ್ದರೂ ತೆಗೆದುಕೊಂಡ ಕಾರಣ ಪರಿಸ್ಥಿತಿ ಹೀಗಾಯಿತು. ಸದ್ಯಕ್ಕೆ ತಾನು ಆರೋಗ್ಯವಾಗಿದ್ದೇನೆ, ತನ್ನ ಪರಿಸ್ಥಿತಿಯೇನು ಚಿಂತಾಜನಕವಾಗಿಲ್ಲ. ಇಂಟರ್ ನೆಟ್ ನಲ್ಲಿ ತನ್ನ ಆರೋಗ್ಯದ ಬಗ್ಗೆ ಬಂದ ಸುದ್ದಿಯನ್ನು ಓದಿದ ನನ್ನ ಮಗ ಕೂಡಲೆ ಹೈದರಾಬಾದ್ ನಿಂದ ಕರೆ ಮಾಡಿದ್ದರು. ನನಗೇನು ಆಗಿಲ್ಲ ಎಂದು ಅವನಿಗೆ ಧೈರ್ಯ ತುಂಬಿದ್ದೆ ಎಂದಿದ್ದಾರೆ.


Click it and Unblock the Notifications











