ಕರ್ನಾಟಕ ಕರ್ಣನಿಗೆ ಹುಟ್ಟುಹಬ್ಬ ಶುಭಾಶಯಗಳು
ಕರ್ನಾಟಕದ ಕರ್ಣ, ಬಂಗಾರದ ಕಳಸ, ಸಿಂಹಾದ್ರಿಯ ಸಿಂಹ, ಸಾಹಸ ಸಿಂಹ, ಕರುನಾಡ ಜಮೀನ್ದಾರ್ರು, ಅಭಿನಯ ಭಾರ್ಗವ... ಮುಂತಾದ ಬಿರುದುಗಳನ್ನು ತಮ್ಮ ಅಭಿಮಾನಿ ದೇವರುಗಳಿಂದ ಪಡೆದ ಡಾ.ವಿಷ್ಣುವರ್ಧನ್ ಅವರ ಜನುಮ ದಿನ ಇಂದು.
ಯುಗ ಯುಗಳೇ ಸಾಗಲಿ ಡಾ.ವಿಷ್ಣುವರ್ಧನ್ ಅವರ ನೆನೆಪು ಶಾಶ್ವತ. ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಶಾಶ್ವತ ಸ್ಥಾನ ಪಡೆದ ಮಹಾನ್ ಕಲಾವಿದನಿಗೆ ಬುಧವಾರ (ಸೆ.18) 63ನೇ ಜನುಮ ದಿನ ಸಂಭ್ರಮ. ಇಂದು ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಅಭಿಮಾನಿಗಳ ಕಲರವ ಅಂಬರ ಚುಂಬಿಸುತ್ತಿದೆ.
ಕನ್ನಡ ಚಿತ್ರರಂಗದ 'ಯಜಮಾನ' ಇಂದು ಅಭಿಮಾನಿಗಳ ನಡುವೆ ಇಲ್ಲದಿದ್ದರೂ ಅವರ ಆಶೀರ್ವಾದ ಸದಾ ಕನ್ನಡ ಚಿತ್ರರಂಗದ ಮೇಲೆ ಸದಾ ಇದ್ದೇ ಇರುತ್ತದೆ. ಈ ಬಾರಿಯ ವಿಷ್ಣು ಹುಟ್ಟುಹಬ್ಬಕ್ಕೆ ಎಂದಿಗಿಂತಲೂ ಹೆಚ್ಚಾಗಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಕರ್ನಾಟಕದ ಗೌರವಾನ್ವಿತ ರಾಜ್ಯಪಾಲ ಹೆಚ್ ಆರ್ ಭಾವದ್ವಾಜ್ ಅವರು ಅಭಿಮಾನ್ ಸ್ಟುಡಿಯೋಗೆ ಆಗಮಿಸಿ ಹುಟ್ಟುಹಬ್ಬ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಾರಿಯೂ ಅಭಿಮಾನಿಗಳು ರಕ್ತದಾನ, ನೇತ್ರದಾನದಂತಹ ಹಲವಾರು ಕಾರ್ಯಕ್ರಗಳನ್ನು ಹಮ್ಮಿಕೊಂಡಿದ್ದಾರೆ.
ರೋಟರಿ ಇಂಟರ್ ನ್ಯಾಶನಲ್, ನಾರಾಯಣ ಹೆಲ್ತ್, ಪ್ರಾಜೆಕ್ಟ್ ದೃಷ್ಟಿ, ರಾಷ್ಟ್ರೋತ್ಥಾನ ಪರಿಷತ್ ನಂತಹ ಸರ್ಕಾರೇತರ ಸಂಘ ಸಂಸ್ಥೆಗಳು ಕೈ ಜೋಡಿಸಿದ್ದು ಉಚಿತ ಆರೋಗ್ಯ ತಪಾಸಣೆಯನ್ನೂ ಮಾಡಲಾಗುತ್ತಿದೆ. ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಅಭಿಮಾನ್ ಸ್ಟುಡಿಯೋಗೆ ಆಗಮಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












