ದುನಿಯಾ ಸೂರಿ 'ಕಡ್ಡಿಪುಡಿ' ಬಿಡುಗಡೆ ಮುಂದಕ್ಕೆ
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಕಡ್ಡಿಪುಡಿ ಚಿತ್ರ ಇದೇ ಮೇ 24ಕ್ಕೆ ತೆರೆಗೆ ಅಪ್ಪಳಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಕಡ್ಡಿಪುಡಿ ಒಂದು ವಾರ ತಡವಾಗುವ ಸಾಧ್ಯತೆಗಳಿವೆ ಎನ್ನುತ್ತವೆ ಮೂಲಗಳು. ಇದೇ ವಾರದಲ್ಲಿ ಸಾಕಷ್ಟು ಚಿತ್ರಗಳು ತೆರೆಕಾಣುತ್ತಿರುವುದೂ ಇದಕ್ಕೆ ಕಾರಣವಾಗಿರಬಹುದು.
ಈ ವಾರ ಮಾಲಾಶ್ರೀ ಅಭಿನಯದ ಎಲೆಕ್ಷನ್, ಲೂಸ್ ಮಾದ ಯೋಗೀಶ್ ಅಭಿನಯದ ಜಿಂಕೆಮರಿ ಹಾಗೂ ಮತ್ತೊಂದು ಚಿತ್ರ 'ಕಾವೇರಿನಗರ' ತೆರೆಗೆ ಜಿಗಿಯುತ್ತಿವೆ. ಈ ಎಲ್ಲಾ ಚಿತ್ರಗಳು ಕಡ್ಡಿಪುಡಿಗೆ ನೇರವಾಗಿ ಸ್ಪರ್ಧಿಯಲ್ಲದಿದ್ದರೂ. ಚಿತ್ರಮಂದಿರಗಳ ಕೊರತೆಯ ದೃಷ್ಟಿಯಿಂದ ಒಂದು ವಾರದ ಮಟ್ಟಿಗೆ ಮುಂದಕ್ಕೆ ಹಾಕಲಾಗಿದೆಯಂತೆ.
ಅರ್ಧ ಶತಕ, ಸೆಂಚುರಿ ಬಾರಿಸುವ ಚಿತ್ರಗಳ ಮೇಲೆ ಸೂರಿ ಅವರಿಗೆ ನಂಬಿಕೆ ಇಲ್ಲದಿದ್ದರೂ ಚಿತ್ರವೊಂದು ಲಾಭ ಮಾಡಿತೇ ಇಲ್ಲವೇ ಎಂಬುದಷ್ಟೇ ಅವರಿಗೆ ಮುಖ್ಯವಂತೆ. ಹಾಗಾಗಿ ಸೂರಿ ಅವರು ಈ ಬಾರಿ ಏನು ಮ್ಯಾಜಿಕ್ ಮಾಡಿದ್ದಾರೆ ಎಂಬ ಕುತೂಹಲ ಇದ್ದೇ ಇದೆ.
ಸ್ವಯಂವರ ಚಂದ್ರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಮುಂಗಾರುಮಳೆ' ಖ್ಯಾತಿಯ ಎಸ್ ಕೃಷ್ಣ ಅವರ ಛಾಯಾಗ್ರಹಣವಿದೆ. ರಂಗಾಯಣ ರಘು, ಅವಿನಾಶ್ ಹಾಗೂ ರೇಣು ಪ್ರಸಾದ್ ಅವರು ಪಾತ್ರವರ್ಗದಲ್ಲಿದ್ದಾರೆ. (ಏಜೆನ್ಸೀಸ್)


Click it and Unblock the Notifications












