ನಾಡಿನ ಸಮಸ್ತ ಜನತೆಯ ಕ್ಷಮೆಯಾಚಿಸಿದ ದುನಿಯಾ ವಿಜಿ
ಗಾಂಧಿ ಜಯಂತಿಯ ದಿನದಂದು ಅಭಿಮಾನಿಗಳ ಅತಿರೇಕದ ವರ್ತನೆಗೆ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ರಾಜ್ಯದ ಜನರ ಕ್ಷಮೆಯಾಚಿಸಿದ್ದಾರೆ. ನನ್ನ ಗಮನಕ್ಕೆ ಬರದೇ ಈ ಘಟನೆ ನಡೆದು ಹೋಗಿದೆ, ನಾನು ರಾಜ್ಯದ ಜನರ ಕ್ಷಮೆಯಾಚಿಸುತ್ತೇನೆಂದು ಹೇಳಿದ್ದಾರೆ.
ದುನಿಯಾ ವಿಜಯ್, ಸೌಂದರ್ಯ ಜಯಮಾಲ ಪ್ರಮುಖ ಭೂಮಿಕೆಯಲ್ಲಿರುವ 'ಸಿಂಹಾದ್ರಿ' ಚಿತ್ರ ರಾಜ್ಯಾದ್ಯಂತ ಗುರುವಾರ (ಅ 2) ತೆರೆಕಂಡಿತ್ತು. ದಾವಣಗೆರೆಯ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಈ ಸಿನಿಮಾ ಪ್ರದರ್ಶನಗೊಳ್ಳುತ್ತಿತ್ತು. ವಿಜಯ್ ಅಭಿಮಾನಿಗಳು ಅವರ ಕಟೌಟಿಗೆ ರಕ್ತಾಭಿಷೇಕ ನಡೆಸಿದ್ದು ವಿವಾದಕ್ಕೆ ಕಾರಣವಾಗಿತ್ತು. (ಸಿಂಹಾದ್ರಿ ಚಿತ್ರ ವಿಮರ್ಶೆ)

ಈ ಬಗ್ಗೆ ಮಾತನಾಡುತ್ತಾ ದುನಿಯಾ ವಿಜಯ್, ನಾನು ಸಿಂಹಾದ್ರಿ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯೂಸಿಯಾಗಿದ್ದರಿಂದ ಈ ಬಗ್ಗೆ ಗಮನ ಕೊಡಲಾಗಲಿಲ್ಲ. ಅಭಿಮಾನಿಗಳು ತಮ್ಮ 'ಅಭಿಮಾನ'ವನ್ನು ಪ್ರದರ್ಶಿಸುತ್ತಾರೆ. ಆದರೆ ರಕ್ತಾಭಿಷೇಕ ಮಾಡುವುದು ಮಾಡುವುದು ತಪ್ಪು. ನಾನು ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ ಎಂದಿದ್ದಾರೆ.
ಗಾಂಧಿ ಜಯಂತಿಯ ದಿನದಂದು ಪ್ರಾಣಿಬಲಿ, ಮಾಂಸ ಮಾರಾಟ ನಿಷೇಧದ ನಡುವೆ ವಿಜಯ್ ಅಭಿಮಾನಿಗಳು ಅವರ ಬೃಹತ್ ಕಟೌಟಿಗೆ ಕೋಳಿ ಕೊಯ್ದು ರಕ್ತಾಭಿಷೇಕ ಮಾಡಿದ್ದರು. ಅಖಿಲ ಕರ್ನಾಟಕ ವಿಜಯ್ ಅಭಿಮಾನಿಗಳ ಸಂಘಟನೆಯವರು ಎನ್ನಲಾದ ಕೆಲವು ಯುವಕರು ಆರು ಕೋಳಿಗಳನ್ನು ಬಲಿಕೊಟ್ಟು ಕಟೌಟಿಗೆ ರಕ್ತಾಭಿಷೇಕ ನಡೆಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಈ ಬಗ್ಗೆ ಸುದ್ದಿವಾಹಿನಿಯೊಂದರಲ್ಲಿ ಮಾತನಾಡುತ್ತಿದ್ದ ವಿಜಯ್, ಅಭಿಮಾನಿಗಳು ತಮ್ಮ ಪ್ರೀತಿಯನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸುತ್ತಾರೆ. ಕೆಲವರು ಹಾಲಿನ ಅಭಿಷೇಕ ಮಾಡುತ್ತಾರೆ, ಕೆಲವರು ಅನ್ನದಾನ ಮಾಡುತ್ತಾರೆ.
ಆದರೆ ರಕ್ತಾಭಿಷೇಕ ಮಾಡಿರುವುದು ನನಗೆ ಬೇಸರ ತಂದಿದೆ. ಆ ಸಂಘಟನೆಯವರ ಜೊತೆ ಮಾತುಕತೆ ನಡೆಸುತ್ತೇನೆ, ಈ ರೀತಿ ಪುನರಾವರ್ತಿಸಬೇಡಿ ಎಂದು ಮನವಿ ಮಾಡುತ್ತೇನೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ.


Click it and Unblock the Notifications











