ಪತ್ನಿ ಮತ್ತು ಮಗಳ ಒತ್ತಾಯಕ್ಕೆ ಡಾಕ್ಟರೇಟ್ ಸ್ವೀಕರಿಸಿದೆ- ಹಿರಿಯ ನಟ ಅನಂತ್ ನಾಗ್
ಕನ್ನಡ ಚಿತ್ರರಂಗದ ಮೇರು ನಟ, ಅಂದಿಗೂ ಇಂದಿಗೂ ಬೇಡಿಕೆಯ ಎವರೆ್ಗ್ರೀನ್ ನಟರಾಗಿರುವ ಅನಂತ್ ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಅನಂತ್ ನಾಗ್ ಅವರ ಚಿತ್ರರಂಗದ ಸೇವೆ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಅವರಿಗೆ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
ಬೆಂಗಳೂರಿನ ಭಾರತೀಯ ವಿದ್ಯಾ ಭವನದ ಬಿಂಚಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಾಗಿರುವ ಡಾ.ಸಿ.ಎನ್ ಅಶ್ವತ್ಥನಾರಾಯಣ್ ಅವರ ಸಮ್ಮುಖದಲ್ಲಿ ಅನಂತ್ ನಾಗ್ ಅವರಿಗೆ ಗೌರವ ಪದವಿಯನ್ನು ಪ್ರದಾನ ಮಾಡಲಾಗಿದೆ. ಈ ಕಾರ್ಯಕ್ರಮಲ್ಲಿ ಕರ್ನಾಟಕ ಫಿಲ್ಮಂ ಚೇಂಬರ್ ಅಧ್ಯಕ್ಷ ಭಾ.ಮಾ ಹರೀಶ್, ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ ,ಭಾರತೀಯ ವಿದ್ಯಾಭವನದ ನಿರ್ದೇಶಕ ಹೆಚ್.ಎನ್. ಸುರೇಶ್, ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿ ನಿರಂಜನ ವಾನಳ್ಳಿ ಅವರು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇನ್ನು ಕಾರ್ಯಕ್ರಮದಲ್ಲಿ ವಿಶೇಷವಾಗಿ, ಅನಂತ್ ನಾಗ್ ಅವರ ಪತ್ನಿ ಗಾಯತ್ರಿ, ಮಗಳು ಅದಿತಿ ಹಾಗೂ, ಅಳಿಯ ವಿವೇಕ್ ಭಾಗಿಯಾಗಿದ್ದರು. ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಅನಂತ್ ನಾಗ್ ಅವರು, ತಮ್ಮ ಬಾಲ್ಯದ ಜೀವನ, ಚಿತ್ರರಂಗದ ಜೀವನ ಹಾಗೂ ತಮ್ಮ ಅನುಭವಗಳ ಬಗ್ಗೆ ಮಾತನಾಡಿದರು.

ಅವಾರ್ಡ್, ಪ್ರಶಸ್ತಿ ವಿಚಾರವಾಗಿ ಅನೇಕರು ಸಂಪರ್ಕ ಮಾಡಲು ಪ್ರಯತ್ನಿಸಿದ್ದರು. ನನಗೆ ಪ್ರಶಸ್ತಿಗಳಲ್ಲಿ ಒಲವಿಲ್ಲ. ಯಾಕೆಂದರೆ ಈ ದೇಶದಲ್ಲಿ ಮೊದಲೆಲ್ಲಾ, ಈ ಪಕ್ಷ, ಆ ಪಕ್ಷ ಅಂತಿಲ್ಲ, ಎಲ್ಲಾ ಪಕ್ಷದಲ್ಲೂ ಲಾಬಿ, ಸ್ವಜನಪಕ್ಷಪಾತ ನಡೆಯುತ್ತಿತ್ತು. ಒಂದು ಹಂತದಲ್ಲಿ ಎಲ್ಲರೂ ಕೂಡ ಈ ಅವಾರ್ಡ್ಗಳು ಬೇಡ ಎಂದು ನಿರ್ಧರಿಸಿದ್ದರು. ಆದರೆ ಈ ಬಾರಿ ನಾನು ವಿದೇಶ ಪ್ರಯಾಣದಲ್ಲಿದ್ದಾಗ, ಈ ಸಂದೇಶ ಬಂದಿತ್ತು. ಜೊತೆಗೆ ಅಶ್ವತ್ಥ್ ನಾರಾಯಣ್ ಅವರ ಅಭಿನಂದನೆ ನೋಡಿದ ಮೇಲೆ ನನ್ನ ಪತ್ನಿ ಮತ್ತು ಮಗಳ ಒತ್ತಾಯ ಮಾಡಿದರು. ಹೀಗಾಗಿ ನಾನು ಈ ಪ್ರಶಸ್ತಿ ಪಡೆಯಲು ಒಪ್ಪಿದೆ ಎಂದರು.
ಇನ್ನು ತಮ್ಮ ಬಾಲ್ಯವನ್ನು ನೆನಪಿಸಿಕೊಂಡ ಅವರು, ನಾನು 8ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದೆ. ಹೊನ್ನಾವರ, ಉಡುಪಿ ಭಾಗಗಳಲ್ಲಿ ನಾನು ಕನ್ನಡ ಮಾಧ್ಯಮದಲ್ಲೇ ಓದಿದ್ದು, ಬಳಿಕ ಮುಂಬೈಗೆ ಹೋದೆ. ೮ ವರ್ಷ ಕನ್ನಡದಲ್ಲಿ ಕೇಳಿದ್ದ ವಿಷಯಗಳು ದಿಢೀರ್ ಕನ್ನಡದಲ್ಲಿ ಕೇಳಿ ಕಷ್ಟವಾಯಿತು. ಓದಿನಲ್ಲಿ ಹಿಂದೆ ಬಿದ್ದೆ, ಮೊದಲು ಫಸ್ಟ್ ಲೈನ್ನಲ್ಲಿ ಬರುತ್ತಿದ್ದವನು ಅಲ್ಲಿ ಲಾಸ್ಟ್ ಲೈನ್ನಲ್ಲಿ ಬರುತ್ತಿದೆ. ಬಳಿಕ ಹೇಗೋ ಅಲ್ಲಿ ಓದು ಮುಗಿಸಿದೆ. ನಮ್ಮ ಬಾಲ್ಯದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದವರ ಹೆಸರಿತ್ತು. ನಾನು ಮೊದಲು ನೋಡಿದ ಕನ್ನಡ ಚಿತ್ರ ರತ್ನಗಿರಿಯ ರಹಸ್ಯ ಎಂದು ತಮ್ಮ ಬಾಲ್ಯವನ್ನು ನೆನಪಿಸಿಕೊಂಡರು.
ಇನ್ನು ನನಗೆ ಇಂಥದ್ದೊಂದು ಗೌರವ ಸಿಗುವುದಕ್ಕೆ ಕಾರಣ ಕನ್ನಡ ಚಿತ್ರರಂಗ. ನನ್ನ ಮೊದಲ ಚಿತ್ರ ಮೈಸೂರಿನಲ್ಲೇ ನಡೆಯಿತು, ಸಿನಿಮಾಗಳನ್ನು ಮಾಡುತ್ತಾ ನನ್ನ ಮುಂದೆ ಸ್ಫೂರ್ತಿಯಾಗಿ ಡಾ.ರಾಜ್ಕುಮಾರ್ ಅವರು ಇದ್ದರು. ಸಂಪೂರ್ಣ ಕನ್ನಡ ಚಿತ್ರರಂಗವನ್ನು ಸ್ಥಾಪನೆ ಮಾಡುವಲ್ಲಿ ಡಾ.ರಾಜ್ಕುಮಾರ್ ಅವರ ಪಾತ್ರ ದೊಡ್ಡದು. ಡಾ.ರಾಜ್ಕುಮಾರ್ ಅವರು ಎಲ್ಲಾ ರೀತಿಯ ಸಿನಿಮಾಗಳನ್ನು ನೀಡಿದ್ದಾರೆ. ನಾನು ವೃತ್ತಿ ಜೀವನದ ಪ್ರತಿಹಂತದಲ್ಲೂ ಡಾ.ರಾಜ್ಕುಮಾರ್ ಅವನ್ನು ಹಿಂಬಾಲಿಸುತ್ತಿದ್ದೆ ಎಂದು ತಮ್ಮ ಕನ್ನಡ ಚಿತ್ರರಂಗದ ಜೀವನವನ್ನು ನೆನದರು. ಬಳಿಕ ತಮಗೆ ಗೌರವ ಡಾಕ್ಟರೇಟ್ ನೀಡಿದವರಿಗೆ ಧನ್ಯವಾದಗಳನ್ನು ಅರ್ಪಿಸಿದರು.


Click it and Unblock the Notifications











